ಕೈಲಾಸ ಶಿವನ ವಾಸಸ್ಥಾನ. ಕೈಲಾಸ-ಮಾನಸ ಸರೋವರ ಪ್ರಸಿದ್ಧವಾದ ತೀರ್ಥಕ್ಷೇತ್ರವಾಗಿದ್ದು, ಯಾತ್ರಾರ್ಥಿಗಳಿಗೆ ಸಾವಿರಾರು ವರ್ಷಗಳಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕೇವಲ ಹಿಂದೂ, ಬೌದ್ಧ, ಜೈನರಿಗಷ್ಟೇ ಅಲ್ಲದೇ ಪ್ರಪಂಚದ ವಿವಿಧ ಭಾಗಗಳಿಂದ ಬರುವ ಅನೇಕರಿಗೆ ಧಾರ್ಮಿಕ ಕೇಂದ್ರವಾಗಿದೆ.
ಕೈಲಾಸ ಮಾನಸ ಸರೋವರದ ಬಗ್ಗೆ ಅನೇಕ ಅಚ್ಚರಿಯ, ರೋಚಕ ವಿಷಯಗಳಿದ್ದು, ಮೋಕ್ಷ ಪಡೆದ ಆತ್ಮಗಳು ಈ ಕೈಲಾಸದಲ್ಲಿ ನೆಲೆಸುತ್ತವೆ ಎಂಬ ಪ್ರತೀತಿ ಇದೆ. ಅಷ್ಟೇ ಅಲ್ಲದೇ, ಎಲ್ಲಾ ಮೋಕ್ಷ ಪಡೆದ ಪವಿತ್ರ ಆತ್ಮಗಳೂ ಪ್ರತಿ ವರ್ಷದ ಗುರು ಪೂರ್ಣಿಮೆ, ಬುದ್ಧ ಪೂರ್ಣಿಮೆ, ಕಾರ್ತಿಕ ಪೂರ್ಣಿಮೆಯ ದಿನದಂದು ಒಟ್ಟಿಗೆ ಸೇರುತ್ತವೆ ಎಂಬ ನಂಬಿಕೆ ಇದೆ.
ಮತ್ತೂ ವಿಶೇಷವಾದ ಸಂಗತಿಯೆಂದರೆ, ಸಪ್ತರ್ಷಿಗಳು, ಜೀವನ್ಮುಕ್ತರು, ಸಂತರು ಪ್ರತಿದಿನ ಬ್ರಾಹ್ಮಿ ಮುಹೂರ್ತ(ಪ್ರಾತಃಕಾಲ)ದಲ್ಲಿ ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲದೇ ಆತ್ಮತತ್ವವವನ್ನು ಅರಿತ ಜ್ಞಾನಿಗಳು ಕೈಲಾಸ ಮಾನಸ ಸರೋವರಲ್ಲಿ ಜ್ಯೋತಿಯ ರೂಪದಲ್ಲಿ ಕಾಣಸಿಗುತ್ತಾರೆ ಎಂಬ ಪ್ರತೀತಿಯೂ ಇದೆ.
ಭಾರತೀಯ ಸನಾತನ ಧರ್ಮದಲ್ಲಿ ಶಿವನನ್ನು ಆದಿ ಯೋಗಿ ಎಂದು ಆರಾಧಿಸಲಾಗುತ್ತದೆ. ಶಿವನ ವಾಸಸ್ಥಾನ ಕೈಲಾಸವಾಗಿದ್ದು, ಹಾಗೆಯೇ ಶಿವನ ಸ್ವರೂಪವಾಗಿರುವ ಮೋಕ್ಷ ಪಡೆದ ಯೋಗಿಗಳು ಕೈಲಾಸದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಮೇಲಿನ ಅಂಶಗಳು ಪೂರಕವಾಗಿದೆ.