"ಮಾಸಾನಾಮ್ ಮಾರ್ಗಶೀರ್ಷಃ ಅಹಮ್ ಋತೂನಾಮ್ ಕುಸುಮ ಆಕರಃ –ಸಾಮದ ಗಾನಗಳಲ್ಲಿ ಬೃಹತ್ ಸಾಮವೆಂಬ ಗಾನ ನಾನು" ಎಂದು ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅಂದರೆ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ, ಋತುಗಳಲ್ಲಿ ವಸಂತ ಋತುವಾಗಿದ್ದೇನೆ ಎಂಬುದು ಇದರ ಅರ್ಥ. ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ್ದೂ ಸಹ ಇದೇ ಮಾರ್ಗಶಿರ ಮಾಸದಲ್ಲಿ.
ಹಿಂದೂ ಪಂಚಾಂಗದ ಪ್ರಕಾರ 9 ನೇ ಮಾಸವಾಗಿರುವ ಮಾರ್ಗಶಿರ ಮಾಸವನ್ನು ಅತ್ಯಂತ ಪುಣ್ಯ, ಪವಿತ್ರವಾದ ಮಾಸ ಎಂದು ಭಾವಿಸುತ್ತಾರೆ. ಈ ಮಾಸದಲ್ಲಿ ಬರುವ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದರೆ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವದು. ಅದಕ್ಕೆ ಮೋಕ್ಷದಾ ಏಕಾದಶಿ ಎಂಬ ಹೆಸರಿದೆ. ಮೋಕ್ಷದಾ ಅಂದರೆ ಮೋಕ್ಷವನ್ನು ನೀಡುವ, ಭವಬಂಧನಗಳಿಂದ ಮನಸನ್ನು ಕಳಚುವುದು ಎಂದು ಅರ್ಥ. ಹಾಗಾಗಿಯೇ ಅದಕ್ಕೆ ಗೀತಾ ಜಯಂತಿಯ ದಿನವನ್ನು ಮೋಕ್ಷದಾ ಏಕಾದಶಿ ಎಂದೂ ಹೇಳುತ್ತಾರೆ.
ಇನ್ನು ಸನಾತನ ಧರ್ಮದಲ್ಲಿ ಶ್ರೇಷ್ಠ ಗುರುಗಳೆಂದು ಆರಾಧಿಸಲ್ಪಡುವ ದತ್ತಾತ್ರೇಯ ಜಯಂತಿಯೂ ಸಹ ಮಾರ್ಗಶಿರ ಮಾಸದಲ್ಲಿಯೇ ಬರುತ್ತದೆ. ಮಾರ್ಗಶಿರ ಮಾಸದ ಹುಣ್ಣಿಮೆಯಂದು ದತ್ತಾತ್ರೆಯ ಜಯಂತಿಯನ್ನು ಭಕ್ತಿ, ಆದರಗಳಿಂದ ಆಚರಿಸಲಾಗುತ್ತದೆ.
ಮಾರ್ಗಶಿರ ಕೃಷ್ಣ ಏಕಾದಶಿಯ ದಿನದಂದು ಉಪಾವಾಸವಿರುವ ಆಚರಣೆಯಿದ್ದು, ಇದನ್ನು ವಿಮಲಾ ಏಕಾದಶಿ (ಸಫಲಾ) ಎಂದೂ ಕರೆಯುತ್ತಾರೆ, ಈ ದಿನದಂದು ಉಪವಾಸವಿದ್ದು, ಜ್ಞಾನಕ್ಕಾಗಿ ಪ್ರಯತ್ನಿಸಿದರೆ ನಮ್ಮಲ್ಲಿರುವ ಅಜ್ಞಾನ ನಿವೃತ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಮಾರ್ಗಶಿರ ಮಾಸವನ್ನು ಧನುರ್ಮಾಸವೆಂದೂ ಕರೆಯುತ್ತಾರೆ. ವಿಷ್ಣುವಿನ ಸ್ವರೂಪವೇ ಆಗಿರುವ ಶ್ರೀಕೃಷ್ಣ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ಹೇಳಿದ್ದು, ಈ ಮಾಸದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ಈ ಮಾಸದ ಮತ್ತೊಂದು ಆಚರಣೆಯೆಂದರೆ ಅಮಾವಾಸ್ಯೆಯ 6 ದಿನಗಳ ನಂತರ ಸ್ಕಂದ ಷಷ್ಟಿಯನ್ನು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಈ ರೀತಿಯ ಸ್ಕಂದ ಷಷ್ಠಿ ಆಚರಣೆ ಹೆಚ್ಚು ನಡೆಯಲಿದ್ದು, ಸಂತಾನವಿಲ್ಲದವರು ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರೆ ಸಂತಾನ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos