ವಜ್ರಕಾಯ, ಆಂಜನೇಯ, ವಾಯುಪುತ್ರ ಎಂದೆಲ್ಲಾ ಕರೆಸಿಕೊಳ್ಳುವ ಹನುಮಂತನನ್ನು ಇಡಿ ಪ್ರಪಂಚವೇ ದೇವರು ಎಂದು ಪೂಜಿಸುತ್ತಿದ್ದರೆ, ಹನುಮಂತನ ಪ್ರಭು ಶ್ರೀರಾಮ ಜೀವಿಸಿದ್ದ ಭಾರತದಲ್ಲೇ ಹನುಮಂತನನ್ನು ಖಳನಾಯಕನಂತೆ ಗುರುತಿಸಲಾಗುತ್ತದೆ.
ಆಂಜನೇಯನನ್ನು ವಿಲನ್ ನಂತೆ ಗುರುತಿಸುವ ಪ್ರದೇಶ ಇರುವುದು ಮಹಾರಾಷ್ಟ್ರದಲ್ಲಿ ಹೌದು, ಮಹಾರಾಷ್ಟ್ರದ ನಾಸಿಕ್ ಗಡಿ ಪ್ರದೇಶ ನಾಂದೂರ್ ನಲ್ಲಿ! ಮಹಾರಾಷ್ಟ್ರದ ನಾಂದೂರ್ ಗೆ ದೈತ್ಯ ನಾಂದೂರ್ ಎಂಬ ಹೆಸರೂ ಇದ್ದು ಇಲ್ಲಿ ಭಜರಂಗಬಲಿಯನ್ನು ದೇವರಂತೆ ಪೂಜಿಸುವ ಬದಲು ಖಳನಾಯಕನಂತೆ ಗುರುತಿಸಲಾಗುತ್ತದೆ. ಇಲ್ಲಿ ಆಂಜನೇಯ ಮಾತ್ರ ಅಲ್ಲ ಯಾವುದೇ ದೇವರನ್ನು ಸ್ಮರಿಸುವುದು ಅಪರಾಧವಾಗಿದೆ. ದೈತ್ಯ ನಾಂದೂರ್ ನಲ್ಲಿ ಭಗವಂತನ ಪೂಜೆ ನಡೆಯುವ ಬದಲು ನಿಂಬ ದೈತ್ಯ ಎಂಬ ದುಷ್ಟಶಕ್ತಿಗೆ ಪೂಜೆ ನಡೆಯುತ್ತದೆ. ಇಲ್ಲಿ ಅದನ್ನೇ ದೇವರೆಂದು ಭಾವಿಸಲಾಗಿದೆ. ನಿಂಬಾ ದೈತ್ಯ ಹನುಮಂತನ ವಿರೋಧಿಯಾಗಿದ್ದು , ಹನುಮಂತನಂತೆಯೇ ನಿಂಬಾ ದೈತ್ಯನೂ ಸಹ ಪರಮ ರಾಮಭಕ್ತ ಎಂಬುದು ಮತ್ತೊಂದು ವಿಶೇಷವಾಗಿದೆ. ರಾಮನ ಇಬ್ಬರೂ ಭಕ್ತರ ನಡುವೆ ಕಾಳಗ ನಡೆಯುತ್ತದೆ. ಮಹಾರಾಷ್ಟ್ರದ ಇಂದಿನ ನಿಂಬಾ ದೈತ್ಯ ಪ್ರದೇಶದ ಬಳಿ ಇರುವ ಕೇದಾರೇಶ್ವರ ಮಂದಿರಕ್ಕೆ ಸೀತಾ ಲಕ್ಷ್ಮಣರೊಂದಿಗೆ ಶ್ರೀರಾಮ, ಭೇಟಿ ನೀಡಿದಾಗ ಹನುಮಂತ ಹಾಗೂ ನಿಂಬಾ ದೈತ್ಯನ ನಡುವೆ ಕಾಳಗ ನಡೆಯುತ್ತಿರುವುದನ್ನು ತಿಳಿದ ರಾಮ ಸ್ವತಃ ತಾನೆ ಮಧ್ಯಸ್ಥಿಕೆ ವಹಿಸಿ ನಿಂಬಾ ದೈತ್ಯನ ತಪಸ್ಸಿಗೆ ಮೆಚ್ಚಿ ಆ ಕಾಳಗ ನಡೆದ ಪ್ರದೇಶವನ್ನು ನಿಂಬಾ ದೈತ್ಯನ ಹೆಸರಿನಿಂದಲೇ ಗುರುತಿಸಲ್ಪಡಬೇಕು ಹಾಗೂ ಅಲ್ಲಿ ನಿಂಬಾ ದೈತ್ಯನೆ ರಾಜನಾಗಿ ಪ್ರಜಾಪಾಲನೆ ಮಾಡಬೇಕೆಂದು ಆಶೀರ್ವದಿಸುತ್ತಾನೆ.
ಶ್ರೀರಾಮನಿಂದ ಆಶೀರ್ವಾದ ಪಡೆದ ನಿಂಬಾ ದೈತ್ಯ ರಾಮನಲ್ಲಿ ಮತ್ತೊಂದು ಕೋರಿಕೆ ಸಲ್ಲಿಸುತ್ತಾನೆ. ಅದೇನೆಂದರೆ ಆ ಗ್ರಾಮದಲ್ಲಿ ಹನುಮಂತನ ಯಾವುದೇ ಕುರುಹು ಇರಬಾರದೆಂಬುದಾರಿಗುತ್ತದೆ. ಆದ್ದರಿಂದಲೇ ಇಂದಿಗೂ ಸಹ ನಿಂಬಾ ದೈತ್ಯ ಗ್ರಾಮದಲ್ಲಿ ಹನುಮಂತನನ್ನು ದೇವರ ರೀತಿಯಲ್ಲಿ ಪೂಜಿಸುವ ಬದಲು ಖಳನಾಯಕನಂತೆ ಗುರುತಿಸಲಾಗುತ್ತಿದೆ. ಹನುಮಂತನ ಬದಲಾಗಿ ನಿಂಬಾ ದೈತ್ಯನನ್ನು ಪೂಜೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಕಾರು ಸೇರಿದಂತೆ ಮಾರುತಿ ಹೆಸರಿನ (ಆಂಜನೇಯನಿಗೆ ಸಂಬಂಧಿಸಿದ) ಯಾವುದೇ ವಸ್ತುಗಳನ್ನು ನಿಂಬ ದೈತ್ಯ ಗ್ರಾಮದೊಳಗೆ ತರುವಂತಿಲ್ಲ ಎಂಬ ನಿಬಂಧನೆ ಇದೆ.