ಕಠ್ಮಂಡು: ನೇಪಾಳದೊಂದಿಗಿನ ವ್ಯಾಪಾರ ವಹಿವಾಟಿಗೆ ಭಾರತ ನಿರ್ಬಂಧ ವಿಧಿಸಿಲ್ಲ ಎಂದು ನೇಪಾಳದಲ್ಲಿರುವ ಭಾರತದ ರಾಯಭಾರಿ ರಂಜಿತ್ ರೇ ಸ್ಪಷ್ಟಪಡಿಸಿದ್ದಾರೆ.
ನೇಪಾಳಕ್ಕೆ ತೆರಳಬೇಕಿದ್ದ ಸರಕು ತುಂಬಿದ ಟ್ರಕ್ ಗಳನ್ನು ಭಾರತದ ಗಡಿ ಪ್ರದೇಶದಲ್ಲೇ ತಡೆಹಿಡಿಯಲಾಗಿದ್ದರಿಂದ ನೇಪಾಳದಲ್ಲಿರುವ ಭಾರತದ ರಾಯಭಾರಿಯಿಂದ ಅಲ್ಲಿನ ಸರ್ಕಾರ ಸ್ಪಷ್ಟನೆ ಕೇಳಿತ್ತು. ಸಭೆಯಲ್ಲಿ ಭಾಗವಹಿಸಿದ್ದ ರಾಯಭಾರಿ ರಂಜಿತ್ ರೇ, ನೇಪಾಳದಲ್ಲಿ ಹೊಸ ಸಂವಿಧಾನದ ಘೋಷಣೆಗೆ ವಿರೋಧ ವ್ಯಕ್ತಪಡಿಸಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಸರಕು ತುಂಬಿದ ಟ್ರಕ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ನೇಪಾಳದೊಂದಿಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ಉದ್ದೇಶ ಭಾರತಕ್ಕಿಲ್ಲ. ನೇಪಾಲದಲ್ಲಿ ನಡೆಯುತ್ತಿರುವ ಪ್ರತಿಭಟನೆ ಶೀಘ್ರವೇ ನಿಯಂತ್ರಣಕ್ಕೆ ಬರಲಿದೆ ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ. ಹೊಸ ಸಂವಿಧಾನದಲ್ಲಿನ ಕೆಲ ಅಂಶಗಳನ್ನು ವಿರೋಧಿಸಿ ನೇಪಾಳದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ವಿಶ್ವಸಂಸ್ಥೆ ಅಧಿವೇಶನಕ್ಕೆ ತೆರಳಬೇಕಿತ್ತಾದರೂ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಅದು ಸಾಧ್ಯವಾಗಿಲ್ಲ. ಕೊಯಿರಾಲ ಬದಲಿಗೆ ಉಪಪ್ರಧಾನಿ ಪ್ರಕಾಶ್ ಮಾನ್ ಸಿಂಗ್ ವಿಶ್ವಸಂಸ್ಥೆ ಅಧಿವೇಶನದಲ್ಲಿ ನೇಪಾಳವನ್ನು ಪ್ರತಿನಿಧಿಸಲಿದ್ದಾರೆ.
Advertisement