ಕರಾಳ ದಿನ ಪ್ರತಿಭಟನೆ ಹತ್ತಿಕ್ಕಲು ಮೃಗಗಳಂತೆ ವರ್ತಿಸಿದ ಪಾಕ್ ಸೇನೆ!
ಮುಜಾಫರ್ನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಕ್ಟೋಬರ್.22 ರಂದು ನಡೆದ ಕರಾಳ ದಿನ ಪ್ರತಿಭಟನೆಯನ್ನು ಹತ್ತಿಕ್ಕುವ ಪಾಕಿಸ್ತಾನ ಸೇನೆಯ ನಡೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅಂದಿನ ಅವಿಭಜಿತ ಕಾಶ್ಮೀರ ಅರಸೊತ್ತಿಗೆ ಮೇಲೆ ಪಠಾಣರ ಹೆಸರಲ್ಲಿ ಪಾಕಿಸ್ತಾನ ಸೇನೆ ಮಾಡಿದ ದಾಳಿಯನ್ನು ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರಿ ಪ್ರಜೆಗಳು ಅ.22ರಂದು ಕರಾಳ ದಿನವನ್ನು ಆಚರಣೆ ಮಾಡಿದ್ದರು. ಈ ವೇಳೆ ಪ್ರತಿಭಠನೆ ಹತ್ತಿಕ್ಕುವ ಸಲುವಾಗಿ ಪಾಕಿಸ್ತಾನ ಸೇನೆ ಪ್ರತಿಭಟನಾಕಾರರೊಡನೆ ಮೃಗಗಳಂತೆ ವರ್ತಿಸಿದ್ದಾರೆ.
ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನ ಸೇನೆ ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ. ಸಿಕ್ಕ ಸಿಕ್ಕವರನ್ನು ಬಂಧನಕ್ಕೊಳಪಡಿಸಿದೆ.
ಪಾಕಿಸ್ತಾನ ಸೇನೆಯ ಈ ವರ್ತನೆಗೆ ಇದೀಗ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ನೂರಕ್ಕೂ ಹೆಚ್ಚು ಮಂದಿ ಇದೀಗ ಪಾಕಿಸ್ತಾನ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದೆ. ಪ್ರತಿಭಟನೆ ವೇಳೆ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಗಳು ಭಾರತದ ಗಡಿ ಪ್ರವೇಶಿಸಲು ಯತ್ನ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಭಿಂಬರ್, ಕೊಟ್ಲಿ, ಮುಜಾಫರಾಬಾದ್, ಮೀರ್ಪುರ ಮತ್ತು ಇನ್ನಿತರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಜೆಗಳು ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ, ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಈಗಾಗಲೇ ಲಾಠಿ ಚಾರ್ಜ್ ಮಾಡಿದ್ದು, ಸಾಕಷ್ಟು ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ದಾಳಿಯನ್ನು ಮಾಡಿದ್ದಾರೆಂದು ತಿಳಿದುಬಂದಿದೆ.
ಇದಲ್ಲದೆ, ಪ್ರತಿಭಟನಾಕಾರರು ಪಾಕಿಸ್ತಾನ ಸರ್ಕಾರ ವಿರುದ್ಧ ಕಿಡಿಕಾರಿದ್ದು, ಕಾಶ್ಮೀರದಲ್ಲಿರುವ ಪಾಕಿಸ್ತಾನ ಸೇನೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದೆ.
ಪಾಕಿಸ್ತಾನ ದೇಶ ಶ್ರೀನಗರ ಮತ್ತು ದೆಹಲಿ ಬಗ್ಗೆ ಮಾತನಾಡುತ್ತಿದೆ. ಆದರೆ, ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಗುತ್ತಿರುವುದಾದರೂ ಎನು? ಇಲ್ಲಿರುವ ಜನರಿಗೆ ತಿನ್ನಲು, ಕುಡಿಯಲು ಆಹಾರ ಸಿಗುತ್ತಿಲ್ಲ ಎಂದು ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ ಹೇಳಿಕೊಂಡಿದೆ.
ಈ ರೀತಿಯ ಸ್ವಾತಂತ್ರ್ಯದ ಮೇಲೆ ನಮಗೆ ನಂಬಿಕೆಯಿಲ್ಲ. ತನ್ನ ಸ್ವಂತ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ. ಪಾಕಿಸ್ತಾನ ಮೊದಲು ತಾನೇ ಜೀವಕೊಟ್ಟ ಭಯೋತ್ಪಾದನೆಯನ್ನು ಮಟ್ಟಹಾಕಬೇಕಿದೆ. ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು ಎಲ್ಲಿಯೇ ಹೋದರೂ ಅಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ರಹೀಲ್ ಶರೀಫ್ ಅವರು ಇದ್ದೇ ಇರುತ್ತಾರೆ ಎಂದು ಪ್ರತಿಭಟನಾನಿರತರು ಹೇಳುತ್ತಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲಿನ ಪ್ರಜೆಗಳು ನಡೆಸುತ್ತಿರುವ ಈ ಪ್ರತಿಭಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನ ಸರ್ಕಾರದ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ.