ಇಡೀ ಭೂಮಿ ಕೌತುಗಳ ಆಗರ, ಇಲ್ಲಿ ಇಂದ್ರಿಯಗಳಿಗೂ ಅತಿವಾದ ಅಚ್ಚರಿಗಳಿವೆ. ಶ್ರೀ ಕೃಷ್ಣನ ದ್ವಾರಕೆಯ ಒಂದು ಪ್ರಾಂತ್ಯ ಸ್ಯಾಟಲೈಟ್ ನಿಂದ ನೋಡಿದರೆ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯಂತೆಯೇ ಕಾಣುತ್ತದೆ. ಮಾನಸ ಸರೋವರ ಹೃದಯದ ಆಕಾರದಲ್ಲಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತ ಸರ್ಪಗಳ ಹೆಡೆಯನ್ನೇ ಹೋಲುವುದು ಇವೆಲ್ಲವೂ ನಮ್ಮ ಭೂಮಿ ಹಾಗು ಅದರ ಬಗ್ಗೆ ಯಾವುದೇ ಆಧುನಿಕ ಯಂತ್ರಗಳ ಸಹಾಯವಿಲ್ಲದೆ ಸಹಸ್ರಾರು ವರ್ಷಗಳ ಹಿಂದೆ ಕಾಣುವಂತೆಯೇ ಹೇಳಿರುವ ನಮ್ಮ ಪೂರ್ವಜರ ಬುದ್ಧಿಮತ್ತೆಗಳನ್ನು ತಿಳಿಸುವ ಅಚ್ಚರಿಗಳಲ್ಲಿ ಕೆಲವಷ್ಟೇ.
ಮೊದಲ ವಿಶ್ವ ಭೂಪಟದ ಉಲ್ಲೇಖ ಮಹಾಭಾರತದಲ್ಲಿತ್ತು ಎಂಬುದು ಇಂತಹ ಅಚ್ಚರಿಗಳಲ್ಲಿ ಮತ್ತೊಂದು. ಮೊದಲ ಭೂಪಟವನ್ನು ಗ್ರೀಕರು ರಚಿಸಿದ್ದು ಎಂಬ ಉಲ್ಲೇಖಗಳಿವೆ, ಆದರೆ ಸಂತ ರಾಮಾನುಜಾಚಾರ್ಯರು ಮಹಾಭಾರತವನ್ನು ಉಲ್ಲೇಖಿಸಿ ಭೂಪಟವನ್ನು ರಚಿಸಿದ್ದರು ಎಂದು ಹೇಳಲಾಗುತ್ತದೆ.
ಕುರುಕ್ಷೇತ್ರದ ಯುದ್ಧದ ಅವಧಿಯಲ್ಲಿಯೇ ಭೂಪಟ ಹೇಗೆ ಕಾಣಿಸುತ್ತದೆ ಎಂಬ ಉಲ್ಲೇಖವಿದ್ದು, ಯುದ್ಧಕ್ಕೂ ಮುನ್ನ ಸಂಜಯನಿಗೆ ದೃತರಾಷ್ಟ್ರ ಭೂಪಟ ಹೇಗೆ ಕಾಣಿಸುತ್ತದೆ ಎಂಬುದನ್ನು ಹೇಳುವಂತೆ ಕೇಳುತ್ತಾನೆ.
ಹೇಗೆ ಓರ್ವ ವ್ಯಕ್ತಿ ತನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾನೋ ಹಾಗೆಯೇ ಬ್ರಹ್ಮಾಂಡದಲ್ಲಿ ಭೂಮಿಯೂ ಕಾಣುತ್ತದೆ, ಮೊದಲ ಭಾಗ ಆಲದ ಮರದ ಎಲೆಯ ರೀತಿಯಲ್ಲಿ ಕಾಣುತ್ತದೆ. ಎರಡನೇ ಭಾಗ ಮೊಲದ ಆಕಾರದಲ್ಲಿ ಕಾಣುತ್ತದೆ ಎನ್ನುತ್ತಾನೆ ಸಂಜಯ. ಸಂಜಯ ದೃತರಾಷ್ಟ್ರನಿಗೆ ಹೇಳಿದ್ದ ಶ್ಲೋಕವನ್ನು ಆಧರಿಸಿ ರಾಮಾನುಜಾಚಾರ್ಯರು ಭೂಪಟವನ್ನು ರಚಿಸಿದ್ದರು ಎಂದು ಹೇಳಲಾಗುತ್ತದೆ!