ಸಮುದ್ರ ತಟದಲ್ಲಿರುವ ಗೋಕರ್ಣದ ಮಹಾಬಲೇಶ್ವರ ಶಿವನ ದೇವಾಲಯವು ದೇಶದ ಎಲ್ಲ ಹಿಂದೂ ಭಕ್ತರಿಗೆ ಪುಣ್ಯ ಸ್ಥಳ. ಕಾಶಿ, ರಾಮೇಶ್ವರ ಹಾಗೂ ಗೋಕರ್ಣ ತ್ರಿಸ್ಥಲ ಶೈವಕ್ಷೇತ್ರಗಳೆಂದೇ ಖ್ಯಾತವಾಗಿವೆ.
ಗೋಕರ್ಣದಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿರುವ ಶಿವಲಿಂಗವನ್ನು ರಾವಣನು ಇಲ್ಲಿಗೆ ತಂದನೆಂಬುದು ನಂಬಿಕೆ. ಆತನಲ್ಲಿ ವಿಶೇಷ ಶಕ್ತಿಯನ್ನು ತುಂಬುವುದಲ್ಲದೆ ಆತನನ್ನು ಅತ್ಯಂತ ಬಲಿಷ್ಠವಾಗಿಸಬಲ್ಲ ಲಿಂಗವಾದ ಆತ್ಮಲಿಂಗವನ್ನು ಆತ ಪಡೆದು ತಂದಿದ್ದನು. ಈಗಾಗಲೇ ದುಷ್ಟನಾಗಿದ್ದ ರಾಜನು ಮತ್ತಷ್ಟು ಬಲಿಷ್ಠನಾಗಬಾರದೆಂಬ ಕಾರಣದಿಂದ ದೇವತೆಗಳು ಗಣೇಶನ ಸಹಕಾರದೊಂದಿಗೆ ಆತ ಲಿಂಗವನ್ನು ಇಲ್ಲಿಯೇ ಬಿಡುವಂತೆ ತಂತ್ರ ಹೂಡಿದರು. ಮುಂದೆ ಮಹಾ ಬಲಶಾಲಿಯಾದ ರಾವಣನೇ ಬಲ ಬಿಟ್ಟು ಎಳೆದರೂ ಬಾರದೆ ಗಟ್ಟಿಯಾಗಿ ಭೂಮಿಯನ್ನು ಹಿಡಿದ ಶಿವ ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ ಮಹಾಬಲೇಶ್ವರ ಎಂಬ ಹೆಸರಿನಿಂದ ಲಿಂಗರೂಪಿಯಾಗಿ ನೆಲೆಸಿದ ಎಂಬ ಪ್ರತೀತಿ ಇದೆ.
ತಮಿಳು ಕವಿಗಳಾದ ಅಪ್ಪಾರ್ ಮತ್ತು ಸಂಬಂದಾರ್ ರವರ ರಚನೆ ಕೀರ್ತನೆಗಳಲ್ಲಿ ಉಲ್ಲೇಖಗೊಂಡಿದ್ದು, ತುಳು ನಾಡಿನ ಒಡೆಯನ ಹೊಗಳಿಕೆಗೆ ಸಾಕ್ಷಿಯಾಗಿವೆ. ಈ ಸ್ಥಳವು ಮೂಲವಾಗಿ ವಿಜಯನಗರ ಅರಸರಾದ ಕದಂಬರ ಆಳ್ವಿಕೆಯಲ್ಲಿತ್ತು.
ಗೋಕರ್ಣದಲ್ಲಿ 30 ತೀರ್ಥಗಳಿದ್ದು, ಕೋಟಿ ತೀರ್ಥ ಪ್ರಧಾನವಾದ್ದು. ಶಿವರಾತ್ರಿಯಲ್ಲಿ ಸಹಸ್ರಾರು ಭಕ್ತರು ಆಗಮಿಸಿ ಕೋಟಿತೀರ್ಥ ಸ್ನಾನ ಮಾಡಿ ಪುನೀತರಾಗುತ್ತದೆ. ಇದರ ಪಶ್ಚಿಮಕ್ಕೆ ನರಸಿಂಹ ದೇವಾಲಯವಿದೆ; ದಕ್ಷಿಣಕ್ಕೆ ಅಗಸ್ತ್ಯ, ಸುಮಿತ್ರಾ, ಗಂಗಾತೀರ್ಥಗಳೆಂಬ ಗುಹೆಗಳಿವೆ. ಶತಶೃಂಗದ ಮೇಲೆ ಗೋಗರ್ಭ ತೀರ್ಥ, ಬ್ರಹ್ಮಕಮಂಡಲ ತೀರ್ಥ ಮತ್ತು ಮಹೇಶ್ವರರಾರಣ್ಯಗಳಿವೆ. ಆ ಗುಡ್ಡದ ಕೆಳಗೆ ಮಾಲಿನಿ, ಸುಮಾಲಿನಿ, ಸೂರ್ಯ, ಚಂದ್ರ ಮತ್ತು ಅನಂತ ಎಂಬ ತೀರ್ಥಗಳಿವೆ. ದೇವಾಲಯದ ಪ್ರಾಕಾರದಲ್ಲಿ ಗೌರಿ ದೇವಿಯ ದೇವಾಲಯವೂ ಇದೆ. ಇಲ್ಲಿರುವ ಗೌರಿ ಅತ್ಯಂತ ಮನೋಹರವಾಗಿದೆ.
ಗೋಕರ್ಣದಲ್ಲಿ ಮಹಾಬಲೇಶ್ವರನ ಸ್ಥಾಪನೆಗೆ ಕಾರಣನಾದ ಗಣಪತಿಯ ದೇವಾಲಯವಿದೆ. ಇಲ್ಲಿರುವ ನಿಂತಿರುವ ಗಣಪನ ವಿಗ್ರಹ ಕರ್ನಾಟಕದ ಅತಿ ಪ್ರಾಚೀನ ಗಣೇಶ ವಿಗ್ರಹಗಳಲ್ಲಿ ಒಂದಾಗಿದೆ. ಇದು ಸುಮಾರು 6 ಅಥವಾ 7ನೇ ಶತಮಾನದ್ದೆನ್ನುತ್ತಾರೆ ಇತಿಹಾಸತಜ್ಞರು.
ಗೋಕರ್ಣವು ಅತ್ಯಂತ ವೇಗವಾಗಿ ಪ್ರಿಯವಾಗುತ್ತಿರುವ ಪ್ರವಾಸಿ ತಾಣವಾಗಿದ್ದು ಗೋವಾದ ಅನೇಕ ಸಮುದ್ರ ತೀರಗಳನ್ನು ಹಿಮ್ಮೆಟ್ಟಿಸುವಂತಹ ಸುಂದರವಾದ ಹಲವು ಕರಾವಳಿ ಪ್ರದೇಶಗಳನ್ನು ಹೊಂದಿದೆ. ಕುಡ್ಲೆ ಸಮುದ್ರ ತೀರ, ಗೋಕರ್ಣ ತೀರ, ಅರ್ಧ ಚಂದಿರ ಸಮುದ್ರ ತೀರ, ಪ್ಯಾರಾಡೈಸ್ ತೀರ ಹಾಗೂ ಓಂ ಸಮುದ್ರ ತೀರಗಳು ಇಲ್ಲಿರುವ ಐದು ಪ್ರಮುಖ ಸಮುದ್ರ ಪ್ರದೇಶದ ಆಕರ್ಷಣೆಗಳಾಗಿವೆ.
ಈ ಪಟ್ಟಣದ ಪ್ರಮುಖ ಸಮುದ್ರ ತೀರವಾದ ಗೋಕರ್ಣ ತೀರದಲ್ಲಿ ಭಕ್ತಾದಿಗಳು ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸೇರುತ್ತಾರೆ ಕುಡ್ಲೆ ಕರಾವಳಿ ಪ್ರದೇಶವು ಅತ್ಯಂತ ದೊಡ್ಡ ತೀರವಾಗಿದ್ದು ಸೂಕ್ತ ಸಮಯವಾದ ನವೆಂಬರ್ ನಿಂದ ಫೆಬ್ರವರಿಯಲ್ಲಿ ಜನಭರಿತವಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಇದು ಈಜುವುದಕ್ಕೆ ಬಹಳ ಅಪಾಯಕಾರಿ ಸ್ಥಳವಾಗಿದೆ.
ಓಂ ಸಮುದ್ರ ತೀರವು ಹಿಂದೂಗಳ ಚಿಹ್ನೆಯಾದ ಓಂ ಆಕಾರದಲ್ಲಿರುವ ಸುಂದರವಾದ ಕರಾವಳಿ ರೇಖೆಯನ್ನು ಹೊಂದಿದೆ. ಈ ಬೃಹತ್ ಚಿಹ್ನೆಯ ಸುತ್ತಾಕಾರ ಸಣ್ಣ ಕೊಳವನ್ನು ನಿರ್ಮಿಸಿದ್ದು ಇದು ಈಜು ಬಾರದ ಜನರಿಗೂ ಜಳಕ ಮಾಡಲು ಸುರಕ್ಷಿತ ಸ್ಥಳವಾಗಿದೆ. ಗೋಕರ್ಣವು ಅಸಾಧಾರಣ ಸ್ಥಳಗಳಲ್ಲಿ ಒಂದಾಗಿದ್ದು ಪುಣ್ಯಕ್ಷೇತ್ರದ ಜೊತೆಗೆ ಸಮಯ ಕಳೆಯ ಬಯಸುವ ಪ್ರವಾಸಿಗರನ್ನು ಸುಲಭವಾಗಿ ಆಕರ್ಷಿಸುತ್ತದೆ. ಸುಂದರವಾದ ದೇವಾಲಯಗಳು ಮತ್ತು ಆಕರ್ಷಣೀಯ ಸಮುದ್ರ ತೀರಗಳು ಗೋಕರ್ಣವನ್ನು ಗಮನಾರ್ಹ ಪ್ರವಾಸೀ ತಾಣವನ್ನಾಗಿ ಮಾಡಿವೆ .
ಡಿಸೆಂಬರ್ ನಿಂದ ಜನವರಿ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲಲ್ಲಿ ಸ್ಥಳೀಯರು ನಿರ್ಮಿಸಿದ ಗುಡಿಸಲುಗಳು ಬಾಡಿಗೆಗೆ ಸಿಗುತ್ತವೆ.
ಬೆಂಗಳೂರಿನಿಂದ ಸುಮಾರು 450 ಕಿಮೀ ದೂರದಲ್ಲಿದೆ. ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ ಗಳ ಸೇವೆ ಇದೆ.
ಸಮುದ್ರ ತಡಿಯಲ್ಲೇ ಈ ಪವಿತ್ರ ಪುಣ್ಯಕ್ಷೇತ್ರವಿದ್ದು, ಭೂಮಾರ್ಗ, ಜಲಮಾರ್ಗಗಳೆರಡರಿಂದಲೂ ಗೋಕರ್ಣಕ್ಕೆ ಬರಲು ಅವಕಾಶವಿದೆ. ಇಲ್ಲಿಗೆ 3 ಕಿಲೋ ಮೀಟರ್ ದೂರದಲ್ಲಿರುವ ತದಡಿ ಬಂದರಿಗೆ ಉಗಿ ಹಡಗಿನಲ್ಲಿ ಪ್ರಯಾಣ ಮಾಡಲೂ ಅವಕಾಶವಿದೆ.