

ಕೀವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಚಾಲ್ತಿಯಲ್ಲಿರುವಂತೆಯೇ ಇತ್ತ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಾವಿನ ಕುರಿತು ಮಾತನಾಡಿದ್ದಾರೆ.
ಕ್ರಿಸ್ಮಸ್ ಮುನ್ನಾದಿನ ಉಕ್ರೇನ್ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಾಯಬೇಕು ಎಂದು ಬಯಕೆ ವ್ಯಕ್ತಪಡಿಸಿದ್ದಾರೆ.
ತಮ್ಮ ಭಾಷಣದಲ್ಲಿ ಎಲ್ಲಿಯೂ ಪುಟಿನ್ ಹೆಸರನ್ನು ಉಲ್ಲೇಖಿಸದ ಝೆಲೆನ್ಸ್ಕಿ, 'ಇಂದು ನಾವೆಲ್ಲರೂ ಒಂದೇ ಕನಸನ್ನು ಕಾಣುತ್ತಿದ್ದೇವೆ. ನಮ್ಮೆಲ್ಲರಿಗೂ ಒಂದೇ ಆಶಯವಿದೆ. ಅವನು ನಾಶವಾಗಲಿ. ಅವನು ನಾಶವಾಗಲಿ ಎಂಬುದು ನಮ್ಮೆಲ್ಲರ ಯೋಚನೆಯಾಗಿರಬಹುದು. ಆದರೆ, ದೇವರತ್ತ ನೋಡಿದಾಗ, ಖಂಡಿತವಾಗಿಯೂ ಅದಕ್ಕಿಂತ ಹೆಚ್ಚಿನದನ್ನು ಬೇಡುತ್ತೇವೆ ಎಂದಿದ್ದಾರೆ.
ಅಂತೆಯೇ ಉಕ್ರೇನ್ನಲ್ಲಿ ಶಾಂತಿ ನೆಲೆಸಲೆಂದು ಕೋರುತ್ತೇವೆ. ಅದಕ್ಕಾಗಿ ಹೋರಾಡುತ್ತೇವೆ ಹಾಗೂ ಪ್ರಾರ್ಥಿಸುತ್ತೇವೆ. ಅದಕ್ಕೆ ನಾವು ಅರ್ಹರೂ ಹೌದು. ಹಾಗಾದಾಗಲಷ್ಟೇ, ಉಕ್ರೇನ್ನ ಪ್ರತಿಯೊಂದು ಕುಟುಂಬ ಸಾಮರಸ್ಯದಿಂದ ಬದುಕಲಿದೆ.
ಅಪಾರ ಸಾವು–ನೋವು ತಂದೊಡ್ಡಿದ್ದರೂ, ಅತ್ಯಂತ ಮುಖ್ಯವಾದದ್ದನ್ನು ಆಕ್ರಮಿಸಲು ಅಥವಾ ದಾಳಿ ಮಾಡಿ ನಾಶ ಮಾಡಲು ರಷ್ಯಾಗೆ ಸಾಧ್ಯವಾಗಿಲ್ಲ. ಅದು, ಉಕ್ರೇನಿಯನ್ನರ ಹೃದಯ. ನಾವು, ಒಬ್ಬರ ಮೇಲೊಬ್ಬರು ಇಟ್ಟಿರುವ ವಿಶ್ವಾಸ. ನಮ್ಮ ಒಗ್ಗಟ್ಟು ಎಂದು ಹೇಳಿದರು.
ರಷ್ಯಾ ಪಡೆಗಳು ಮಂಗಳವಾರ ಉಕ್ರೇನ್ನತ್ತ ಕ್ಷಿಪಣಿ ಹಾಗೂ ಡ್ರೋನ್ಗಳ ಮೂಲಕ ದಾಳಿ ನಡೆಸಿದ್ದವು. ಈ ವೇಳೆ ಕನಿಷ್ಠ ಮೂವರು ಮೃತಪಟ್ಟು ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.
ಇದನ್ನು ಖಂಡಿಸಿರುವ ಝೆಲೆನ್ಸ್ಕಿ, 'ಕ್ರಿಸ್ಮಸ್ ಸಂದರ್ಭದಲ್ಲಿ ರಷ್ಯನ್ನರು ತಾವು ನಿಜವಾಗಿಯೂ ಯಾರೆಂಬುದ್ನು ತೋರಿಸಿದ್ದಾರೆ. ದಾಳಿಗೆ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನೂ ಬಳಸಿದ್ದಾರೆ. ದೇವರ ಮೇಲೆ ನಂಬಿಕೆ ಇಲ್ಲದವರು ನಡೆಸುವ ಆಕ್ರಮಣ ಇಂಥದ್ದೇ' ಎಂದು ಕಿಡಿಕಾರಿದ್ದಾರೆ.
Advertisement