ಮೈಸೂರು ಸಾಂಸ್ಕೃತಿಕ ನಗರಿ, ನಮ್ಮ ಸಂಸ್ಕೃತಿ, ಧಾರ್ಮಿಕತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿರುವ ಸಾಂಸ್ಕೃತಿಕ ರಾಜಧಾನಿ. ಹಲವು ಶ್ರೀಕ್ಷೇತ್ರಗಳಿರುವ ಪ್ರದೇಶವೂ ಹೌದು. ಮೈಸೂರು ಎಂದೊಡನೆ ಮಹಿಷಾಸುರನನ್ನು ಸಂಹಾರ ಮಾಡಿದ ಚಾಮುಂಡೇಶ್ವರಿ ದೇವಿಯ ನೆನಪಾಗುತ್ತದೆ. ಹಾಗೆಯೇ ಮೈಸೂರಿನಿಂದ ಕೆಲವೇ ಕಿಮೀ ದೂರದಲ್ಲಿರುವ ಶ್ರೀರಂಗಪಟ್ಟಣ ಎಂದೊಡನೆ ನಿಮಿಷಾಂಬ ದೇವಿಯ ನೆನಪಾಗುತ್ತದೆ. ನಿಮಿಷಾಂಬ ದೇವಿ ಕಾವೇರಿ ನದಿ ದಡದಲ್ಲಿರುವ ಪ್ರಸಿದ್ಧ ದೇವಾಲಯ.
ನದಿಗಳಲ್ಲಿ ಮಾಘ ಸ್ನಾನ ಮಾಡಿದರೆ ವಿಶೇಷ ಎನ್ನುವ ನಂಬಿಕೆ ಇದೆ, ಶ್ರೀಚಕ್ರ ಸ್ವರೂಪಿಯಾದ ನಿಮಿಷಾಂಬ ದೇವಿಯ ದರ್ಶನಕ್ಕೆ ಬರುವವರ ಸಂಖ್ಯೆ ಸಾಮಾನ್ಯವಾಗಿಯೇ ಹೆಚ್ಚಿರುತ್ತದೆ. ಇನ್ನು ಮಾಘಮಾಸ ಬಂತೆಂದರೆ ದೇವಿಯ ಸನ್ನಿಧಿಯಲ್ಲಿ ಕಾವೇರಿ ನದಿಯಲ್ಲಿ ಮಾಘ ಸ್ನಾನ ಮಾಡಿ ದರ್ಶನ ಪಡೆಯುವವರ ಸಂಖ್ಯೆ ಎಂದಿಗಿಂತ ಹೆಚ್ಚಿರುತ್ತದೆ.
ಈ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಪಾರ್ವತಿ ದೇವಿಗೆ ನಿಮಿಷಾಂಬ ಎಂಬ ಹೆಸರು ಬರಲು ಕಾರಣ ಆಕೆ ಸಂಕಷ್ಟವನ್ನು ನಿಮಿಷದಲ್ಲೇ ಪರಿಹಾರ ಕಂಡುಕೊಳ್ಳುವುದಕ್ಕೆ ದಾರಿ ತೋರಿಸುತ್ತಾಳೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ದೇವಿಗೆ ನಿಮಿಷಾಂಬ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.
ಸೋಮವಂಶ ಮುಕ್ತರಸ ಎಂಬ ರಾಜವಂಶದ ಅರಸು ಮುಕ್ತರಾಜನಿಗೆ ದಾನವರ ವಿರುದ್ಧ ನಡೆಸುವ ಯುದ್ಧದಲ್ಲಿ ಅಗತ್ಯವಿದ್ದರೆ ನಿಮಿಷ ಮಾತ್ರದಲ್ಲಿ ಸಹಾಯಕ್ಕೆ ಬರುವುದಾಗಿ ದೇವಿ ವರ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಶ್ರೀಚಕ್ರ ಸಹಿತವಾಗಿ ಪ್ರತಿಷ್ಠಾಪನೆಗೊಂಡ ದೇವಿಗೆ ನಿಮಿಷಾಂಬ ಎಂಬ ಹೆಸರು ಬಂದಿದ್ದು, ಅದೇ ದೇವಾಲಯದಲ್ಲಿರುವ ಈಶ್ವರನಿಗೆ ಮುಕ್ತಿಕೇಶ್ವರ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು 300-400 ವರ್ಷಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಪುನರ್ ಪ್ರತಿಷ್ಠಾಪಿಸಿ ಅಭಿವೃದ್ಧಿಪಡಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos