ಕುಲಭೂಷಣ್ ಜಾಧವ್'ಗೆ 2ನೇ ಬಾರಿ ರಾಜತಾಂತ್ರಿಕ ನೆರವು ನೀಡಲು ಸಾಧ್ಯವಿಲ್ಲ: ಪಾಕಿಸ್ತಾನ

ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಡಿ ಬಂಧನವಾಗಿರುವ ಕುಲಭೂಷಣ್ ಜಾಧವ್ ಗೆ 2ನೇ ಬಾರಿ ರಾಜತಾಂತ್ರಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. 
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಡಿ ಬಂಧನವಾಗಿರುವ ಕುಲಭೂಷಣ್ ಜಾಧವ್ ಗೆ 2ನೇ ಬಾರಿ ರಾಜತಾಂತ್ರಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. 
 
ಜಾಧವ್ ರಾಜತಾಂತ್ರಿಕ ನೆರವು ಕುರಿತಂತೆ ಘೋಷಣೆ ಮಾಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್, ಕುಲಭೂಷಣ್ ಜಾಧವ್ ಗೆ 2ನೇ ಬಾರಿ ರಾಜತಾಂತ್ರಿಕ ನೆರವು ನೀಡುವ ಯಾವುದೇ ಅವಕಾಶಗಳಿಲ್ಲ ಎಂದು ಹೇಳಿದ್ದಾರೆ. 

ಆಗಸ್ಟ್ ನಲ್ಲಿ ಜಾಧವ್ ಗೆ ರಾಜತಾಂತ್ರಿಕ ನೆರವು ನೀಡಲು ಮುಂದಾಗಿದ್ದ ಪಾಕಿಸ್ತಾನ ಕೆಲವು ಷರತ್ತುಗಳನ್ನು ವಿಧಿಸಿತ್ತು.ಬಳಿಕ ಸೆ.1 ರಂದು ಮೊದಲ ಬಾರಿಗೆ ರಾಜತಾಂತ್ರಿಕ ನೆರವು ನೀಡುವುದಾಗಿ ಘೋಷಣೆ ಮಾಡಿತ್ತು. ಜಾಧವ್"ಗೆ ವಿಯೆನ್ನಾ ಕನ್ವೆನ್ಷನ್ ಪ್ರಕಾರ ಸೆ.2 ರಂದು ರಾಜತಾಂತ್ರಿಕ ನೆರವನ್ನು ನೀಡಲಾಗುತ್ತಿದೆ ಎಂದು ಘೋಷಣೆ ಮಾಡಿತ್ತು. ಪಾಕಿಸ್ತಾನದ ಈ ಪ್ರಸ್ತಾಪಕ್ಕೆ ಭಾರತ ಒಪ್ಪಿಗೆ ಸೂಚಿಸಿತ್ತು. 

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ ಕುಲಭೂಷಣ್ ಜಾದವ್ ಅವರನ್ನು 2016, ಮಾರ್ಚ್ 3ರಂದು ಪಾಕಿಸ್ತಾನ ಬಂಧನಕ್ಕೊಳಪಡಿಸಿತ್ತು. ಭಾರತದ ಗೂಡಾಚಾರಿಯಾಗಿ ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳನ್ನು ಆಯೋಜಿಸುತ್ತಿರುವ ಆರೋಪದ ಮೇಲೆ ಕುಲಭೂಷಣ್ ಜಾಧವ್ ಅವರನ್ನು ಖೈಬರ್ ಪಖ್ತುಂಕ್ವ ಪ್ರಾಂತ್ಯದಲ್ಲಿ ಬಂಧಿಸಿದ್ದಾಗಿ ಪಾಕ್ ಸರ್ಕಾರ ಹೇಳಿಕೊಂಡಿತ್ತು. ಆದರೆ, ವೈಯಕ್ತಿಕ ವ್ಯವಹಾರ ಸಂಬಂಧ ಇರಾನ್ ದೇಶಕ್ಕೆ ಹೋಗಿದ್ದಾಗ ಪಾಕಿಸ್ತಾನದವರು ಅಕ್ರಮವಾಗಿ ಕುಲಭೂಷಣ್ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆಂದು ಭಾರತ ವಾದ ಮಂಡಿಸಿತ್ತು. 

ಪಾಕಿಸ್ತಾನದ ಸೇನಾ ನ್ಯಾಯಾಲಯದಲ್ಲಿ ರಹಸ್ಯ ವಿಚಾರಣೆ ನಡೆದ ಬಳಿಕ ಜಾಧವ್ ಅವರಿಗೆ 2017ರ ಏಪ್ರಿಲ್ 10ರಂದು ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಭಾರತ ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಂತಿಮ ತೀರ್ಪು ನೀಡುವವರೆಗೂ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಬಾರದು ಎಂದು ಐಸಿಜೆ ತಡೆ ನೀಡಿತ್ತು. ಇದಾದ ಬಳಿಕ 2019ರಪ ಜುಲೈ.17ರಂದು ಐಸಿಜೆ ಅಂತಿಮ ತೀರ್ಪು ನೀಡಿ, ಜಾಧವ್ ಬಿಡುಗಡೆ ಮಾಡಬೇಕೆಂಬ ಭಾರತದ ಮನವಿ ತಿರಸ್ಕರಿಸಿತ್ತು. ಆದರೆ, ಅವರಿಗೆ ಆದಷ್ಟೂ ಶೀಘ್ರಗತಿಯಲ್ಲಿ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ನೀಡುವಂತೆ ಪಾಕಿಸ್ತಾನಕ್ಕೆ ಸೂಚಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com