Nepal floods: ಪ್ರವಾಹ ಬಂದು 5 ದಿನವಾದರೂ ಸುಳಿವಿಲ್ಲ; ನೇಪಾಳದಲ್ಲಿ ನಾಪತ್ತೆಯಾದ ಉತ್ತರ ಪ್ರದೇಶದ 4 ಕಾರ್ಮಿಕರಿಗಾಗಿ ತೀವ್ರ ಹುಡುಕಾಟ

ಪ್ರವಾಹ ಪೀಡಿತ ರಾಸುವಾ ಜಿಲ್ಲೆಯಲ್ಲಿ ಜಲವಿದ್ಯುತ್‌ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಈ ನಾಲ್ವರು ಕಾರ್ಮಿಕರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
hydropower workers from Uttar Pradesh untraceable
ನೇಪಾಳ ಪ್ರವಾಹದಲ್ಲಿ ಉತ್ತರ ಪ್ರದೇಶ ಕಾರ್ಮಿಕರು ನಾಪತ್ತೆ
Updated on

ಲಖನೌ: ನೇಪಾಳದಲ್ಲಿ ಆಗಸ್ಟ್‌ 26ರಂದು ಸಂಭವಿಸಿದ ಭೀಕರ ಹಠಾತ್‌ ಪ್ರವಾಹದ ಬಳಿಕ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ನಾಲ್ವರು ಜಲವಿದ್ಯುತ್‌ ಕಾರ್ಮಿಕರು ನಾಪತ್ತೆಯಾಗಿದ್ದಾರೆ.

ಪ್ರವಾಹ ಪೀಡಿತ ರಾಸುವಾ ಜಿಲ್ಲೆಯಲ್ಲಿ ಜಲವಿದ್ಯುತ್‌ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಈ ನಾಲ್ವರು ಕಾರ್ಮಿಕರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಇದರ ನಡುವೆ ಬಿಹಾರದ ಮೊತಿಹಾರಿಯ 11 ವರ್ಷದ ಬಾಲಕನೊಬ್ಬ ತನ್ನ ತಂದೆಗಾಗಿ ಕುಶಿನಗರದ ಗಂಡಕ್‌ ನದಿ ತೀರದಲ್ಲಿ ಹುಡುಕಾಟ ನಡೆಸುತ್ತಿರುವುದು ಮನಕಲಕುವಂತಿದೆ.

ಪ್ರವಾಹದ ವೇಳೆ ನಾಪತ್ತೆಯಾದ ತಂದೆಗಾಗಿ ಬಾಲಕ ಮತ್ತು ಆತನ ಮೂವರು ಸಹೋದರರು ನೇಪಾಳದಿಂದ ಅಧಿಕಾರಿಗಳ ನೆರವಿನೊಂದಿಗೆ ಭಾರತಕ್ಕೆ ಮರಳಿದ್ದಾರೆ.

hydropower workers from Uttar Pradesh untraceable
‘ಮತ್ತೆ ಕಟ್ಟುತ್ತೇವೆ’! ನೇಪಾಳ ಪ್ರವಾಹದ ಬಳಿಕ ಅವಶೇಷ ನಡುವೆ ಬದುಕು ಕಟ್ಟಿಕೊಳ್ಳಲು ಪರದಾಟ, ಆಹಾರ, ನೀರು, ಔಷಧಿಗಾಗಿ ಸಂತ್ರಸ್ಥರ ಸಂಕಷ್ಟ

9 ಜಲವಿದ್ಯುತ್‌ ಯೋಜನೆಗಳಲ್ಲಿ 537 ಮಂದಿಯ ಸುಳಿವಿಲ್ಲ

ನೇಪಾಳದ ಪ್ರವಾಹ ಪೀಡಿತ ರಾಸುವಾ ಮತ್ತು ನುವಾಕೋಟ್ ಜಿಲ್ಲೆಗಳ ಒಂಬತ್ತು ಜಲವಿದ್ಯುತ್‌ ಯೋಜನೆಗಳಲ್ಲಿ 537 ಕಾರ್ಮಿಕರು ಮತ್ತು ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಮಣ್ಣು ಮತ್ತು ಅವಶೇಷಗಳಿಂದ ಮುಚ್ಚಿಹೋಗಿರುವ ಸುರಂಗಗಳೊಳಗೆ ಹಲವರು ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.

ನೇಪಾಳದ ಇಂಡಿಪೆಂಡೆಂಟ್‌ ಪವರ್‌ ಪ್ರೊಡ್ಯೂಸರ್ಸ್‌ ಅಸೋಸಿಯೇಷನ್‌ ಪ್ರಕಾರ, ಆಗಸ್ಟ್‌ 26ರ ಪ್ರವಾಹದ ಬಳಿಕ ಆರಂಭದಲ್ಲಿ 898 ಕಾರ್ಮಿಕರು ಮತ್ತು ಸಿಬ್ಬಂದಿಯ ಸಂಪರ್ಕ ಕಡಿತಗೊಂಡಿತ್ತು. ಈ ಪೈಕಿ 361 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ. ಇನ್ನೂ 537 ಮಂದಿ ನಾಪತ್ತೆಯಾಗಿದ್ದಾರೆ.

300 ಮಂದಿ ಸುರಂಗದೊಳಗೆ ಸಿಲುಕಿರುವ ಶಂಕೆ

ಅತ್ಯಂತ ಗಂಭೀರ ಪರಿಸ್ಥಿತಿ ರಾಸುವಾ ಜಿಲ್ಲೆಯ 216 ಮೆಗಾವಾಟ್‌ ಸಾಮರ್ಥ್ಯದ ಅಪ್ಪರ್‌ ತ್ರಿಶೂಲಿ-1 ಜಲವಿದ್ಯುತ್‌ ಯೋಜನೆಯಲ್ಲಿ ನಿರ್ಮಾಣವಾಗಿದೆ. ಇಲ್ಲಿ ಸುಮಾರು 300 ಮಂದಿ ಸುರಂಗದೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಪ್ರವಾಹದ ರಭಸಕ್ಕೆ ಸುರಂಗದ ಪ್ರವೇಶ ದ್ವಾರಗಳು ಭಾರಿ ಪ್ರಮಾಣದ ಮಣ್ಣು ಮತ್ತು ಅವಶೇಷಗಳಿಂದ ಮುಚ್ಚಿಹೋಗಿವೆ. ರಕ್ಷಣಾ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿ ಒಳಗೆ ಸಿಲುಕಿರುವ ಕಾರ್ಮಿಕರನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ.

ಅಪ್ಪರ್‌ ತ್ರಿಶೂಲಿ-3ಎ ಮತ್ತು ಚಿಲಿಮೆ ಸೇರಿದಂತೆ ಇತರ ಜಲವಿದ್ಯುತ್‌ ಯೋಜನೆಗಳಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ಸುರಂಗಗಳ ಪ್ರವೇಶ ದ್ವಾರಗಳನ್ನು ಆವರಿಸಿರುವ ಕೆಸರು, ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸುವುದು ರಕ್ಷಣಾ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

hydropower workers from Uttar Pradesh untraceable
Nepal Floods: ‘ಪ್ರವಾಹ ಬರುತ್ತಿದೆ, ಓಡಿ’..; ಶಿಕ್ಷಕನ ಸಮಯಪ್ರಜ್ಞೆಯಿಂದ 1,643 ಮಕ್ಕಳ ಜೀವರಕ್ಷಣೆ

ತಂದೆಗಾಗಿ ಗಂಡಕ್‌ ದಡದಲ್ಲಿ ಬಾಲಕನ ಹುಡುಕಾಟ

ನೇಪಾಳದ ಪ್ರವಾಹ ದುರಂತದ ಮತ್ತೊಂದು ಮನಕಲಕುವ ವರದಿ ಬೆಳಕಿಗೆ ಬಂದಿದೆ. ಬಿಹಾರದ ಮೊತಿಹಾರಿಯ 11 ವರ್ಷದ ಬಾಲಕ ತನ್ನ ನಾಪತ್ತೆಯಾದ ತಂದೆಗಾಗಿ ಕುಶಿನಗರದಲ್ಲಿ ಗಂಡಕ್‌ ನದಿಯ ದಡದಲ್ಲಿ ಹುಡುಕಾಟ ನಡೆಸುತ್ತಿದ್ದಾನೆ.

ಪ್ರವಾಹದ ವೇಳೆ ತಂದೆ ನಾಪತ್ತೆಯಾಗಿದ್ದು, ಬಾಲಕ ಹಾಗೂ ಆತನ ಮೂವರು ಸಹೋದರರು ಅಧಿಕಾರಿಗಳ ನೆರವಿನಿಂದ ನೇಪಾಳದಿಂದ ಭಾರತಕ್ಕೆ ಮರಳಿದ್ದಾರೆ. ಆದರೆ ತಂದೆಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಬಾಲಕ ನದಿಯಂಚಿನಲ್ಲಿ ಹುಡುಕಾಟ ಮುಂದುವರಿಸಿದ್ದಾನೆ.

ನೇಪಾಳದ ಪ್ರವಾಹ ದುರಂತದ ಬಳಿಕ ಒಂದೆಡೆ ರಕ್ಷಣಾ ತಂಡಗಳು ಮಣ್ಣಿನಡಿ ಮತ್ತು ಸುರಂಗಗಳೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಹೋರಾಡುತ್ತಿದ್ದರೆ, ಮತ್ತೊಂದೆಡೆ ನಾಪತ್ತೆಯಾದ ಕುಟುಂಬ ಸದಸ್ಯರಿಗಾಗಿ ಸಂಬಂಧಿಕರು ಕಾತರದಿಂದ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com