ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ; ಭಾರತ ತೀವ್ರ ಆಕ್ಷೇಪ ಬೆನ್ನಲ್ಲೇ ವರದಿ ನಿರಾಕರಿಸಿದ ಕೆನಡಾ ಸರ್ಕಾರ

ವರದಿ ಕುರಿತು ಪ್ರಿವಿ ಕೌನ್ಸಿಲ್‌ನ ಡೆಪ್ಯುಟಿ ಕ್ಲರ್ಕ್ ಮತ್ತು ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ. ಡ್ರೂಯಿನ್ ಈ ಹೇಳಿಕೆ ನೀಡಿದ್ದಾರೆ.
file pic
ಕೆನಡಾ ಪ್ರಧಾನಿ ಟ್ರುಡೋ- ಪ್ರಧಾನಿ ಮೋದಿ (ಸಂಗ್ರಹ ಚಿತ್ರ)online desk
Updated on

ಒಟ್ಟಾವಾ (ಕೆನಡಾ): ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೈವಾಡ ಇದೆ ಎಂಬ ವರದಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಕೆನಡಾ ಸರ್ಕಾರ ಕೂಡ ವರದಿಯನ್ನು ನಿರಾಕರಿಸಿದೆ,

ಇತ್ತೀಚೆಗೆ ಪ್ರಕಟಗೊಂಡ ವಿವಾದಾತ್ಮಕ ಮಾಧ್ಯಮ ವರದಿಯ ಬಗ್ಗೆ ಕೆನಡಾದ ಜಸ್ಟಿನ್ ಟ್ರುಡೊ ಸರ್ಕಾರ ಸ್ಪಷ್ಟೀಕರಣ ನೀಡಿದೆ.

ವರದಿ ಕುರಿತು ಪ್ರಿವಿ ಕೌನ್ಸಿಲ್‌ನ ಡೆಪ್ಯುಟಿ ಕ್ಲರ್ಕ್ ಮತ್ತು ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ. ಡ್ರೂಯಿನ್ ಈ ಹೇಳಿಕೆ ನೀಡಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೈವಾಡ ಇರುವ ಬಗ್ಗೆ ಉಲ್ಲೇಖಿಸಲಾಗಿದ್ದು, ಮಾಧ್ಯಮಗಳ ಈ ವರದಿ ಊಹಾಪೋಹವಾಗಿದ್ದು, ತಪ್ಪಾದ ಆಧಾರದ ಮೇಲೆ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಕೆನಡಾ ಸರ್ಕಾರವು ಈ ಹೇಳಿಕೆಯನ್ನು ನೀಡಿಲ್ಲ, ಅಥವಾ ಕೆನಡಾದಲ್ಲಿ ನಡೆಯುವ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅಥವಾ ಎನ್‌ಎಸ್‌ಎ ಅಜಿತ್ ದೋವಲ್‌ ಇರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಈ ವರದಿ ಕೇವಲ ಊಹಾಪೋಹವನ್ನು ಆಧರಿಸಿದ್ದಾಗಿದೆ ಎಂದು ತಿಳಿಸಿದ್ದಾರೆ.

ಈ ಮೂಲಕ ಭಾರತದ ಮೇಲೆ ಆಗಾಗ ಸುಳ್ಳು ಆರೋಪ ಹೊರಿಸುತ್ತಲೇ ಬಂದಿರುವ ಜಸ್ಟಿನ್ ಟ್ರೂಡೊ ಸರ್ಕಾರಕ್ಕೆ ಮತ್ತೊಮ್ಮೆ ಮುಜುಗರವಾಗಿದೆ. ಆರೋಪ ಕುರಿತು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಟ್ರೂಡೊ ಸರ್ಕಾರ ಈ ಹೇಳಿಕೆಯನ್ನು ನೀಡಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಸೇರಿದಂತೆ ಕೆನಡಾದಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆಯಲ್ಲಿ ಭಾರತದ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಅಜಿತ್ ದೋವಲ್ ಪಾತ್ರವಿಲ್ಲ ಎಂದು ಹೇಳಿದೆ.

file pic
'ಹಾಸ್ಯಾಸ್ಪದ': Nijjar ಹತ್ಯೆ ಕುರಿತ ಕೆನಡಾ ವರದಿ ವಿರುದ್ಧ ಭಾರತ ಕಿಡಿ!

ಕಳೆದ ವರ್ಷ ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ವಿವಾದಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಪ್ರಧಾನಿ ಮೋದಿ ಮತ್ತು ಎನ್‌ಎಸ್‌ಎ ದೋವಲ್ ಲಿಂಕ್ ಮಾಡುವ ಲೇಖನವನ್ನು ಕೆನಡಾದ ಪ್ರತಿಷ್ಠಿತ ಪತ್ರಿಕೆ ದಿ ಗ್ಲೋಬ್ ಅಂಡ್ ಮೇಲ್ ಪ್ರಕಟಿಸಿತ್ತು.

ಪ್ರಧಾನಿ ಮೋದಿಯವರಿಗೆ ನಿಜ್ಜರ್ ಹತ್ಯೆಯ ಬಗ್ಗೆ ಗೊತ್ತಿತ್ತು ಎಂದು ಕೆನಡಾದ ಭದ್ರತಾ ಏಜೆನ್ಸಿಗಳು ನಂಬುತ್ತವೆ’ ಎಂದು ಹೆಸರಿಸದ ಭದ್ರತಾ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಭಾರತ ಸರ್ಕಾರ ಈ ಆರೋಪವನ್ನು ನಿರಾಕರಿಸಿತ್ತು.

ಇದು "ಸ್ಮೀಯರ್ ಅಭಿಯಾನ" (ಸುಳ್ಳು ಅಥವಾ ಸಂಶಯಾಸ್ಪದ ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕ ವ್ಯಕ್ತಿಯನ್ನು ಅಪಖ್ಯಾತಿಗೊಳಿಸುವ ಯೋಜನೆ) ಎಂದು ಹೇಳಿತ್ತು.

ಕೆನಡಾದ ಸರ್ಕಾರದ ಮೂಲವೊಂದು ಪತ್ರಿಕೆಗೆ ನೀಡಿದ ಇಂತಹ ಹಾಸ್ಯಾಸ್ಪದ ಹೇಳಿಕೆಗಳನ್ನು ಅವರು ಅರ್ಹವಾದ ತಿರಸ್ಕಾರದಿಂದ ವಜಾಗೊಳಿಸಬೇಕು. ಈ ರೀತಿಯ ಸ್ಮೀಯರ್ ಪ್ರಚಾರಗಳು ನಮ್ಮ ಈಗಾಗಲೇ ಹದಗೆಟ್ಟಿರುವ ಸಂಬಂಧಗಳನ್ನು ಇನ್ನಷ್ಟು ಹಾನಿಗೊಳಿಸುತ್ತವೆ. ಅಲ್ಲದೆ, ಈಗಾಗಲೇ ಈ ಪ್ರಕರಣ ಸಂಬಂಧ ಅಮೆರಿಕಾ ಸೇರಿದಂತೆ ಗುಪ್ತಚರ ಪಾಲುದಾರರೊಂದಿಗೆ "ವಿಶ್ವಾಸಾರ್ಹ ಮಾಹಿತಿ" ಹಂಚಿಕೊಳ್ಳಲಾಗಿದೆ ಎಂದು ತಿಳಿಸಿತ್ತು.

ಖಲಿಸ್ತಾನಿ ಭಯೋತ್ಪಾದಕ ಮತ್ತು ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕಳೆದ ವರ್ಷ ಜೂನ್‌ನಲ್ಲಿ ವ್ಯಾಂಕೋವರ್‌ನಲ್ಲಿ ಕೊಲ್ಲಲಾಯಿತು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ದೆಹಲಿಯ "ಏಜೆಂಟ್‌ಗಳು" ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಭಾರತದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟನ್ನು ಪ್ರಾರಂಭಿಸಿದರು. ಕಳೆದ ತಿಂಗಳು ಕೆನಡಾ, ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ ಮತ್ತು ಇತರ ಕೆಲವು ರಾಜತಾಂತ್ರಿಕರನ್ನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿತ್ತು. ಅಲ್ಲದೆ ಭಾರತೀಯ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಕೆನಡಾ ಸರ್ಕಾರ ಹೇಳಿತ್ತು. ಟಿಟ್-ಫಾರ್-ಟ್ಯಾಟ್ ನಡೆಯಲ್ಲಿ, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರ ಕೂಡ ಕೆನಡಾದ ಚಾರ್ಜ್ ಡಿ'ಅಫೇರ್ಸ್ ಸ್ಟೀವರ್ಟ್ ವೀಲರ್ ಮತ್ತು ಇತರ ಐದು ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿತ್ತು.

ನಿಷೇಧಿತ ಭಯೋತ್ಪಾದಕ ಸಂಘಟನೆ ಖಲಿಸ್ತಾನ್ ಟೈಗರ್ ಫೋರ್ಸ್‌ನ ಮಾಸ್ಟರ್ ಮೈಂಡ್ ನಿಜ್ಜರ್ - ಪಂಜಾಬ್‌ನಲ್ಲಿ ಹಿಂದೂ ಪುರೋಹಿತರ ಹತ್ಯೆ ಸೇರಿದಂತೆ ಬಹು ಅಪರಾಧಗಳಿಗಾಗಿ ದೆಹಲಿಯ 'ಮೋಸ್ಟ್ ವಾಂಟೆಡ್' ಭಯೋತ್ಪಾದಕರ ಪಟ್ಟಿಯಲ್ಲಿದ್ದ. ಭಯೋತ್ಪಾದನಾ ನಿಗ್ರಹ ಸಂಸ್ಥೆ ಎನ್‌ಐಎ ಆತನನ್ನು ಸೆರೆಹಿಡಿಯುವ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com