ಕಡಿಮೆ ಹೂಡಿಕೆ ಮತ್ತು ಹೆಚ್ಚು ಆದಾಯ ಪಡೆಯಲು ಹರಸಾಹಸ ಪಡುವ ವಾಣಿಜ್ಯೋದ್ಯಮಿಗಳಿಗಿಂತ ಭೂತಾಯಿಯ ಮಡಿಲಲ್ಲಿ ಕಡಿಮೆ ಕಾಲಾವಧಿ ಮತ್ತು ವೆಚ್ಚದಲ್ಲಿ ಹೆಚ್ಚಿನ ಇಳುವರಿಯನ್ನು ಮಿಶ್ರ ಬೆಳೆ ಪದ್ದತಿ ಮೂಲಕ ಪಡೆಯಬಹುದು ಎಂಬುದನ್ನು ಜಮಖಂಡಿ ತಾಲ್ಲೂಕಿನ ಹಳಿಂಗಳಿಯ ರೈತ ಧನಪಾಲ್ ಯಲ್ಲಟ್ಟಿ ತೋರಿಸಿಕೊಟ್ಟಿದ್ದಾರೆ.
2010ರಲ್ಲಿ ಕೃಷಿ ಪಂಡಿತ ಮತ್ತು 2012ರಲ್ಲಿ ಕೃಷಿರತ್ನ ಪ್ರಶಸ್ತಿ ಪಡೆದಿರುವ ಹಳಿಂಗಳಿಯ ಧನಪಾಲ್ ಯಲ್ಲಟ್ಟಿ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ 4 ಮಿಶ್ರ ಬೆಳೆಯನ್ನು ಬೆಳೆದು ಕೇವಲ ಐದುವರೆ ತಿಂಗಳಲ್ಲಿ 7 ಲಕ್ಷಕ್ಕೂ ಅಧಿಕ ಲಾಭ ಗಳಿಸಿ, ಕಡಿಮೆ ನೆಲದಲ್ಲೂ ಹೆಚ್ಚಿನ ವರಮಾನ ಪಡೆಯಬಹುದೆಂಬುದನ್ನು ನಿರೂಪಿಸಿದ್ದಾರೆ. ಇವರು ಕಲಿತಿದ್ದು ಮಾತ್ರ ಎಸ್ಎಸ್ಎಲ್ಸಿ. ಆದರೆ ಕೃಷಿಯಲ್ಲಿ ಮಾತ್ರ ಹಲವಾರು ಬಗೆಯ ವಿಭಿನ್ನ ಪ್ರಯೋಗಗಳನ್ನು ಮಾಡಿದ್ದಾರೆ.
ರಬಕವಿಗೆ ಸಮೀಪದ ಹಳಿಂಗಳಿ ತೇರದಾಳ ರಸ್ತೆಯ ಹತ್ತಿರದ ತಮ್ಮ ತೋಟದಲ್ಲಿ ಒಂದೂವರೆ ಎಕರೆ ಭೂಮಿಯನ್ನು ಮಿಶ್ರ ಬೆಳೆ ಬೆಳೆಯಲು ನಿರ್ಧರಿಸಿ ಮೊದಲು ಡಿಎಪಿ 1 ಕ್ವಿಂಟಾಲ್, ಪೋಟ್ಯಾಷ 50 ಕೆಜಿ, ಆಮಿನೋ ಐ - 16 ಕೆಜಿ, ಗ್ರೀನ್ ಕ್ರಾಪ್ 108 - 20 ಕೆಜಿ, 1ಕ್ವಿಂಟಾಲ ಬೇವಿನ ಹಿಂಡಿ, ಎಸ್ಎಪಿ 80ಕೆಜಿ ಹಾಕಿ ಸಾಲಿನಿಂದ ಸಾಲಿಗೆ 5 -ಫೂಟ್ ಬೆಡ್ಡ್ ಸಿಸ್ಟಿಮ್ ಮಾಡಿ ಮಲ್ಚಿಂಗ್ ಪೇಪರನಲ್ಲಿ ಹನಿ ನೀರಾವರಿ ಅಳವಡಿಸಿ ಗುಣಿಯಿಂದ ಗುಣಿಗೆ ಒಂದೂವರೆ ಪೂಟ್ಗೆ ಶುಗರ ಕ್ವೀನ್ ತಳಿಯ ಕಲ್ಲಂಗಡಿಯನ್ನು ಒಂದು ವರೆ ಎಕರೆಗೆ 7000 ಸಸಿ ನಾಟಿ ಮಾಡಲಾಗಿದ್ದು, ಆದರಂತೆ ಒಂದು ಲೈನ ಮಧ್ಯದಲ್ಲಿ 4 ಫೂಟ್ಗೆ ಒಂದು ಬದನೆ ಗಿಡದಂತೆ 400 ಗಿಡ ನೆಡಲಾಗಿದೆ. ಬದನೆಯ ಎರಡು ಮಧ್ಯದಲ್ಲಿ ಮೆನಸಿನ ಗಿಡ ಹಾಗೂ ಎದುರು ಬದಿರುನಲ್ಲಿ ಸವತೆ ಸಸಿಯನ್ನು ನಾಟಿ ಮಾಡಿದ್ದೇವೆ ಎನ್ನುತ್ತಾರೆ ಧನಪಾಲ.
ಪ್ರತಿ 4 ದಿನಗಳಿಗೊಮ್ಮೆ ವಾತಾವರಣಕ್ಕೆ ಅನುಗುಣವಾಗಿ ಕಾರ್ಬನ ಡೈಜಿಮ್, ಹೆಗ್ಜಾಕೊನಾಜೋಲ್, ಪ್ರೋಪಿಕೊನಾಜೋಲ್ನಂತಹ ಶಿಲಿಂಧ್ರ ನಾಶಕ ಸಿಂಪಡಿಸುವುದರ ಜೊತೆಗೆ ಬೆಳೆಯ ಬೆಳವಣಿಗೆಗೆ ಉತ್ತೇಜನ ಒದಗಿಸುವ ಸಲುವಾಗಿ ಆ್ಯಂಪಲ್, ಮಿಂಗಲ್ ಮತ್ತು ಉಪಮ್ ನಂತಹ ಸಿಂಪರಣೆಗಳನ್ನು ನೀಡಿದ್ದಾರೆ ಮತ್ತು ಹಚ್ಚಿದ ಎಂಟು ದಿನಗಳ ನಂತರ ಪ್ರತಿ 2ದಿನಕ್ಕೊಮ್ಮೆ ನೀರಿನಲ್ಲಿ ಕರಗುವ ಎಸ್ಎಪಿ, ಸಾರಜನಕ, 19:19:19, 12:61, 30:0:45, 0:0:50 ಗೊಬ್ಬರಗಳನ್ನು ಬಳಸಲಾಗಿದೆ. ಬೆಳೆಗಳಿಗೆ ಡ್ರಿಪ್ ಮೂಲಕ ನೀರು ಒದಗಿಸಲಾಗುತ್ತಿದ್ದು, ಹಚ್ಚಿದ 1 ರಿಂದ 10 ದಿನಗಳ ವರೆಗೆ ಒಂದು ದಿನಕ್ಕೆ 20 ನಿಮಿಷ, 10 ರಿಂದ 20 ದಿನಗಳ ವರೆಗೆ 30ರಿಂದ 40 ನಿಮಿಷ, 20 ರಿಂದ 35 ದಿನಗಳವರೆಗೆ 1 ತಾಸು, 35ರಿಂದ 45 ದಿನಗಳವರೆಗೆ 1 ವರೆ ತಾಸು, 45ರಿಂದ 50ದಿನಗಳ ವರೆಗೆ 2 ತಾಸು ನಂತರ 50 ರಿಂದ 55 ದಿನಗಳವರೆಗೆ 1 ತಾಸು ಹೀಗೆ ದಿನಕಳೆದಂತೆ ನೀರಿನ ಪ್ರಮಾಣ ಕಡಿಮೆ ಮಾಡುತ್ತಾ ಬಂದಿದ್ದೇವೆ ಇದರಿಂದ ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಹಾಗೂ ಲಾಭ ಮಾಡಿಕೊಳ್ಳಬಹುದು ಎಂದು ಧನಪಾಲ್ ಹೇಳುತ್ತಾರೆ.
ಕಲ್ಲಂಗಡಿಗೆ ಸದ್ಯ ಮಾರುಕಟ್ಟೆಯಲ್ಲಿ ರೂ. 14 ಬೆಲೆ ಇದ್ದು ಎಕರೆಗೆ 40 ಟನ್ ಕಲ್ಲಂಗಡಿ ಇಳುವರಿಯಿಂದ 6ಲಕ್ಷ, ಹಾಗೂ ಬದನೆ ಇಳುವರಿ 10 ಟನ್ ರೂ. 10 ರಂತೆ ಹಿಡಿದರೆ 1ಲಕ್ಷ ಹಾಗೂ ಸವತೆಕಾಯಿ 10 ಟನ್ ಇಳುವರಿ ಬಂದರೆ ರೂ. 10 ಬೆಲೆ ಮಾರಾಟವಾಗುತ್ತಿದ್ದು 1ಲಕ್ಷ ಗಳಿಸಬಹುದು. ಇನ್ನೂಳಿದ ಮೆನಸಿನ ಕಾಯಿ ಆದರಿಂದಲ್ಲೂ ಸಾಕಷ್ಟು ಆದಾಯ ನಿರೀಕ್ಷೆಯಲ್ಲಿದ್ದೇವೆ. ಒಟ್ಟು ಖರ್ಚು 1ಲಕ್ಷ ತೆಗೆದರೆ ಸುಮಾರು 7 ಲಕ್ಷ ಆದಾಯ ಕಟ್ಟಿಟ್ಟ ಬುತ್ತಿ ಮಾರುಕಟ್ಟೆ ಉತ್ತಮವಾಗಿದ್ದು ಬದನೆಯಿಂದ ಇನ್ನೂ ಹೆಚ್ಚಿನ ಆದಾಯ ಪಡೆಯಬಹುದು ಎನ್ನುತ್ತಾರೆ.
ಸಧ್ಯ ಕಲ್ಲಂಗಡಿಗೆ ಗೋವಾ, ಕೋಲ್ಲಾಪೂರ, ಮುಂಬಯಿ ಉತ್ತಮ ಮಾರುಕಟ್ಟೆಗಳಾಗಿದ್ದು, ದಲ್ಲಾಳಿಗಳು ಇಲ್ಲೆ ಬಂದು ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳ ನಿರ್ವಹಣೆಯಲ್ಲಿ ಸಾಕಷ್ಟು ಪರಿಣಿತಿ ಹೊಂದಿರುವ ಧನಪಾಲ್ ಯಲ್ಲಟ್ಟಿ ಕಡಿಮೆ ಹೂಡಿಕೆ ಮತ್ತು ಅವ„ಯಲ್ಲಿ ಹೆಚ್ಚು ವರಮಾನ ಪಡೆಯುವ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಾ ಅಕ್ಕಪಕ್ಕದ ಪ್ರದೇಶದ ರೈತರಿಗೆ ಮಾದರಿಯಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಧನಪಾಲ ಎನ್. ಯಲ್ಲಟ್ಟಿ, ಹಳಿಂಗಳಿ ಗ್ರಾಮ, ತಾ. ಜಮಖಂಡಿ ಜಿ. ಬಾಗಲಕೋಟ ಮೊ: 9900030678 ಗೆ ಸಂಪರ್ಕಿಸಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos