"ನಿಮ್ಮ ಶಸ್ತ್ರಾಸ್ತ್ರಗಳು ಭಾರತದ ವಿರುದ್ಧ ಬಳಕೆಯಾಗಿವೆ": ರಷ್ಯಾ ತೈಲ ಖರೀದಿ ಸಮರ್ಥಿಸಿ, ಯುರೋಪ್ ದೇಶಗಳ ದ್ವಿಮುಖ ನೀತಿ ಬೆತ್ತಲು ಮಾಡಿದ ಜೈಶಂಕರ್..!

ಯಾವುದೇ ಯುರೋಪಿನ ದೇಶದ ಮೇಲೆ ಭಾರತೀಯ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆದಿಲ್ಲ. ಆದರೆ, ಭಾರತದ ವಿರುದ್ಧ ಯುರೋಪಿನ ಶಸ್ತ್ರಾಸ್ತ್ರಗಳು ಬಳಸಲ್ಪಟ್ಟಿವೆ.
S Jaishankar
ಜೈಶಂಕರ್
Updated on

ಹೆಲ್ಸಿಂಕಿ (ಫಿನ್‌ಲ್ಯಾಂಡ್): ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿಸುತ್ತಿರುವುದನ್ನು ಟೀಕಿಸಿರುವ ಯುರೋಪಿನ ದೇಶಗಳಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ತನ್ನ ಇಂಧನ ಅಗತ್ಯಗಳನ್ನು ಬೆಲೆ ಮತ್ತು ಲಭ್ಯತೆಯ ಆಧಾರದ ಮೇಲೆ ನಿರ್ಧರಿಸುತ್ತದೆಯೇ ಹೊರತು ಯಾವುದೇ ರಾಜಕೀಯ ಒತ್ತಡದ ಆಧಾರದ ಮೇಲೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫಿನ್‌ಲ್ಯಾಂಡ್‌ನಲ್ಲಿ ನಡೆದ 'ಕುಲ್ತಾರಂತ ಟಾಕ್ಸ್' (Kultaranta Talks) ಸಮ್ಮೇಳನದಲ್ಲಿ ಮಾತನಾಡಿದ ಜೈಶಂಕರ್, ಭಾರತ ರಷ್ಯಾ ಪರ ಮೃದು ನಿಲುವು ತಾಳಿದೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ರಷ್ಯನ್ ತೈಲ ಖರೀದಿಸಿದೆ ಎಂಬ ಟೀಕೆಗೆ ಉತ್ತರಿಸಿದರು.

ನಾವು ತೈಲ ಖರೀದಿಸುವುದು ಅದರ ಬೆಲೆ ಮತ್ತು ಲಭ್ಯತೆಯನ್ನು ಆಧರಿಸಿ. ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಬಹುತೇಕ ತೈಲ ರಷ್ಯಾದದ್ದಾಗಿತ್ತು. ಯುರೋಪಿನ ರಾಷ್ಟ್ರಗಳು ಮಧ್ಯಪ್ರಾಚ್ಯದ ತೈಲವನ್ನು ಹೆಚ್ಚಾಗಿ ಖರೀದಿಸುತ್ತಿದ್ದರಿಂದ, ಭಾರತದ ಸಾಂಪ್ರದಾಯಿಕ ಪೂರೈಕೆ ಮೂಲಗಳು ಸೀಮಿತವಾಗಿದ್ದವು. ಪರಿಸ್ಥಿತಿಯೇ ನಮ್ಮನ್ನು ಆ ದಿಕ್ಕಿನಲ್ಲಿ ಸಾಗುವಂತೆ ಮಾಡಿತು,” ಎಂದು ಹೇಳಿದರು.

ಯುರೋಪಿನ ರಾಷ್ಟ್ರಗಳ ಟೀಕೆಗೆ ಪ್ರತಿಕ್ರಿಯಿಸಿದ ಜೈಶಂಕರ್, ಭಾರತದ ಭದ್ರತಾ ಹಿತಾಸಕ್ತಿಗಳ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳ ದ್ವಂದ್ವ ನಿಲುವನ್ನು ಪ್ರಶ್ನಿಸಿದರು.

“ಯಾವುದೇ ಯುರೋಪಿನ ದೇಶದ ಮೇಲೆ ಭಾರತೀಯ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆದಿಲ್ಲ. ಆದರೆ, ಭಾರತದ ವಿರುದ್ಧ ಯುರೋಪಿನ ಶಸ್ತ್ರಾಸ್ತ್ರಗಳು ಬಳಸಲ್ಪಟ್ಟಿವೆ ಎಂದು ನಾನು ಹೇಳಬಲ್ಲೆ,” ಎಂದು ಹೇಳಿದರು.

S Jaishankar
ವಾಣಿಜ್ಯ ಹಡಗುಗಳ ಮೇಲಿನ ದಾಳಿ ಒಪ್ಪಲು ಸಾಧ್ಯವಿಲ್ಲ, ಸಮುದ್ರ ಮಾರ್ಗಗಳ ಭದ್ರತೆ ಕಾಪಾಡಿ: ವಿಶ್ವಸಂಸ್ಥೆಯಲ್ಲಿ ಭಾರತ ಗುಡುಗು

ಮುಂದುವರಿದು, “ಹಲವು ವರ್ಷಗಳಿಂದ ಯುರೋಪಿನ ದೇಶಗಳು ಮಾರಾಟ ಮಾಡಿದ ಶಸ್ತ್ರಾಸ್ತ್ರಗಳು ಭಾರತದ ವಿರುದ್ಧ ಬಳಸಲ್ಪಟ್ಟಿವೆ. ಭಾರತ ಎಂದಿಗೂ ಯುರೋಪಿನ ಭದ್ರತೆಗೆ ಧಕ್ಕೆ ತರುವಂತಹ ಕೆಲಸ ಮಾಡಿಲ್ಲ. ಆದ್ದರಿಂದ ಇದು ನ್ಯಾಯಸಮ್ಮತವಾದ ಪ್ರಶ್ನೆ,” ಎಂದು ತಿಳಿಸಿದರು.

2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾದ ಅಸ್ಥಿರತೆಯನ್ನು ಉಲ್ಲೇಖಿಸಿದ ಜೈಶಂಕರ್, ಆ ಸಂದರ್ಭದಲ್ಲಿ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಭಾರತ ಪ್ರಮುಖ ಪಾತ್ರ ವಹಿಸಿತ್ತು ಎಂದು ಹೇಳಿದರು.

ಆ ಸಮಯದಲ್ಲಿ ಜಾಗತಿಕ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ರಷ್ಯಾದ ತೈಲ ಖರೀದಿಸುವಂತೆ ಅಮೆರಿಕವೇ ಭಾರತಕ್ಕೆ ಸಲಹೆ ನೀಡಿತ್ತು. ನಾವು ಯಾವಾಗಲೂ ಬೆಲೆ ಮತ್ತು ಲಭ್ಯತೆಯ ಆಧಾರದ ಮೇಲೆ ತೈಲ ಖರೀದಿಸುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಇಂಧನ ಭದ್ರತೆ, ವ್ಯಾಪಾರ ಮತ್ತು ಭೌಗೋಳಿಕ ರಾಜಕೀಯ ವಿಷಯಗಳಲ್ಲಿ ಆಯ್ದ ವಿಷಯಗಳಿಗೆ ಮಾತ್ರ ನೈತಿಕತೆಯ ಮಾನದಂಡಗಳನ್ನು ಅನ್ವಯಿಸುವುದು ಸರಿಯಲ್ಲ ಎಂದು ಪರೋಕ್ಷವಾಗಿ ಟೀಕಿಸಿದ ಜೈಶಂಕರ್, ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸ್ವತಂತ್ರ ವಿದೇಶಾಂಗ ನೀತಿಯನ್ನು ಮುಂದುವರಿಸಲಿದೆ ಎಂಬ ಸಂದೇಶವನ್ನು ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com