ಕೆಲ ದಿನಗಳ ಹಿಂದಷ್ಟೇ ಡೋಕ್ಲಾಮ್ ವಿವಾದ ಸಂಬಂಧ ಸಂಸತ್ತಿನಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಭಾರತ-ಚೀನಾ ನಡುವಿನ ಗಡಿ ವಿವಾದಕ್ಕೆ ಯುದ್ಧವೇ ಪರಿಹಾರವಲ್ಲ. ಪರಸ್ಪರ ಮಾತುಕತೆಯ ಪರಿಹಾರ. ಒಂದು ವೇಳೆ ಯುದ್ಧ ಸಂಭವಿಸಿದರೂ ಮತ್ತೆ ಶಾಂತಿ, ಸೌಹಾರ್ದ ಸ್ಥಾಪನೆಗೆ ಮಾತುಕತೆಯೇ ಮುಖ್ಯವಾಗುತ್ತದೆ. ಯಾವುದೇ ಸಮಸ್ಯೆಗಳನ್ನು ನಿವಾರಿಸಲು ತಾಳ್ಮೆ ಮುಖ್ಯವಾಗಿದ್ದು, ಒಂದು ವೇಳೆ ತಾಳ್ಮೆ ಕಳೆದುಕೊಂಡರೆ ಇನ್ನೊಂದು ಕಡೆಯಿಂದ ಪ್ರಚೋದನಾತ್ಮಕ ನಡೆ ಉಂಟಾಗಬಹುದು. ಹೀಗಾಗಿ ತಾಳ್ಮೆ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಚೀನಾ ರಕ್ಷಣಾ ಸಚಿವಾಲಯ, ಡೋಕ್ಲಾಮ್ ವಿವಾದದಲ್ಲಿ ಚೀನಾ ಗರಿಷ್ಟ ಸಂಯಮವನ್ನು ತೋರಿಸಿದೆ. ಆದರೆ, ಇದೀಗ ನಮ್ಮ ತಾಳ್ಮೆಯ ಕಟ್ಟೆಯೊಡೆದಿದೆ. ಭಾರತ ಇನ್ನು ತಿಳಿಯಬೇಕಿದ್ದು, ಮೊದಲು ಡೋಕ್ಲಾಮ್ ನಿಂದ ತನ್ನ ಸೇನಾಪಡೆಗಳನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದೇ ಹೋದರೆ, ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಬಳಿಕ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆಯವರು, ಡೋಕ್ಲಾಮ್ ಬಿಕ್ಕಟ್ಟು ಪರಿಹಾರಕ್ಕೆ ಚೀನಾದೊಂದಿಗೆ ರಾಜತಾಂತ್ರಿಕವಾಗಿ ಸಂಪರ್ಕದಲ್ಲಿದ್ದು, ಭೂತಾನ್ ಜತೆಗೂ ಸಹಕಾರದಿಂದಿದ್ದು ಪರಸ್ಪರ ಒಪ್ಪಿಗೆಯಾಗುವ ಪರಿಹಾರ ಹುಡುಕಲು ಪ್ರಯತ್ನಿಸಲಾಗುತ್ತಿದೆ. ಬಿಕ್ಕಟ್ಟನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಸ್ಪರ ಸ್ವೀಕಾರಾರ್ಹ ಮಾರ್ಗದಲ್ಲಿ ಬಗೆಹರಿಸು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದ್ದರು.