ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಲಾಂಚ್ ಪ್ಯಾಡ್ ಗಳನ್ನು ಗುರಿಯಾಗಿಟ್ಟುಕೊಂಡು ಭಾರತ ದಾಳಿ ನಡೆಸಿದೆ ಎಂಬ ಭಾರತೀಯ ಮಾಧ್ಯಮಗಳ ವರದಿಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ಪಾಕಿಸ್ತಾನ ಭಾರತೀಯ ರಾಯಭಾರಿ ಗೌರವ್ ಅಹ್ಲುವಾಲಿಯಾ ಅವರಿಗೆ ಪಾಕಿಸ್ತಾನ ಸಮನ್ಸ್ ನೀಡಿದೆ.
ನಿನ್ನೆ ಮತ್ತು ಮೊನ್ನೆ ಶನಿವಾರ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಜುರಾ, ಶಾಹಕೋಟ್ ಮತ್ತು ನೌಶ್ರಿ ಕ್ಷೇತ್ರಗಳಲ್ಲಿ ಭಾರತೀಯ ಸೇನೆ ಅಪ್ರಚೋದಿತ ಕದನವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ ಎಂದು ಪಾಕಿಸ್ತಾನದ ಮಹಾ ನಿರ್ದೇಶಕ(ಎಸ್ಎ ಮತ್ತು ಸಾರ್ಕ್) ಮೊಹಮ್ಮದ್ ಫೈಸಲ್ ಖಂಡಿಸಿದ್ದಾರೆ.
ಭಾರತೀಯ ಸೇನಾಪಡೆಯಿಂದ ಅಪ್ರಚೋದಿತ ಮನಸೋಇಚ್ಛೆ ಫಿರಂಗಿ ಮತ್ತು ಗುಂಡಿನ ದಾಳಿ ನಡೆಸುತ್ತಿರುವುದರಿಂದ ಐವರು ನಾಗರಿಕರು ಮೃತಪಟ್ಟಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿ ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಫೈಸಲ್ ಭಾರತೀಯ ರಾಯಭಾರಿಗೆ ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮತ್ತು ಕಾರ್ಯನಿರತ ಗಡಿಯಲ್ಲಿ ಭಾರತೀಯ ಸೇನಾಪಡೆ ನಿರಂತರವಾಗಿ ನಾಗರಿಕರ ಮೇಲೆ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ ಎಂದು ವಿದೇಶಾಂಗ ಇಲಾಖೆ ಆರೋಪಿಸಿದೆ. ಸ್ಥಳೀಯ ಶಾಂತಿ ಮತ್ತು ಭದ್ರತೆಗೆ ಭಾರತದ ಕಡೆಯಿಂದ ಬೆದರಿಕೆಯಿದೆ ಎಂದು ಈ ಹಿಂದೆ ಆರೋಪಿಸಿದ್ದ ಪಾಕಿಸ್ತಾನ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ 5 ಶಾಶ್ವತ ಸದಸ್ಯ ರಾಷ್ಟ್ರಗಳು ಲಾಂಚ್ ಪ್ಯಾಡ್ ನ ಬಗ್ಗೆ ಭಾರತದಿಂದ ವಿವರಣೆ ಕೇಳುವಂತೆ ಒತ್ತಾಯಿಸಿದೆ.
Advertisement