ವಾಷಿಂಗ್ಟನ್: ತನ್ನ ದೇಶದ ಯೋಧರ ಮೇಲೆ ದಾಳಿಯಾದರೆ ಖಂಡಿತಾ ಭಾರತ ಮಾತ್ರ ಸುಮ್ಮನೆ ಕೂರುವುದಿಲ್ಲ ಎಂದು ಅಮೆರಿಕದ ಕಾನೂನು ತಜ್ಞರು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ಇಬ್ಬರು ಯೋಧರನ್ನು ಪಾಕಿಸ್ತಾನಿ ಯೋಧರು ಕೊಂದು ಶಿರಚ್ಛೇದ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಜನ ಪ್ರತಿನಿಧಿಗಳ ತಂಡವೊಂದು, ತನ್ನ ಯೋಧರ ಮೇಲೆ ದಾಳಿಯಾದರೆ ಖಂಡಿತಾ ಭಾರತ ಮಾತ್ರ ಸುಮ್ಮನೆ ಕೂರುವುದಿಲ್ಲ. ದಾಳಿ ಮಾಡಿದವರಿಗೆ ಪ್ರತ್ಯುತ್ತರ ನೀಡುವ ಸಾಮರ್ಥ್ಯ ಭಾರತಕ್ಕಿದೆ ಎಂದು ಹೇಳಿದ್ದಾರೆ.
ಅಮೆರಿಕದ ಹೌಸ್ ಡೆಮಾಕ್ರಟಿಕ್ ಕಾಕಸ್ ಸಂಸ್ಥೆಯ ನಿರ್ದೇಶಕರಾಗಿರುವ ಜೋ ಕ್ರೌವ್ಲಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಲ್ಲಿನ ಪರಿಸ್ಛಿತಿ ಗಂಭೀರವಾಗಿದೆ. ಪಾಕಿಸ್ತಾನದ ಆಶ್ರಯದಲ್ಲಿರುವ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆ ಹೆಚ್ಚಾಗಿದೆ. ಹೀಗಾಗಿ ಕೂಡಲೇ ಪಾಕಿಸ್ತಾನ ತನ್ನ ಗಡಿಭಾಗದಲ್ಲಿರುವ ಉಗ್ರರ ಅಡಗುದಾಣಗಳನ್ನು ನಾಶಪಡಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ಪಾಕಿಸ್ತಾನದ ಮೇಲೆ ಹೆಚ್ಚಿನ ಒತ್ತಡ ಹೇರುವಂತೆ ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಪಾಕಿಸ್ತಾನ ಕೂಡಲೇ ತನ್ನ ಗಡಿ ಭಾಗದಲ್ಲಿರುವ ಉಗ್ರರ ಅಡಗುದಾಣಗಳನ್ನು ನಾಶಪಡಿಸಬೇಕು. ಒಂದು ವೇಳೆ ಪಾಕಿಸ್ತಾನ ಇದಕ್ಕೆ ಹಿಂದೇಟು ಹಾಕಿದರೆ ಖಂಡಿತಾ ಭಾರತ ಆ ಕೆಲಸ ಮಾಡಬಹುದು. ಏಕೆಂದರೆ ತನ್ನ ಯೋಧರ ಮೇಲೆ ದಾಳಿಯಾದರೆ ಭಾರತ ಮಾತ್ರ ಕೈ ಕಟ್ಟಿಕೂರುವುದಿಲ್ಲ ಎಂದು ಜೋ ಕ್ರೌವ್ಲಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಗಡಿಯಲ್ಲಿ ಎದುರಾಗಿರುವ ಗಂಭೀರ ಪರಿಸ್ಥಿತಿಯನ್ನು ಎರಡೂ ರಾಷ್ಟ್ರಗಳ ಸ್ನೇಹಿತ ರಾಷ್ಟ್ರವಾಗಿರುವ ಅಮೆರಿಕ ಬಗೆಹರಿಸಬಹುದಾಗಿದೆ ಎಂದೂ ಕ್ರೌವ್ಲಿ ಸಲಹೆ ನೀಡಿದ್ದಾರೆ.
Advertisement