ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಿಮ್-ಟ್ರಂಪ್ ಭೇಟಿಯಾಗುವಾಗ ಬೇರೆಯವರಿಗೆ ಯಾಕೆ ಅಸಾಧ್ಯ: ಸಾರ್ಕ್ ಕುರಿತು ನೇಪಾಳ ಹೇಳಿಕೆ

ಬೇರೆಯವರೂ ಕೂಡ ಚರ್ಚೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ನೇಪಾಳ ಪರೋಕ್ಷವಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳಿಗೆ ಕಿವಿಮಾತು ಹೇಳಿದೆ.
Published on
ಕಠ್ಮಂಡು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಂತಹವರೇ ಭೇಟಿಯಾಗಿ ಚರ್ಚೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸುತ್ತಿರುವಾಗ ಬೇರೆಯವರೂ ಕೂಡ ಚರ್ಚೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ನೇಪಾಳ ಪರೋಕ್ಷವಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳಿಗೆ ಕಿವಿಮಾತು ಹೇಳಿದೆ.
ಪ್ರಮುಖವಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಶೀಥಲ ಸಮರದಿಂದಾಗಿ ಸ್ಥಗಿತವಾಗಿರುವ ಸಾರ್ಕ್ ಸಮ್ಮೇಳನವನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಅವರು, ಸೌಹಾರ್ಧ ಚರ್ಚೆಗಳಿಂದ ಕಠಿಣ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳಬಹುದು. ಇದಕ್ಕೆ ಕಳೆದ ವರ್ಷ ನಡೆದ ಕಿಮ್ ಜಾಂಗ್ ಉನ್ ಮತ್ತು ಡೊನಾಲ್ಡ್ ಟ್ರಂಪ್ ಐತಿಹಾಸಿಕ ಭೇಟಿಯೇ ಸಾಕ್ಷಿ ಎಂದು ಹೇಳಿದರು. ಅಂತೆಯೇ ಇದೇ ನಿಟ್ಟಿನಲ್ಲಿ ಪಾಕಿಸ್ತಾನ ಸಾರ್ಕ್ ಸಮ್ಮೇಳನ ಕೂಡ ಯಶಸ್ವಿಯಾಗಲಿದೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಈ ಬಾರಿಯ ಸಾರ್ಕ್ ಸಮ್ಮೇಳನ ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ಸರ್ಕಾರದ ವತಿಯಿಂದ ಸಚಿವರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಅದರೆ ಭಯೋತ್ಪಾದನೆ ವಿಚಾರವಾಗಿ ಪಾಕಿಸ್ತಾನದೊಂದಿಗಿನ ಶೀಥಲ ಸಮರ ಮುಂದುವರೆದಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ಶೃಂಗಸಭೆಗೆ ಗೈರಾಗುವ ಸಾಧ್ಯತೆ ಇದೆ. ಅಂತೆಯೇ ಸಾರ್ಕ್ ಸಮ್ಮೇಳನದಲ್ಲಿ ಭಾರತ ಮತ್ತು ಪಾಕಿಸ್ತಾನದ ಸಚಿವರು ಪರಸ್ಪರ ಭೇಟಿ ಕೂಡ ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ.
2016ರಲ್ಲೂ ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಸಾರ್ಕ್ ಶೃಂಗಸಭೆ ಆಯೋಜನೆಯಾಗಿತ್ತು. ಆದರೆ ಕಾಶ್ಮೀರ ಸೇನಾ ಶಿಬಿರದ ಮೇಲೆ ಉಗ್ರ ದಾಳಿಯಾದ ಪರಿಣಾಮ ಶೃಂಗಸಭೆಯಿಂದ ಭಾರತ ದೂರ ಉಳಿದಿತ್ತು. ಭಾರತದ ನಿರ್ಧಾರ ಘೋಷಣೆಯಾದ ಬೆನ್ನಲ್ಲೇ ಭೂತಾನ್,ಬಾಂಗ್ಲಾದೇಶ, ಆಫ್ಘಾನಿಸ್ತಾನ ದೇಶಗಳೂ ಕೂಡ ಶೃಂಗಸಭೆಯಿಂದ ಹಿಂದೆ ಸರಿದಿದ್ದವು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com