

ಟೆಲ್ ಅವೀವ್: ಭಾರತ ಮತ್ತು ಇಸ್ರೇಲ್ ಗುರುವಾರ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕೃಷಿ, ಶಿಕ್ಷಣ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ ಸರಣಿ ಒಪ್ಪಂದಗಳು ಹಾಗೂ ಒಡಂಬಡಿಕೆ(MoU)ಗೆ ಸಹಿ ಹಾಕಿವೆ.
ಎರಡು ದಿನಗಳ ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜೆರುಸಲೆಮ್ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಮ್ಮುಖದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಿದರು. ಇದು ಎರಡೂ ದೇಶಗಳ ನಡುವಿನ ವಿಸ್ತರಿಸುತ್ತಿರುವ ಕಾರ್ಯತಂತ್ರ, ತಾಂತ್ರಿಕ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಒತ್ತಿಹೇಳುತ್ತದೆ.
ಈ ಒಪ್ಪಂದಗಳು ನಾವೀನ್ಯತೆ, ಕೃಷಿ, ಭೂಭೌತಿಕ ಪರಿಶೋಧನೆ, ಕಡಲ ಪರಂಪರೆ, ಮೀನುಗಾರಿಕೆ ಮತ್ತು ಜಲಚರ ಸಾಕಣೆ, ಕೃತಕ ಬುದ್ಧಿಮತ್ತೆ, ಶಿಕ್ಷಣ, ವಾಣಿಜ್ಯ ಮತ್ತು ಸೈಬರ್ ಭದ್ರತೆಯನ್ನು ಒಳಗೊಂಡಿವೆ.
ಸಾಂಸ್ಕೃತಿಕ ವಿನಿಮಯ ಒಪ್ಪಂದ ಮತ್ತು ಭಾರತ-ಇಸ್ರೇಲ್ ಕೃಷಿ ನಾವೀನ್ಯತೆ ಕೇಂದ್ರವನ್ನು ಸ್ಥಾಪಿಸುವ ಒಪ್ಪಂದಕ್ಕೆ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಹಿ ಹಾಕಿದರು.
ಭೂಭೌತಿಕ ಪರಿಶೋಧನೆ ಕುರಿತು ಒಪ್ಪಂದಕ್ಕೆ ಇಸ್ರೇಲ್ನ ಇಂಧನ ಮತ್ತು ಮೂಲಸೌಕರ್ಯ ಸಚಿವರು ಹಾಗೂ ಜೈಶಂಕರ್ ಸಹಿ ಹಾಕಿದರು. ಲೋಥಾಲ್ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣದ ಅಭಿವೃದ್ಧಿಯ ಸಹಯೋಗಕ್ಕಾಗಿ ಮತ್ತೊಂದು ಒಪ್ಪಂದಕ್ಕೂ ಸಹಿ ಹಾಕಲಾಯಿತು.
AI-UPI ಒಪ್ಪಂದ
ಕೃತಕ ಬುದ್ಧಿಮತ್ತೆಯ ಬಳಕೆಯ ಮೂಲಕ ಶಿಕ್ಷಣವನ್ನು ಮುನ್ನಡೆಸುವ ಒಪ್ಪಂದಕ್ಕೂ ಎರಡೂ ಕಡೆಯವರು ಸಹಿ ಹಾಕಿದರು. ಇಸ್ರೇಲ್ನ ಶಿಕ್ಷಣ ಸಚಿವರು ಮತ್ತು ಜೈಶಂಕರ್ ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು. ಇದು ಭವಿಷ್ಯದ ತಂತ್ರಜ್ಞಾನದ ಮೇಲೆ ಎರಡೂ ದೇಶಗಳ ಹಿಡಿತವನ್ನು ಬಲಪಡಿಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತ-ಇಸ್ರೇಲ್ ಶೈಕ್ಷಣಿಕ ವೇದಿಕೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ತಂತ್ರಜ್ಞಾನದ ಜಗತ್ತಿನಲ್ಲಿ ಭಾರತದ ಯುಪಿಐ ವ್ಯವಸ್ಥೆ ಈಗ ಇಸ್ರೇಲಿಗೂ ಲಗ್ಗೆ ಇಟ್ಟಿದೆ. ಆರ್ಥಿಕ ಸಂಪರ್ಕವನ್ನು ಬಲಪಡಿಸಲು ಯುಪಿಐಗೆ ಸಂಬಂಧಿಸಿದ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ.
ಕೃಷಿ ಕೇಂದ್ರಗಳ ಸಂಖ್ಯೆ 100ಕ್ಕೆ ಏರಿಕೆ
ಭಾರತೀಯ ರೈತರಿಗೆ ಪ್ರಧಾನಿ ಮೋದಿಯ ಈ ಭೇಟಿಯು ಅತ್ಯಂತ ಮಹತ್ವದ ಸುದ್ದಿಯನ್ನು ತಂದಿದೆ. ಭಾರತದಲ್ಲಿ ಇಸ್ರೇಲ್ ಕೃಷಿ ಕೇಂದ್ರಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ದೇಶಾದ್ಯಂತ ಶ್ರೇಷ್ಠತೆಯ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು, ಅಲ್ಲಿ ಇಸ್ರೇಲ್ನ ಸುಧಾರಿತ ತಂತ್ರಜ್ಞಾನವನ್ನು ಬಳಸಿ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದರೊಂದಿಗೆ ಕೃಷಿ ನಾವೀನ್ಯತೆ ಕೇಂದ್ರದ ಸ್ಥಾಪನೆಯು ಭಾರತದ ಗ್ರಾಮೀಣ ಭಾಗದ ಆರ್ಥಿಕತೆಯನ್ನು ಬದಲಿಸುವ ಗುರಿ ಹೊಂದಿದೆ.
Advertisement