ಪಹಲ್ಗಾಮ್ ಭಯೋತ್ಪಾದಕ ದಾಳಿ: ಉಗ್ರರ ಕೃತ್ಯಕ್ಕೂ ನಮಗೂ ಸಂಬಂಧವಿಲ್ಲ ಎಂದ ಪಾಕಿಸ್ತಾನ; 'ಅಂತಾರಾಷ್ಟ್ರೀಯ ತನಿಖೆ'ಗೆ ಒತ್ತಾಯ

ಪಹಲ್ಗಾಮ್​ ದಾಳಿ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ಅಗತ್ಯ ಎಂದು ಹೇಳಿದ್ದಾರೆ. ಜೊತೆಗೆ ಅಂತರರಾಷ್ಟ್ರೀಯ ತನಿಖಾಧಿಕಾರಿಗಳು ನಡೆಸುವ ಯಾವುದೇ ತನಿಖೆಗೆ ಇಸ್ಲಾಮಾಬಾದ್ ಸಹಕರಿಸಲು ಸಿದ್ಧವಾಗಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್
Updated on

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಹಲವು ಕ್ರಮಗಳನ್ನು ಕೈಗೊಂಡಿದ್ದು, ಪರಿಣಾಮ ನೆರೆರಾಷ್ಟ್ರ ಪತರುಗಟ್ಟುವಂತಾಗಿದೆ. ಇದರ ಬೆನ್ನಲ್ಲೇ ದಾಳಿಯಲ್ಲಿನ ತನ್ನ ಪಾತ್ರವನ್ನು ಪಾಕಿಸ್ತಾನ ನಿರಾಕರಿಸಿದ್ದು, ಅಂತರಾಷ್ಟ್ರೀಯ ತನಿಖೆಗೆ ಆಗ್ರಹಿಸಿದೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್, ಪಹಲ್ಗಾಮ್​ ದಾಳಿ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ಅಗತ್ಯ ಎಂದು ಹೇಳಿದ್ದಾರೆ. ಜೊತೆಗೆ ಅಂತರರಾಷ್ಟ್ರೀಯ ತನಿಖಾಧಿಕಾರಿಗಳು ನಡೆಸುವ ಯಾವುದೇ ತನಿಖೆಗೆ ಇಸ್ಲಾಮಾಬಾದ್ ಸಹಕರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ನಾವು ಭಾರತಕ್ಕೆ ಹೆದರುತ್ತಿಲ್ಲ, ಒಂದು ವೇಳೆ ಅವರು ದಾಳಿ ನಡೆಸಿದರೆ, ಅದಕ್ಕೆ ದಿಟ್ಟ ಉತ್ತರವನ್ನು ನಾವು ನೀಡುತ್ತೇವೆ. ಕಾಶ್ಮೀರದಲ್ಲಿ ನಡೆದ ಉಗ್ರರ ಕೃತ್ಯಕ್ಕೂ ಪಾಕಿಸ್ತಾನಕ್ಕೂ ಸಂಬಂಧವೇ ಇಲ್ಲ, ಬದಲಿಗೆ ಇದು ಭಾರತ ಸೃಷ್ಟಿಸಿದ ನಾಟಕ ಎಂದು ಆರೋಪಿಸಿದ್ದಾರೆ.

ಘಟನೆ ನಡೆದ ಕೂಡಲೇ ದೆಹಲಿಯಿಂದ ಬಂದ ಪ್ರತಿಕ್ರಿಯೆಗಳು ನಮಗೆ ಆಶ್ಚರ್ಯವನ್ನು ತರಲಿಲ್ಲ. ಎಕೆಂದರೆ ಇದನ್ನು ನಾವು ಮೊದಲೇ ನಿರೀಕ್ಷಿಸಿದ್ದೆವು. ಉಗ್ರ ಕೃತ್ಯ ಎಂದ ಕೂಡಲೇ ನಾವು ಇದನ್ನು ಖಂಡಿಸಿದ್ದೇವೆ. ಭಯೋತ್ಪಾದನೆಯಿಂದ ವಿಶ್ವದಲ್ಲಿ ಅತಿಹೆಚ್ಚು ತೊಂದರೆಗೆ ಒಳಗಾದ ದೇಶವೆಂದರೆ ಅದು ಪಾಕಿಸ್ತಾನ, ದಶಕಗಳಿಂದ ನಾವು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ತಿಳಿದ್ದಾರೆ.

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್
'ಭಾರತ-ಪಾಕಿಸ್ತಾನ ನಡುವೆ ಕಾಶ್ಮೀರಕ್ಕಾಗಿ ಸಾವಿರ ವರ್ಷಗಳಿಂದ ಹೋರಾಟ, ಅವರು ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ': ಡೊನಾಲ್ಡ್ ಟ್ರಂಪ್ ಹೇಳಿಕೆ

ವಿಶ್ವದ ಇತರ ಯಾವುದೇ ದೇಶಗಳು, ಪಾಕಿಸ್ತಾನ ಅನುಭವಿಸಿದ್ದಷ್ಟು ಸಾವುನೋವುಗಳನ್ನು ಅನುಭವಿಸಲಿಲ್ಲ. ಹಾಗಾಗಿ ಉಗ್ರ ಕೃತ್ಯದಿಂದಾಗುವ ನೋವುಗಳನ್ನು ಅನುಭವಿಸುವ ಅನುಭವವನ್ನು ನಾವು ಹೊಂದಿದ್ದೇವೆ. ನಮ್ಮಲ್ಲಿ ನೆಲೆಕಂಡಿದ್ದ ಉಗ್ರರರನ್ನು ಅಮೆರಿಕಾ ಕೂಡಾ ಪ್ರಾಕ್ಸಿಯಾಗಿ ಬಳಸಿಕೊಂಡಿತು. ಪುಲ್ವಾಮಾದ ಘಟನೆಗೂ ನಮ್ಮ ಮೇಲೆ ಗೂಬೆ ಕೂರಿಸಲಾಯಿತು, ಭಾರತದ ಮಿಲಿಟರಿಗಳು ನಮ್ಮ ದೇಶದಲ್ಲಿ ದಾಳಿ ಮಾಡಿದವು. ಆ ವೇಳೆ ಅಲ್ಲಿನ ಅಧಿಕಾರಿಯೊಬ್ಬರನ್ನು ನಮ್ಮ ಸೇನೆ ವಶಕ್ಕೆ ಪಡೆದುಕೊಂಡಿತು. ಆದರೆ, ನಾವು ಸೌಹಾರ್ದತೆಯ ದೃಷ್ಟಿಯಿಂದ ಅವರನ್ನು ಬಿಟ್ಟು ಕಳುಹಿಸಿದೆವು. ಈಗ ಮತ್ತೆ ನಮ್ಮ ಮೇಲೆ ಆರೋಪವನ್ನು ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಇದೇ ವೇಳೆ ಸಂಯಮದಿಂದ ವರ್ತಿಸುವಂತೆ ಕರೆ ನೀಡಿರುವ ಆಸೀಫ್, ನಾವು ಯುದ್ಧವನ್ನು ಬಯಸುವುದಿಲ್ಲ. ಈ ಯುದ್ಧವು ಭುಗಿಲೆದ್ದರೆ ಈ ಪ್ರದೇಶಕ್ಕೆ ವಿಪತ್ತು ಉಂಟಾಗಬಹುದು ಎಂದು ಹೇಳಿದ್ದಾರೆ.

ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಕುರಿತು ಮಾತನಾಡಿರುವ ಅವರು, ಪಾಕಿಸ್ತಾನದಲ್ಲಿ ಎಲ್ಇಟು ಉಗ್ರ ಸಂಘಟನೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಆ ಸಂಘಟನೆಯ ಉಗ್ರರ ಉಪಸ್ಥಿತಿ ಪಾಕಿಸ್ತಾನದಲ್ಲಿಲ್ಲ. ಅವರು ಮುಗಿದ ಅಧ್ಯಾಯ. ಆ ಸಂಘಟನೆಯ ಕೆಲ ಸದಸ್ಯರು ಇಂದಿಗೂ ಗೃಹ ಬಂಧನದಲ್ಲಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆ ನಮ್ಮ ದೇಶ ಭಾರತದಲ್ಲಿನ ಪ್ರತ್ಯೇಕತಾವಾದಿಗಳ ಹೋರಾಟಕ್ಕೆ ಬೆಂಬಲ ನೀಡುವುದಿಲ್ಲ ಎಂದೂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com