ನಕಲಿ ಭಯೋತ್ಪಾದಕ ದಾಳಿ ಬೆದರಿಕೆ: ಆಸಿಸ್ ಕ್ರಿಕೆಟಿಗ ಉಸ್ಮಾನ್ ಖವಾಜಾ ಸಹೋದರ ಜೈಲು ಪಾಲು!

ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಉಸ್ಮಾನ್ ಖವಾಜಾ ಅವರ ಸಹೋದರ ಅರ್ಸಲಾನ್ ತಾರಿಕ್ ಖವಾಜಾ ನಕಲಿ ಭಯೋತ್ಪಾದಕ ದಾಳಿ ಬೆದರಿಕೆ ಮೇರೆಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಅರ್ಸಲಾನ್ ತಾರಿಕ್ ಖವಾಜಾ (ಚಿತ್ರ ಕೃಪೆ: ಎಪಿ)
ಅರ್ಸಲಾನ್ ತಾರಿಕ್ ಖವಾಜಾ (ಚಿತ್ರ ಕೃಪೆ: ಎಪಿ)

ಸಿಡ್ನಿ: ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಉಸ್ಮಾನ್ ಖವಾಜಾ ಅವರ ಸಹೋದರ ಅರ್ಸಲಾನ್ ತಾರಿಕ್ ಖವಾಜಾ ನಕಲಿ ಭಯೋತ್ಪಾದಕ ದಾಳಿ ಬೆದರಿಕೆ ಮೇರೆಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಅರ್ಸಲಾನ್ ತಾರಿಕ್ ಖವಾಜಾ ತನ್ನ ಸ್ನೇಹಿತನೊಂದಿಗೆ ಸೇರಿ ವಿಶ್ವ ವಿದ್ಯಾಲಯದಲ್ಲಿ ನಕಲಿ ಭಯೋತ್ಪಾದಕ ದಾಳಿ ಕುರಿತು ಬೆದರಿಕೆ ಹಾಕಿದ ಆರೋಪ ಸಾಬೀತಾಗಿದ್ದು ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2017ರಿಂದ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ ಅರ್ಸಲಾನ್ ತಾರಿಕ್ ಖವಾಜಾ ತನ್ನ  ಪ್ರಿಯತಮೆಯೊಂದಿಗೆ ಸಂಪರ್ಕ ಹೊಂದಿದ್ದ ಕಮರ್ ನಿಜಾಮುದ್ದೀನ್ ಎಂಬ ಮತ್ತೋರ್ವ ಯುವಕನ ಕುರಿತು ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಆತನ ವಿರುದ್ಧ ಸೇಡು ತೀರಿಸಿಕೊಳ್ಳುವ ಭರದಲ್ಲಿ ಆತನಿಗೆ ಭಯೋತ್ಪಾದಕ ನಂಟಿನ ಆರೋಪ ಹೊರಿಸಲು ದಾಖಲೆಗಳನ್ನು ತಿರುಚಿದ ಮತ್ತು ಆತ ವಿದೇಶದಲ್ಲಿ  ಭಯೋತ್ಪಾದಕ ತರಬೇತಿ ಪಡೆದಿದ್ದ ಎಂದು ಸಾಬೀತು ಮಾಡಲು ಹಲವು ನಕಲಿ ದಾಖಲೆಗಳನ್ನು ಖವಾಜಾ ಸೃಷ್ಟಿಸಲು ಯತ್ನಿಸಿದ್ದ. ಈ ಸಂಬಂಧ ವಿವಿಯಲ್ಲಿನ ನೋಟ್ ಬುಕ್ ನಲ್ಲಿ ತಾನೇ ಫೋರ್ಜರಿ ಮಾಡಿದ್ದ ಕುರಿತು ತನಿಖಾಧಿಕಾರಿಗಳ ಮುಂದೆ ಅರ್ಸಲಾನ್ ತಾರಿಕ್ ಖವಾಜಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.  

ಇದೇ ವಿಚಾರವಾಗಿ ಬಂಧನಕ್ಕೀಡಾಗಿರುವ ಸಂತ್ರಸ್ಥ ನಿಜಾಮುದ್ದೀನ್ ಭಯೋತ್ಪಾದಕ ಎಂಬ ಹಣೆ ಪಟ್ಟಿ ಹೊತ್ತು ನಾಲ್ಕು ವಾರಳಿಂದ ಸಿಡ್ನಿಯ ಅತ್ಯಂತ ರಕ್ಷಣೆ ಇರುವ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯೂ ಸೌಥ್ ವೇಲ್ಸ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ರಾಬರ್ಟ್  ವೆಬರ್ ಅವರು ಇದೀಗ 40 ವರ್ಷದ ಅರ್ಸಲಾನ್ ತಾರಿಕ್ ಖವಾಜಾಗೆ ನಾಲ್ಕು ವರ್ಷ ಮತ್ತು 6 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ 2 ವರ್ಷ 6 ತಿಂಗಳು ಪೆರೋಲ್ ರಹಿತ ಜೈಲು ಶಿಕ್ಷೆ ವಿಧಿಸಿದ್ದು, ಈ ಶಿಕ್ಷಾ ಅವಧಿ ಪೂರ್ಣಗೊಳಿಸಿದ ಬಳಿಕವಷ್ಟೇ ಪೆರೋಲ್ ಗೆ ಈತ ಅರ್ಹ  ಎಂದು ಆದೇಶ ನೀಡಿದ್ದಾರೆ.

ಇನ್ನು ತನಿಖಾಧಿಕಾರಿಳು ಪತ್ತೆ ಮಾಡಿದ ದಾಖಲೆಗಳ ಪೈಕಿ ನೋಟ್ ಬುಕ್ ಪ್ರಮುಖ ಪಾತ್ರವಹಿಸಿದ್ದು, ಈ ನೋಟ್ ಬುಕ್ ನಲ್ಲಿ ಖವಾಜಾ ಕಮರ್ ನಿಜಾಮುದ್ದೀನ್ ಬರೆದಂತೆ ಫೋರ್ಜರಿ ಮಾಡಿದ್ದ ಎನ್ನಲಾಗಿದೆ. ಈ ಬುಕ್ ನಲ್ಲಿ ಆಗಿನ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಮತ್ತು ಗವರ್ನರ್ ಜನರಲ್ ವಿರುದ್ಧ  ಮಾರಣಾಂತಿಕ ಬೆದರಿಕೆಗಳು ಇದ್ದವು ಎನ್ನಲಾಗಿದೆ. ಅಂತೆಯೇ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡುವ ಪಟ್ಟಿಗಳು, ಮೆಲ್ಬೋರ್ನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಕ್ರಿಕೆಟ್ ಅಭ್ಯಾಸ ಪಂದ್ಯದ ವಿವರಗಳು ಇದ್ದವು ಎನ್ನಲಾಗಿದೆ.  

ಶ್ರೀಲಂಕಾ ಮೂಲದ ಸಂತ್ರಸ್ಥ ಕಮರ್ ನಿಜಾಮುದ್ದೀನ್ ಬಿಡುಗಡೆ ಬಳಿಕ ತವರಿಗೆ ಮರಳಿದ್ದಾರೆಯಾದರೂ ಭಯೋತ್ಪಾದ ಆರೋಪವಿದ್ದರಿಂದ ಅವರ ವೀಸಾವನ್ನು ಅಮೆರಿಕ ರದ್ದು ಪಡಿಸಿದೆ. ಹೀಗಾಗಿ ಅವರು ತಮ್ಮ ಅಮೆರಿಕ ಮೂಲದ ಪ್ರೇಯಸಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮಗಳು ವರದಿ  ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com