ಇದು ತುಳುನಾಡಿನ ಪರಂಪರೆಯಾಗಿದ್ದು, ಶತಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.ಅಸುರ ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರಲಾಗುತಿತ್ತು ಎಂಬ ಪ್ರತೀತಿ ಇದೆ.
ಇತಿಹಾಸದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ ಇದಾಗಿದ್ದು, ಈ ವೇಳೆ ಭಕ್ತರ ಮೈ ಮೇಲೆ ಕೇವಲ ಶಾಲು ಹಾಗೂ ಧೋತಿಯನ್ನು ಮಾತ್ರ ಧರಿಸಿರುತ್ತಾರೆ. ಹಾಗಿದ್ದರೂ ಈವರೆಗೂ ತೋಟೆದಾರಗದಲ್ಲಿ ಬೆಂಕಿ ಅನಾಹುತ, ಭಕ್ತಾಧಿಗಳ ಮೈ ಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ.
ತೋಟೆದಾರ ಎಂಬುದು ಅತ್ತೂರು, ಕೊಡೆತೂರು ಸ್ಥಳೀಯ ಗ್ರಾಮಸ್ಥರಿಂದ ನಡೆಯುವ ವಿಶೇಷ ಸೇವೆಯಾಗಿದೆಯ ಇದರಲ್ಲಿ ಭಾಗವಹಿಸುವವರು ವ್ರತದಲ್ಲಿ ಇರುತ್ತಾರೆ. ಮಧು ಮಾಂಸ ಇತ್ಯಾದಿ ವರ್ಜ್ಯ. ನಂದಿನಿ ನದಿಯಲ್ಲಿ ಮುಳುಗಿ ಮೈಗೆ ಗಂಧ ಲೇಪನ ಮಾಡಿ ಭಕ್ತಿಯಿಂದ ಬೆಂಕಿಯ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ.
ಈ ವೈಶಿಷ್ಠ್ಯ ಪೂರ್ಣ ಆಚರಣೆಯಲ್ಲಿ ಪಾಲ್ಗೊಳ್ಳಲು ನಡುರಾತ್ರಿಯ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ನೆರೆಯುತ್ತಾರೆ. 15ರಿಂದ 20 ಮೀಟರ್ ದೂರದಲ್ಲಿ ನಿಂತಿಕೊಳ್ಳುವ ಎರಡು ಗುಂಪುಗಳು ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ ಎಂದು ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದ ಆರ್ಚಕ ಹರಿ ನಾರಾಯಣ ದಾಸ್ ಹೇಳಿದರು.