ಎಲ್ಇಟಿ, ಜೆಇಎಂ ನಮ್ಮ ಮಣ್ಣಿನಲ್ಲಿದೆ, ಇದರಲ್ಲಿ ಆಶ್ಚರ್ಯ ಪಡುವಂತಹದ್ದೇನಿದೆ?: ಸತ್ಯ ಒಪ್ಪಿಕೊಂಡ ಪಾಕಿಸ್ತಾನ

ಭಯೋತ್ಪಾದನೆ ಕುರಿತಂತೆ ಸದಾಕಾಲ ಹಸಿ ಸುಳ್ಳು ಹೇಳುತ್ತಿದ್ದ ಪಾಕಿಸ್ತಾನ, ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಭಯೋತ್ಪಾದನೆ ಕುರಿತಂತೆ ಸದಾಕಾಲ ಹಸಿ ಸುಳ್ಳು ಹೇಳುತ್ತಿದ್ದ ಪಾಕಿಸ್ತಾನ, ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದೆ. 
ಚೀನಾದಲ್ಲಿ ನಡೆದ 9ನೇ ಬ್ರಿಕ್ಸ್ ಸಮ್ಮೇಳನದಲ್ಲಿ ತೀವ್ರ ಮುಖಭಂಗ ಆಗುತ್ತಿದ್ದಂತೆಯೇ ಸತ್ಯ ಬಾಯ್ಬಿಟ್ಟಿರುವ ಪಾಕಿಸ್ತಾನ ವಿದೇಶಾಂಗ ಸಚಿವರು ಖ್ವಾಜಾ ಆಸೀಫ್ ಅವರು, ಲಷ್ಕರ್-ಇ-ತೊಯ್ಬಾ, ಜೈಶ್-ಇ-ಮೊಹಮ್ಮದ್ ನಮ್ಮ ಮಣ್ಣಿನದ್ದೇ. ಇದರಲ್ಲಿ ಆಶ್ಚರ್ಯ ಪಡುವಂಹತದ್ದೇನಿದೆ ಎಂದು ಹೇಳಿದ್ದಾರೆ. 
ಪಾಕಿಸ್ತಾನದ ಸುದ್ಧಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಇದರಲ್ಲಿ ಆಶ್ಚರ್ಯಪಡುವಂತಹದ್ದೇನಿದೆ? ನಿಷೇಧಕ್ಕೊಳಗಾಗಿರುವ ಎರಡೂ ಉಗ್ರ ಸಂಘಟನೆಗಳು ಪಾಕಿಸ್ತಾನದ ಮಣ್ಣಿನದ್ದೇ. ನಿಷೇಧಿತ ಸಂಘಟನೆಗಳ ವಿರುದ್ಧ ಮೂರು ವರ್ಷಗಳಿಂದಲೂ ನಾವು ಹೋರಾಟ ಮಾಡುತ್ತಿದ್ದೇವೆ. ಮಿತ್ರರಾಷ್ಟ್ರ ಚೀನಾ ಪ್ರತೀ ಬಾರಿ ನಮ್ಮನ್ನು ಪರೀಕ್ಷಿಸಬಾರದು. ಇದರ ಬದಲಾಗಿ ಎರಡೂ ಉಗ್ರ ಸಂಘಟನೆಗಳ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಿ. ಇದರಿಂದ ವಿಶ್ವ ಸಮುದಾಯದೆದುರು ನಾವು ಕೂಡ ನಮ್ಮ ದೇಶವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇವೆಂಬುದನ್ನು ತೋರಿಸಲು ಸಹಾಯಕವಾಗುತ್ತದೆ. 
ಪ್ರತೀ ಬಾರಿಯೂ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ವಿಚಾರ ಬಂದಾಗ ನಮ್ಮ ದೇಶದ ಮೇಲೆಯೇ ಬೆಟ್ಟು ಮಾಡಲಾಗುತ್ತದೆ. ಇದರಿಂದ ಇಡೀ ಚಿತ್ರಣವೇ ಬದಲಾಗುತ್ತಿದೆ. ಜಾಗತಿಕ ಸಮುದಾಯದ ಮುಂದೆ ಪಾಕಿಸ್ತಾನ ತನ್ನ ಚಿತ್ರಣವನ್ನು ಬದಲಿಸಿಕೊಳ್ಳಬೇಕಾದೆ. ನಮ್ಮ ಹಿಂದಿನ ನೀತಿಗಳನ್ನು ಮಾರ್ಪಾಡು ಮಾಡಬೇಕಾಗಿದೆ. ಐತಿಹಾಸಿಕ ಪ್ರಮಾದಗಳನ್ನು ಒಪ್ಪಿಕೊಳ್ಳದ ಹೊರತು ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ವಿಚಾರದಲ್ಲಿ ರಾಜಕೀಯವಾಗಿ ಹೇಳಿಕೆ ನೀಡಲು ಇಚ್ಛಿಸುವುದಿಲ್ಲ. ಇಂತಹ ಮುಜುಗರಗಳನ್ನು ದೂರಾಗಿಸಲು ನಿಷೇಧಿತ ಉಗ್ರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 
ಜಾಗತಿಕ ಸಮುದಾಯದ ಮುಂದೆ ಪಾಕಿಸ್ತಾನ ತನ್ನ ಇಮೇಜ್‌ ಬದಲಿಸಿಕೊಳ್ಳಬೇಕಾಗಿದೆ. ನಮ್ಮ ಹಿಂದಿನ ನೀತಿಗಳನ್ನು ಮಾರ್ಪಾಡು ಮಾಡಬೇಕಾಗಿದೆ. ಐತಿಹಾಸಿಕ ಪ್ರಮಾದಗಳನ್ನು ಒಪ್ಪಿಕೊಳ್ಳದ ಹೊರತು ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಆಗುವುದಿಲ್ಲ ಎಂದು ಆಸೀಫ್ ಹೇಳಿದ್ದಾರೆ.
ಪಾಕಿಸ್ತಾನ ಮಣ್ಣನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಇದೇ ವೇಳೆ ತಳ್ಳಿಹಾಕಿರುವ ಅವರು, ಭಯೋತ್ಪಾದನೆಯೊಂದಿಗೆ ಪಾಕಿಸ್ತಾನ ಏನನ್ನೂ ಮಾಡಲು ಸಾಧ್ಯವಿಲ್ಲ. ಇದನ್ನು ವಿಶ್ವಕ್ಕೆ ಹೇಳಲು ಇಚ್ಛಿಸುತ್ತೇವೆಂದಿದ್ದಾರೆ. 
ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಒಪ್ಪಿಕೊಳ್ಳಲು ಈ ಹಿಂದೆ ಹಲವು ಬಾರಿ ವಿರೋಧ ವ್ಯಕ್ತಪಡಿಸಿದ್ದ ಚೀನಾ, ಕ್ಸಿಯಾಮನೆನ್ ನಲ್ಲಿ ಮೂರು ದಿನಗಳ ಕಾಲ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಭಾರತದ ಪರವಾಗಿ ನಿಂತಿತ್ತು. 
ಉಗ್ರರ ವಿರುದ್ಧದ ಒಗ್ಗಟ್ಟಿನ ಹೋರಾಟ ಅನಿವಾರ್ಯ ಎನ್ನುವುದನ್ನು ಕೊನೆಗೂ ಅರಿತ ಚೀನಾ, ತಾಲಿಬಾನ್, ಅಲ್ ಖೈದಾ, ಎಲ್ಇಟಿ, ಜೆಇಎಂ ಮುಂತಾದ ಉಗ್ರ ಸಂಘಟನೆಗಳ ವಿರುದ್ಧ ಒಗ್ಗಟ್ಟಿನ ಹೋರಾಟದ ಘೋಷಣಾ ಪತ್ರಕ್ಕೆ ಬ್ರಿಕ್ಸ್ ಸಮಾವೇಶದಲ್ಲಿ ಸಹಿ ಹಾಕಿತ್ತು. 
ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪಾಕಿಸ್ತಾನದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದರು. ಪಾಕಿಸ್ತಾನ ಉಗ್ರರನ್ನು ರಕ್ಷಣೆ ಮಾಡುವ ಮೂಲಕ ಅರಾಜಕತೆಯನ್ನು ಸೃಷ್ಟಿಸಿಕೊಂಡಿದೆ. ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಅಮೆರಿಕ ಬದ್ಧವಾಗಿದ್ದು, ಭಾರತವು ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸುತ್ತಿದೆ. ನಾವು ಪಾಕಿಸ್ತಾನಕ್ಕೆ ಸಾಕಷ್ಟು ಹಣಕಾಸು ನೆರವು ನೀಡಿದರೂ ಆ ದೇಶ ನಮ್ಮ ವಿರುದ್ಧವೇ ಉಗ್ರರನ್ನು ಎತ್ತಿಕಟ್ಟುತ್ತಿದೆ. ಕೂಡಲೇ ಪಾಕಿಸ್ತಾನ ತನ್ನ ನೀತಿಗಳನ್ನು ಬದಲಿಸಿಕೊಂಡು ಭಯೋತ್ಪಾದಕ ಸಂಘಟನೆಗಳ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಎಂದು ಎಚ್ಚರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com