

ಅಮೆರಿಕಾ–ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ನಡುವಲ್ಲೇ ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆ ಕುರಿತು ಇಸ್ಲಾಮಾಬಾದ್ನಲ್ಲಿ ರಾಜತಾಂತ್ರಿಕ ಚಟುವಟಿಕೆಗಳು ಗರಿಗೆದರಿವೆ.
ಅಮೆರಿಕಾ ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ಎರಡೂ ದೇಶಗಳ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ರಾಜತಾಂತ್ರಿಕ ಅಧಿಕಾರಿಗಳು ನಿರಂತರ ಸಂಪರ್ಕ ಸಾಧಿಸುತ್ತಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿನ ಎರಡು ದಿನಗಳಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿರುವುದು ಈ ಬೆಳವಣಿಗೆಗೆ ಹೊಸ ತಿರುವು ನೀಡಿದೆ.
ಇಸ್ಲಾಮಾಬಾದ್ ನಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ಎರಡನೇ ಸುತ್ತಿನವ ಮಾತುಕತೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ ಪಾಕಿಸ್ತಾನದಲ್ಲಿ ನಡೆದ ಮೊದಲ ಹಂತದ ಮಾತುಕತೆಗಳು ಯಾವುದೇ ನಿರ್ಣಾಯಕ ಫಲಿತಾಂಶ ನೀಡದಿದ್ದರೂ, ಮಾತುಕತೆ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದಕ್ಕಿಂತ, ಎರಡೂ ಬದಿಗಳು ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ ಹಂತವೆಂದು ರಾಜತಾಂತ್ರಿಕ ವಲಯಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕೂಡ ಮಾತುಕತೆಗಳು ಮರುರಾರಂಭವಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್ ಅವರೊಂದಿಗೆ ನಡೆದ ಚರ್ಚೆಯ ನಂತರ ಅವರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಅವರು ಕೂಡ ಅಮೆರಿಕಾ-ಇರಾನ್ ನಡುವಿನ ಸಂಧಾನಕ್ಕೆ ತಮ್ಮ ದೇಶದ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಅಮೆರಿಕಾ ಜಾರಿಗೆ ತಂದಿರುವ ನೌಕಾ ದಿಗ್ಭಂಧನ ಜಾಗತಿಕ ಮಟ್ಟದಲ್ಲಿ ತೀವ್ರ ಪರಿಣಾಮಗಳನ್ನು ಬೀರಿವೆ. ವಿಶೇಷವಾಗಿ ಹಾರ್ಮುಜ್ ಮೂಲಕ ಸಾಗುವ ಹಡಗು ಸಂಚಾರಕ್ಕೆ ದೊಡ್ಡ ಮಟ್ಟದ ಅಡಚಣೆ ಉಂಟಾಗಿದೆ.
ಮೊದಲ 24 ಗಂಟೆಗಳಲ್ಲಿ ಯಾವುದೇ ಹಡಗು ತಡೆ ದಾಟದಂತೆ ತಡೆಯಲ್ಪಟ್ಟಿದ್ದು, ಹಲವಾರು ಹಡಗುಗಳನ್ನು ಹಿಂದಿರುಗಿಸಲಾಗಿದೆ. ಇದರಿಂದ ತೈಲ ಬೆಲೆಗಳು ಏರಿಕೆ ಕಂಡು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ.
ಈ ನಡುವೆ ಇರಾನ್ ತನ್ನ ಮೇಲೆ ದಾಳಿ ನಡೆದರೆ ಪರ್ಷಿಯನ್ ಕೊಲ್ಲಿಯ ಪ್ರಮುಖ ಬಂದರುಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಈ ನಡುವೆ ಯುದ್ಧವು ಈಗಾಗಲೇ ಏಳನೇ ವಾರಕ್ಕೆ ಕಾಲಿಟ್ಟಿದ್ದು, ಇರಾನ್, ಲೆಬನಾನ್, ಇಸ್ರೇಲ್ ಸೇರಿದಂತೆ ಹಲವೆಡೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.
ವಾಷಿಂಗ್ಟನ್ನಲ್ಲಿ ಇಸ್ರೇಲ್ ಮತ್ತು ಲೆಬನಾನ್ ರಾಯಭಾರಿಗಳ ನಡುವೆ ನಡೆದ ನೇರ ಮಾತುಕತೆಗಳು ಸಹ ವಿಶ್ವದ ಗಮನ ಸೆಳೆದಿವೆ.
ಇಸ್ರೇಲ್ ರಾಯಭಾರಿ ಯೆಚಿಯೆಲ್ ಲೀಟರ್ ಅವರು ಹಿಜ್ಬುಲ್ಲಾ ವಿರುದ್ಧ ಎರಡೂ ದೇಶಗಳು ಒಂದೇ ನಿಲುವಿನಲ್ಲಿ ಇವೆ ಎಂದು ಹೇಳಿದ್ದಾರೆ. ಲೆಬನಾನ್ ರಾಯಭಾರಿ ನಾದಾ ಹಮಾದೇ ಮೊವಾದ್, ಯುದ್ಧ ಅಂತ್ಯಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಹಿಜ್ಬುಲ್ಲಾ ಜೊತೆಗಿನ ಸಂಘರ್ಷದಿಂದ ಲಕ್ಷಾಂತರ ಮಂದಿ ಸ್ಥಳಾಂತರಗೊಂಡಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.
Advertisement