ಸಹೋದರ ಸಹೋದರಿಯರ ಭಾವ ಸಂಬಂಧಗಳಿಗೆ ಪ್ರತೀಕ ಈ ನಾಗರಪಂಚಮಿ. ಅಣ್ಣನ ಒಳಿತಿನ ಬಗ್ಗೆ ನಾಗದೇವರಲ್ಲಿ ಪ್ರಾರ್ಥಿಸುವ ತಂಗಿಯರ ಹಬ್ಬ. ತಂಗಿಯರನ್ನು ತವರಿಗೆ ಬಾ ಎಂದು ಅಣ್ಣಂದಿರು ಕರೆಯುವ ಹಬ್ಬ.
ಉತ್ತರ ಭಾರತದಲ್ಲಿ ರಕ್ಷಾ ಬಂಧನ ಎಂದು ಆಚರಿಸಿದರೇ, ದಕ್ಷಿಣ ಭಾರತದಲ್ಲಿ ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅಣ್ಣ ಆಯಸ್ಸು, ಆರೋಗ್ಯ ಮತ್ತು ತವರು ಮನೆ ಸಂಪತ್ತು ವೃದ್ಧಿಗೊಳ್ಳುವುದಕ್ಕೆ ಹೆಣ್ಣುಮಕ್ಕಳು ಮಾಡುವಂತಹ ಪೂಜೆ.
ನಾಗದೇವತೆಗಳಿಗೆ ಅನುಗ್ರಹ ಮತ್ತು ನಿಗ್ರಹ ಮಾಡುವ ಶಕ್ತಿಗಳಿರುವುದರಿಂದ ಹೆಣ್ಣುಮಕ್ಕಳು ತನ್ನ ಅಣ್ಣನ ಒಳಿತಿಗಾಗಿ ನಾಗನಲ್ಲಿ ಪ್ರಾರ್ಥಿಸುತ್ತಾರೆ. ಅಕ್ಕತಂಗಿಯರು ಅಣ್ಣತಮ್ಮಂದಿರ ಬೆನ್ನಿಗೆ ಹಾಲು ಎರೆದು ತಂದ ಹುತ್ತದ ಮಣ್ಣನ್ನು ಹಚ್ಚುವ ಮೂಲಕ ತವರು ತಂಪಾಗಿರಲಿ ಎಂದು ಹಾರೈಸುತ್ತಾರೆ. ಸಹೋದರಿಯರ ಹಾರೈಕೆಗೆ ಸಂತೋಷಗೊಂಡ ಸಹೋದರರು ಪ್ರೀತಿಯ ಅಕ್ಕ ತಂಗಿಯರಿಗೆ ಉಡುಗೊರೆ ಕೊಟ್ಟು ಸಂಭ್ರಮಿಸುತ್ತಾರೆ.
ಅಣ್ಣ ತಂಗಿಯರ ಹಬ್ಬವೇಕೆ?
ಬಡ ಬ್ರಾಹ್ಮಣನ ಮಗಳು ಅಕಮಂಜಿ ಎಂಬಾಕೆ ಗರುಡಪಂಚಮಿ ವ್ರತ ಮಾಡಬೇಕು, ಅದಕ್ಕೆ ಫಲ ಪುಷ್ಪಗಳನ್ನು ತರು ಎಂದು ತನ್ನ ಅಣ್ಣನಿಗೆ ಹೇಳುತ್ತಾಳೆ. ತಂಗಿ ಮಾತನು ಕೇಳಿದ ಅಣ್ಣನು, ವ್ರತಕ್ಕೆ ಚೆಂದದಾ ಕುಸುಮವನೆ ತರುವೇ ಎಂದು ಕೇದಿಗೆ ಒಳಗೆ ಹೋದಾಗ ಶೇಷ ಕಚ್ಚುತ್ತಾನೆ. ಇದರಿಂದ ಮೆಯೆಲ್ಲಾ ವಿಷ ಹರಡಿ ಸಾವನ್ನಪ್ಪುತ್ತಾನೆ.
ವಿಷಯ ತಿಳಿದ ತಂಗಿ ದುಃಖಿಸುತ್ತಿರುವಾಗ, ನೀನು ನಾಗರನನ್ನು ಪೂಜಿಸು, ಅಣ್ಣಾ ಬದುಕುತ್ತಾನೆ ಎಂದು ಮುತ್ತೈದೆಯರು ಹೇಳುತ್ತಾರೆ. ಆಗ ಅಕಮಂಜಿ ತನ್ನ ಅಣ್ಣ ಪ್ರಾಣಕ್ಕಾಗಿ ಪ್ರಾರ್ಥಿಸುತ್ತಾ, ನೆನೆ ಅಕ್ಕಿ, ನೆನೆಕಡಲೆ, ಗೊನೆಯ ಬಾಳೆಹಣ್ಣು, ಚಿಗುಳಿ ತಂಬಿಟ್ಟು, ತೆಂಗಿನಕಾಯಿ, ಅರಳು ಹುರಿ, ಕಡಲೆ ಹುಣಸೇಕಾಯಿ ತಯಾರಿಸಿ, ಫಲ, ಹಳದಿಯ ವಸ್ತ್ರಗಳು, ಬಿಳಿಯ ಜನಿವಾರ, ಗಂಧಾಕ್ಷತೆ, ಕುಸುಮಗಳನ್ನು ಸಮರ್ಪಿಸಿ ಕಾಳಿಂಗನಿಗೆ ದೀಪಧಾರತಿ ಬೆಳಗುತ್ತಾಳೆ.
ಪೂಜೆ ಪೂರೈಸಿದ ನಂತರ ಹುತ್ತದ ಮಣ್ಣನು ತೆಗೆದುಕೊಂಡು ಅಣ್ಣನಿದ್ದಲಿಗೆ ಬಂದು ಅಣ್ಣನ ಬೆನ್ನು ಮತ್ತು ಹೊಕ್ಕಳಿಗೆ ಸವರುತ್ತಾಳೆ. ಆಗ ಸಾವನ್ನಪ್ಪಿದ್ದ ಅಣ್ಣ ನಿದ್ದೆಯಿಂದ ಎಚ್ಚರವಾದಂತೆ ಹೇಳುತ್ತಾನೆ. ಈ ಸಂತೋಷದಲಿ ಅಣ್ಣ ತಂಗಿಯರು ಸೇರಿ ನಾಗದೇವರನ್ನು ಆರಾಧಿಸುತ್ತಾರೆ. ಈ ಕಥೆಯನ್ನೇ ಕೇಳಿ ಅಣ್ಣನಿಗೆ ಸೌಭಾಗ್ಯ ನೀಡೆಂದು ಮುತ್ತೈದೆಯರು ಸೇರಿದಂತೆ ಎಲ್ಲಾ ಹೆಣ್ಣುಮಕ್ಕಳು ನಾಗರಪಂಚಮಿ ಹಬ್ಬವನ್ನು ಆಚರಿಸಿ ಕಾಳಿಂಗನನ್ನು ಪ್ರಾರ್ಥಿಸುತ್ತಾರೆ.
-ಮೈನಾಶ್ರೀ.ಸಿ