

ನವದೆಹಲಿ: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಗುರುವಾರ, ಅಮೆರಿಕ-ಇರಾನ್ ಕದನ ವಿರಾಮದ ಮಧ್ಯೆ ಲೆಬನಾನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಇಸ್ರೇಲ್ ಅನ್ನು 'ದುಷ್ಟ' ಮತ್ತು 'ಮಾನವೀಯತೆಗೆ ಶಾಪ' ಎಂದು ಕರೆದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
X ನಲ್ಲಿನ ಈಗ ಅಳಿಸಲಾದ ಪೋಸ್ಟ್ನಲ್ಲಿ, 'ಇಸ್ಲಾಮಾಬಾದ್ನಲ್ಲಿ ಶಾಂತಿ ಮಾತುಕತೆ ನಡೆಯುತ್ತಿದೆ, ಆದರೆ ಲೆಬನಾನ್ನಲ್ಲಿ ನರಮೇಧ ನಡೆಯುತ್ತಿದೆ. ಇಸ್ರೇಲ್, ಮೊದಲು ಗಾಜಾ, ನಂತರ ಇರಾನ್ ಮತ್ತು ಈಗ ಲೆಬನಾನ್ನಲ್ಲಿನ ಮುಗ್ಧ ನಾಗರಿಕರನ್ನು ಕೊಲ್ಲುತ್ತಿದೆ, ರಕ್ತಪಾತ ನಿರಂತರವಾಗಿ ಮುಂದುವರೆದಿದೆ' ಎಂದು ಆಸಿಫ್ ಹೇಳಿದ್ದಾರೆ.
'ಯುರೋಪಿಯನ್ ಯಹೂದಿಗಳನ್ನು ತೊಡೆದುಹಾಕಲು ಪ್ಯಾಲೆಸ್ಟೀನ್ ಭೂಮಿಯಲ್ಲಿ ಅದರ ಅಸ್ತಿತ್ವಕ್ಕೆ ಬೆದರಿಕೆ ಸೃಷ್ಟಿಸಿದ ಜನರನ್ನು ನರಕದಲ್ಲಿ ಸುಡಬೇಕೆಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ' ಎಂದು ಆಸಿಫ್ ಹೇಳಿದ್ದರು.
ಇಸ್ರೇಲ್ನ ಸರ್ವನಾಶಕ್ಕೆ ಪಾಕಿಸ್ತಾನ ರಕ್ಷಣಾ ಸಚಿವರ ಕರೆ 'ಅತಿರೇಕ'. ಇದು ಯಾವುದೇ ಸರ್ಕಾರದಿಂದ, ವಿಶೇಷವಾಗಿ ಶಾಂತಿಗಾಗಿ ತಟಸ್ಥ ಮಧ್ಯಸ್ಥಗಾರ ಎಂದು ಹೇಳಿಕೊಳ್ಳುವವರಿಂದ ಸಹಿಸಬಹುದಾದಂತಹ ಹೇಳಿಕೆಯಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ X ನಲ್ಲಿ ಪೋಸ್ಟ್ ಮಾಡಿದೆ.
ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಕೂಡ ಪಾಕಿಸ್ತಾನದ ನಾಯಕನ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿದ್ದಾರೆ. ಇದು ಔಪಚಾರಿಕ ಸಂಬಂಧಗಳನ್ನು ಕಾಯ್ದುಕೊಳ್ಳದ ಎರಡು ರಾಷ್ಟ್ರಗಳ ನಡುವಿನ ಅಪರೂಪದ ನೇರ ರಾಜತಾಂತ್ರಿಕ ಮುಖಾಮುಖಿಯಾಗಿದೆ.
'ಇಸ್ಲಾಮಾಬಾದ್ನ ಟೀಕೆಗಳು ಕೇವಲ ರಾಜಕೀಯವಲ್ಲ, ಆದರೆ ದ್ವೇಷಪೂರಿತ ಮತ್ತು ಯಹೂದಿಗಳಿಗೆ ಐತಿಹಾಸಿಕವಾಗಿ ಆಕ್ರಮಣಕಾರಿಯಾಗಿದೆ. ಇಸ್ರೇಲ್ ಅನ್ನು ಅಸ್ತಿತ್ವಕ್ಕೆ ಬೆದರಿಕೆ ಎಂದು ಕರೆಯುವುದು ಸಾಮಾನ್ಯ ಟೀಕೆಯಲ್ಲ, ಇದು ಇಸ್ರೇಲ್ ಅನ್ನು ಸಂಪೂರ್ಣವಾಗಿ ನಾಶಪಡಿಸಬೇಕೆಂದು ಸೂಚಿಸುವ ಭಾಷೆಯಾಗಿದೆ. ತನ್ನ ನಾಶಕ್ಕೆ ಬೆದರಿಕೆಯೊಡ್ಡುವ ಗುಂಪುಗಳು ಅಥವಾ ದೇಶಗಳ ವಿರುದ್ಧ ಅಗತ್ಯವಿದ್ದರೆ ಬಲಪ್ರಯೋಗ ಮಾಡಲು ಇಸ್ರೇಲ್ ಸಿದ್ಧವಾಗಿದೆ' ಎಂದು ಅವರು ಎಚ್ಚರಿಸಿದರು.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಲೆಬನಾನ್ನಲ್ಲಿ ಇಸ್ರೇಲ್ ದಾಳಿಗಳ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಅದರ ನಂತರ ಖವಾಜಾ ಆಸಿಫ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು.
ಇಸ್ರೇಲ್ನಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಆಸಿಫ್ ತಮ್ಮ ಪೋಸ್ಟ್ ಅನ್ನು ಅಳಿಸಿಹಾಕಿದ್ದಾರೆ.
Advertisement