ಅಫ್ಘಾನಿಸ್ತಾನ: ತಾಲಿಬಾನ್ ವಿರುದ್ಧ ತೊಡೆ ತಟ್ಟಿದ್ದ ಎನ್ ಆರ್ ಎಫ್ ಸೈನಿಕರಿಂದ ಪಂಜ್ ಶಿರ್ ಕೈಜಾರಿದ್ದು ಹೇಗೆ?
ಕಾಬೂಲ್: ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡ ತಾಲಿಬಾನ್ ಸರ್ಕಾರ ರಚನೆ ಕಸರತ್ತಿನಲ್ಲಿ ಮುಳುಗಿದ್ದ ಸಮಯದಲ್ಲಿ ದೇಶದಲ್ಲಿ ತಾಲಿಬಾನ್ ಗೆ ಎದುರಾಳಿಯೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಗತ್ತು ಕೂಡಾ ಹಾಗೆಂದೇ ತಿಳಿದಿತ್ತು. ಜಗತ್ತು ಮಾತ್ರ ಏಕೆ ತಾಲಿಬಾನ್ ಕೂಡಾ ತನಗೆ ವಿರೋಧಿಗಳೇ ಇಲ್ಲ ದೇಶದಲ್ಲಿ ಎಂದೇ ಬಲವಗಿ ನಂಬಿತ್ತು. ಆ ಪರಿಸ್ಥಿತಿಯಲ್ಲಿ ತಾಲಿಬಾನ್ ವಿರುದ್ಧ ಹೋರಾಟ ನಡೆಸಲು ಪಂಜ್ ಶಿರ್ ನಲ್ಲಿ ಹೋರಾಟಗಾರಾರ ತಂಡ 'ಎನ್ ಆರ್ ಎಫ್' (ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್) ಸಿದ್ಧ ಎನ್ನುವ ಹೇಳಿಕೆ ಹೊರಬಿದ್ದಿತ್ತು.
ಮಾಜಿ ಮುಜಾಹಿದೀನ್ ಕಮಾಂಡರ್ ಪುತ್ರನೇ ಈ ತಾಲಿಬಾನ್ ವಿರೋಧಿ ಪಡೆ ನೇತೃತ್ವ ವಹಿಸಿಕೊಂಡಿದ್ದ. ಅಫ್ಘಾನಿಸ್ತಾನ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಕೂಡಾ ಅವರ ಬೆನ್ನಿಗೆ ನಿಂತಿದ್ದರು.
ಆದರೆ ಮುಂದೆ ನಡೆದಿದ್ದೇ ಬೇರೆ. ತಾಲಿಬಾನಿಗಳು ಪಂಜ್ ಶಿರ್ ಪ್ರಾಂತ್ಯವನ್ನು ವಶಪಡಿಸಿಕೊಂಡುಬಿಟ್ಟರು. ಈ ಬಗ್ಗೆ ಪಂಜ್ ಶಿರ್ ನಿವಾಸಿಗಳು ಹೇಳುವುದಿಷ್ಟು. ತಾಲಿಬಾನಿಗಳು ಅತಿ ದೊಡ್ಡ ಸಂಖ್ಯೆಯಲ್ಲಿ ಪಂಜ್ ಶಿರ್ ಪ್ರಾಂತ್ಯದೊಳಕ್ಕೆ ನುಗ್ಗಿದರು. ಆ ತೀವ್ರತೆಯನ್ನು ತಡೆಯಲು ವಿರೋಧಿ ಪಾಳೆಯದ ಹೋರಾಟಗಾರಿಗೆ ಅಗಲಿಲ್ಲ ಎಂದರು.
ಮೂರು ದಿನಗಳ ಕಾಲ ನಡೆದ ಕಾಳಗದಲ್ಲಿ ತಾಲಿಬಾನಿಗಳು ಎನ್ ಆರ್ ಎಫ್ ಹೋರಾಟಗಾರರ ಮೇಲೆ ಬಾಂಬು, ಮದ್ದುಗುಂಡುಗಳ ಸುರಿಮಳೆಗೈದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಎನ್ ಆರ್ ಎಫ್ ಸೈನಿಕರ ಬಳಿಯಿದ್ದ ಶಸ್ತ್ರಾಸ್ತ್ರಗಳು ಹಳೆಯ ಕಾಲದವು. ಆದರೆ ತಾಲಿಬಾನಿಗಳು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಇತ್ತೀಚಿಗೆ ತಾವು ಮಣಿಸಿದ್ದ ಆಫ್ಘನ್ ಸೇನೆಯ ಬಳಿಯಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ತಾಲಿಬಾನಿಗಳ ಕೈಸೇರಿದ್ದು ಪಂಜ್ ಶಿರ್ ಹೋರಾಟಗಾರರು ಸೋಲಲು ಪ್ರಮುಖ ಕಾರಣ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ