
ಮಾಸ್ಕೋ: ಪಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ರಷ್ಯಾ ಮತ್ತು ಚೀನಾದ ಹಿರಿಯ ರಾಜತಾಂತ್ರಿಕರು ಮಾಸ್ಕೋದಲ್ಲಿ ಭೇಟಿಯಾಗಿದ್ದು, ಭಯೋತ್ಪಾದನೆ ನಿಗ್ರಹ ಕುರಿತು ಚರ್ಚಿಸಿದ್ದಾರೆ. ರಷ್ಯಾದ ವಿದೇಶಾಂಗ ಸಚಿವಾಲಯ ಪಹಲ್ಗಾಮ್ ದಾಳಿಯನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೆ ಶನಿವಾರ ನಡೆದ ಸಭೆಯಲ್ಲಿ ದಕ್ಷಿಣ ಏಷ್ಯಾದ ಪರಿಸ್ಥಿತಿಯನ್ನು ಚರ್ಚಿಸಲಾಗಿದೆ ಎಂದು ತಿಳಿಸಿದೆ.
"ಏಪ್ರಿಲ್ 26 ರಂದು ರಷ್ಯಾ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಎಸ್ ವಿ ವರ್ಶಿನಿನ್ ಮತ್ತು ಚೀನಾದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಹಾಂಗ್ ಲೀ ಅವರ ಸಹ-ಅಧ್ಯಕ್ಷತೆಯಲ್ಲಿ ಮಾಸ್ಕೋದಲ್ಲಿ ಭಯೋತ್ಪಾದನೆ ನಿಗ್ರಹ ವಿಷಯಗಳ ಕುರಿತು ರಷ್ಯಾ-ಚೀನೀ ಸಭೆ ನಡೆಸಲಾಯಿತು" ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಉಭಯ ರಾಷ್ಟ್ರಗಳು ಪ್ರಾದೇಶಿಕ ಮತ್ತು ಜಾಗತಿಕ ಭಯೋತ್ಪಾದಕ ಬೆದರಿಕೆಗಳು, ಮಧ್ಯಪ್ರಾಚ್ಯ, ಮಧ್ಯ ಮತ್ತು ದಕ್ಷಿಣ ಏಷ್ಯಾದ ಪರಿಸ್ಥಿತಿಯನ್ನು ಚರ್ಚಿಸಿದ್ದು, ಭಯೋತ್ಪಾದನೆ, ಮೂಲಭೂತೀಕರಣ ಮತ್ತು ಉಗ್ರವಾದವನ್ನು ಎದುರಿಸುವಲ್ಲಿ ರಾಷ್ಟ್ರದ ಅನುಭವಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿರುವುದಾಗಿ ವೆಬ್ ಸೈಟ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಾತುಕತೆಯ ಸಂದರ್ಭದಲ್ಲಿ ದ್ವಿಪಕ್ಷೀಯವಾಗಿ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮುಖ್ಯವಾಗಿ ವಿಶ್ವಸಂಸ್ಥೆ, ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಮತ್ತು ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ನಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಉಗ್ರಗಾಮಿ ವಿರೋಧಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಪರಸ್ಪರ ಬದ್ದತೆಯನ್ನು ದೃಢಪಡಿಸಲಾಯಿತು ಎನ್ನಲಾಗಿದೆ.
ಈ ಮಧ್ಯೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೊಸ ಬಿಕ್ಕಟ್ಟು ಚೀನಾದ ಅಧ್ಯಕ್ಷೀಯ ಅವಧಿಯಲ್ಲಿ SCO ಏಕತೆಗೆ ಸವಾಲಾಗಿದ್ದು, ಪ್ರಾದೇಶಿಕ ಸಹಕಾರ ಯೋಜನೆಗಳಿಗೆ ಬೆದರಿಕೆ ಹಾಕುತ್ತದೆ ಮತ್ತು ಸಾಂಪ್ರದಾಯಿಕ ಗೆಳೆಯ ಮಾಸ್ಕೋದಿಂದ ಬಲವಾದ ಬೆಂಬಲ ಬಯಸುವುದರೊಂದಿಗೆ ರಷ್ಯಾವನ್ನು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಸಿದೆ ಎಂದು ರಷ್ಯಾದ ಬ್ಯುಸಿನೆಸ್ ಡೈಲಿ ಕೊಮ್ಮರ್ಸಾಂಟ್ ವರದಿ ಮಾಡಿದೆ.
Advertisement