ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಕೇದಾರನಾಥ ದೇವಾಲಯ ತೆರೆದಿದ್ದು ಕೇದಾರನಾಥ ಯಾತ್ರೆ ಪ್ರಾರಂಭವಾಗಿದೆ. ಅಕ್ಷಯ ತೃತೀಯದ ಸಂದರ್ಭದಲ್ಲಿ ತೆರೆಯುವ ಈ ದೇವಾಲಯ ಅಕ್ಟೋಬರ್, ನವೆಂಬರ್ ತಿಂಗಳ ನಂತರ (ಅಂದರೆ ದೀಪಾವಳಿ)ಯ ನಂತರ ಮುಚ್ಚಲ್ಪಡುತ್ತದೆ.
ಮಹಾಭಾರತ, ಅದಕ್ಕಿಂತಲೂ ಮುನ್ನ ತಪಸ್ಸಿನಲ್ಲಿ ನಿರತರಾಗಿದ್ದ ನರ ನಾರಾಯಣರ ಕಾಲವೂ ಸೇರಿದಂತೆ ಅತ್ಯಂತ ಪುರಾತನ, ಧಾರ್ಮಿಕ, ತಪಸ್ಸಿನ ಹಿನ್ನೆಲೆ ಇರುವುದು ಕೇದಾರನಾಥ ದೇವಾಲಯವಿರುವ ಪ್ರದೇಶದ ವೈಶಿಷ್ಟ್ಯ. ಈ ಪ್ರದೇಶಕ್ಕಿರುವ ಪೌರಾಣಿಕ ಹಿನ್ನೆಲೆಗೂ ಕೊರತೆ ಇಲ್ಲ, ದುರ್ಗಮ ಹಾದಿಯಾದರೂ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಗಳಿಗೂ ಕೊರತೆ ಇಲ್ಲ. ಸಮುದ್ರ ಮಟ್ಟದಿಂದ ಸುಮಾರು 3584 ಮೀಟರ್ (11759 ಅಡಿ) ಗಳಷ್ಟು ಎತ್ತರದಲ್ಲಿ ಸುಂದರ ಪ್ರಕೃತಿಯನ್ನು ಹೊಂದಿರುವ ಕೇದಾರನಾಥ ದೇವಾಲಯ ಹಿಂದೂಗಳ ಛೋಟಾ ಚಾರ್ ಧಾಮ್ ಪ್ರದೇಶವೆಂದೂ ಖ್ಯಾತಿ ಪಡೆದಿದ್ದು ಮಂದಾಕಿನಿ ನದಿಯೂ ಹರಿಯುತ್ತಾಳೆ. ಅದೆಲ್ಲಾ ಇರಲಿ ನಮ್ಮ ದೇಶದಲ್ಲಿ ಪ್ರತಿ ಧಾರ್ಮಿಕ ಕ್ಷೇತ್ರಕ್ಕೆ ಹೆಸರು ಬರುವುದರ ಹಿಂದೆ ಒಂದು ಕಾರಣ, ಘಟನೆಗಳು ತಳುಕುಹಾಕಿಕೊಂಡಿರುತ್ತದೆ. ಇಲ್ಲಿಯೂ ಹಾಗೆಯೇ ಇದ್ದು, ಕೇದಾರನಾಥ ಪ್ರದೇಶಕ್ಕೆ ಬಂದ ಹೆಸರಿನ ಕಾರಣ ಹುಡುಕಿ ಹೊರಟರೆ ಅದು ನಿಮ್ಮನ್ನು ಸತ್ಯಯುಗಕ್ಕೆ ಕೊಂಡೊಯ್ಯುತ್ತದೆ. ಸತ್ಯ ಯುಗದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ರಾಜ ಕೇದಾರನ ಗೌರವಾರ್ಥವಾಗಿ ಈ ಪ್ರದೇಶಕ್ಕೆ ಕೇದಾರನಾಥ ಎಂಬ ಹೆಸರು ಹಾಗೂ ದೇವಾಲಯದ ಸುತ್ತ ಇರುವ ಪ್ರದೇಶಕ್ಕೆ ರಾಜನ ಮಗಳಾದ ವೃಂದಾವನ್ ಎಂಬ ಬಂತೆಂದು ಹೇಳಲಾಗುತ್ತದೆ.
ಇನ್ನು ಮಹಾಭಾರತದ ಯುದ್ಧದ ನಂತರ ಪಾಂಡವರಿಗೆ ಶಿವ ದರ್ಶನ ನೀಡಿದ ಕ್ಷೇತ್ರವೂ ಇದಾಗಿದ್ದು, ದ್ವಾಪರ ಯುಗಕ್ಕೂ ಹಿಂದೆ, ವಿಷ್ಣುವಿನ ಅವತಾರವಾದ ನರ ಮತ್ತು ನಾರಾಯಣರು ಬದ್ರಿಕಾಶ್ರಮದಲ್ಲಿ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಿದ್ದರು.
ತಪಸ್ಸಿಗೆ ಮೆಚ್ಚಿ ಒಲಿದ ಶಿವನ ಬಳಿ ಕೇದಾರನಾಥದಲ್ಲಿ ಜ್ಯೋತಿರ್ಲಿಂಗವಾಗಿ ನೆಲೆಸಿ ಅಲ್ಲಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ, ದುಃಖಗಳನ್ನು ನಿವಾರಿಸುವ ಕ್ಷೇತ್ರವಾಗಬೇಕು ಎಂದು ವರ ಕೇಳುತ್ತಾರೆ. ಆದ್ದರಿಂದ ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿದರೆ ಇಷ್ಟಾರ್ಥಗಳು ಈಡೇರಿ ದುಃಖ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಪೂರಕವೆಂಬಂತೆ ಮಹಾಭಾರತದ ಯುದ್ಧದಲ್ಲಿ ಕೌರವರನ್ನು ಕೊಂದಿದ್ದ ದುಃಖವನ್ನು ನಿವಾರಿಸಿಕೊಳ್ಳುವುದಕ್ಕಾಗಿ ಪಾಂಡವರು ಶಿವನ ದರ್ಶನ ಪಡೆದಿದ್ದರು ಎಂಬ ಪ್ರತೀತಿಯೂ ಇದೆ. ಸಾಮಾನ್ಯವಾಗಿ ಉಳಿದ ಜ್ಯೋತಿರ್ಲಿಂಗವಿರುವ ಕ್ಷೇತ್ರಗಳಿಗಿಂತಲೂ ಈ ಕ್ಷೇತ್ರ ಭಿನ್ನವಾಗಿದ್ದು, ಕೇದಾರನಾಥ ಕ್ಷೇತ್ರದಲ್ಲಿ ಲಿಂಗ ತ್ರಿಕೋನ ಆಕಾರದಲ್ಲಿದ್ದು. ಈ ಎಲ್ಲಾ ಕಾರಣಗಳಿಂದ ಕೇದಾರನಾಥ ಯಾತ್ರೆ ಮಹತ್ವದ್ದಾಗಿದ್ದು ವಿಶೇಷವಾದ ತೀರ್ಥಕ್ಷೇತ್ರ ಎಂಬ ನಂಬಿಕೆ ಇದೆ.