'ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕು': ರಷ್ಯಾದಿಂದ ತೈಲ ಆಮದಿನ ಬಗ್ಗೆ ಭಾರತ ಮೂಲದ ನಿಕ್ಕಿ ಹ್ಯಾಲೆ
ಡೊನಾಲ್ಡ್ ಟ್ರಂಪ್ ಅವರ ಭಾರತ ಮೂಲಕ ಅಮೇರಿಕನ್ ರಿಪಬ್ಲಿಕನ್ ಸಹೋದ್ಯೋಗಿ ನಿಕ್ಕಿ ಹ್ಯಾಲೆ ಭಾನುವಾರ ರಷ್ಯಾದ ತೈಲ ಆಮದುಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಸಮಸ್ಯೆಯ ಪರಿಹಾರಕ್ಕಾಗಿ ಶ್ವೇತಭವನದೊಂದಿಗೆ ಕೆಲಸ ಮಾಡುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
'ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಟ್ರಂಪ್ ಅವರ ಅಭಿಪ್ರಾಯವನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಪರಿಹಾರವನ್ನು ಕಂಡುಕೊಳ್ಳಲು ಶ್ವೇತಭವನದೊಂದಿಗೆ ಕೆಲಸ ಮಾಡಬೇಕು. ಇದು ಬೇಗ ಆದಷ್ಟು ಉತ್ತಮವಾಗಿರುತ್ತದೆ. ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ದಶಕಗಳ ಸ್ನೇಹ ಮತ್ತು ಉತ್ತಮ ಇಚ್ಛೆಯು ಸದ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಳು ದೃಢವಾದ ಆಧಾರವನ್ನು ಒದಗಿಸುತ್ತದೆ. ವ್ಯಾಪಾರ ಭಿನ್ನಾಭಿಪ್ರಾಯಗಳು ಮತ್ತು ರಷ್ಯಾದ ತೈಲ ಆಮದುಗಳಂತಹ ಸಮಸ್ಯೆಗಳನ್ನು ಪರಿಹರಿಸಲು ಕಠಿಣ ಸಂಭಾಷಣೆಯ ಅಗತ್ಯವಿರುತ್ತದೆ' ಎಂದು ಅವರು X ಪೋಸ್ಟ್ನಲ್ಲಿ ಬರೆದಿದ್ದಾರೆ.
ಚೀನಾದ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಪ್ರಭಾವದ ಸಂದರ್ಭದಲ್ಲಿ, ವಾಷಿಂಗ್ಟನ್ ಭಾರತವನ್ನು ಪ್ರಮುಖ ಪ್ರಜಾಸತ್ತಾತ್ಮಕ ಪಾಲುದಾರನಾಗಿ ಪರಿಗಣಿಸಬೇಕು. ಸದ್ಯದ ಸುಂಕಗಳು ಅಥವಾ ರಷ್ಯಾದ ತೈಲ ಆಮದಿನ ಉದ್ವಿಗ್ನತೆಗಳ ಹೊರತಾಗಿಯೂ ಅಮೆರಿಕ ಮತ್ತು ಭಾರತವು ತಮ್ಮ ದೀರ್ಘಕಾಲೀನ, ಕಾರ್ಯತಂತ್ರದ ಉದ್ದೇಶಗಳತ್ತ ಗಮನಹರಿಸಬೇಕು. ಚೀನಾವನ್ನು ಎದುರಿಸಲು ಬಲವಾದ ಅಮೆರಿಕ-ಭಾರತ ಮೈತ್ರಿ ಅತ್ಯಗತ್ಯ ಎಂದು ಹ್ಯಾಲೆ ಪ್ರತಿಪಾದಿಸಿದರು.
ಇದಕ್ಕೂ ಮುನ್ನ ನ್ಯೂಸ್ವೀಕ್ನಲ್ಲಿ ಪ್ರಕಟವಾದ ಪ್ರಕಟನೆಯಲ್ಲಿ, ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ಹ್ಯಾಲಿ, ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ಸಂಬಂಧಗಳು ಮುರಿಯುವ ಹಂತಕ್ಕೆ ಹತ್ತಿರದಲ್ಲಿವೆ ಮತ್ತು ಚೀನಾದ ಬೆಳೆಯುತ್ತಿರುವ ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಅಮೆರಿಕ ನಿಯಂತ್ರಿಸಲು ಬಯಸಿದರೆ ಸಂಬಂಧಗಳನ್ನು ಮತ್ತೆ ಹಳಿಗೆ ತರುವುದು ನಿರ್ಣಾಯಕ ಎಂದು ಹೇಳಿದರು.
ಭಾರತವನ್ನು ಚೀನಾದಂತೆ ಎದುರಾಳಿಯಾಗಿ ಪರಿಗಣಿಸಬಾರದು ಮತ್ತು ಟ್ರಂಪ್ ಆಡಳಿತವು ಸುಂಕದ ಸಮಸ್ಯೆಗಳು ಅಥವಾ ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದಲ್ಲಿ ಅಮೆರಿಕದ ಪಾತ್ರವು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವೆ ಬಿರುಕು ಮೂಡಲು ಕಾರಣವಾಗಬಾರದು ಎಂದರು.
ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಟ್ರಂಪ್ ಆಡಳಿತವು ಭಾರತದ ಮೇಲೆ ಎರಡನೇ ಹಂತದ ಸುಂಕಗಳನ್ನು ವಿಧಿಸಿದ ನಂತರ ಮತ್ತು ಪಾಕಿಸ್ತಾನದೊಂದಿಗಿನ ಇತ್ತೀಚಿನ ಸಂಘರ್ಷದ ನಂತರ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹದಗೆಟ್ಟಿದೆ. ಭಾರತದ ರಫ್ತಿನ ಮೇಲಿನ ಅಮೆರಿಕದ ಸುಂಕಗಳು ಈಗ ಶೇ 50ಕ್ಕಿಂತ ಹೆಚ್ಚಿವೆ. ಬ್ರೆಜಿಲ್ ಹೊರತುಪಡಿಸಿ, ಟ್ರಂಪ್ ವಿಧಿಸಿರುವ ಅತ್ಯಧಿಕ ಸುಂಕ ಇದಾಗಿದೆ'.
ಜವಳಿ ಮತ್ತು ಸಮುದ್ರ ರಫ್ತುಗಳಂತಹ ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ಅಮೆರಿಕದ 'ಅನ್ಯಾಯಯುತ, ನ್ಯಾಯಸಮ್ಮತವಲ್ಲದ ಮತ್ತು ಅವಿವೇಕದ' ಕ್ರಮವನ್ನು ಭಾರತ ಖಂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ತನ್ನ ರೈತರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ