Vastu Shastra: ಬೆಂಗಳೂರು, ಮಂಗಳೂರು, ಮೈಸೂರಿನಂತಹ ನಗರಗಳಲ್ಲಿ ಈಗ ಅಪಾರ್ಟ್ ಮೆಂಟ್ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. ಇನ್ನು, ಸ್ವಂತ ಮನೆ ಕನಸು ನನಸು ಮಾಡಿಕೊಳ್ಳುವಾಗ ಪ್ರತಿಯೊಬ್ಬರೂ ವಾಸ್ತುವಿನ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಆದರೆ ಒಂದೇ ಕಟ್ಟಡದಲ್ಲಿ ಹಲವು ಮಹಡಿಗಳು ಇದ್ದಾಗ ನೆಲ ಮಹಡಿ ತೆಗೆದುಕೊಳ್ಳಬೇಕಾ ಅಥವಾ ಮೇಲಿನ ಮಹಡಿ ಉತ್ತಮವೋ ಎಂಬ ಗೊಂದಲ ಸಾಮಾನ್ಯ. ವಾಸ್ತು ಶಾಸ್ತ್ರದ ಪ್ರಕಾರ ಪ್ರತಿ ಮಹಡಿಗೂ ಅದರದೇ ಆದ ಶಕ್ತಿ ಇರುತ್ತದೆ. ಸರಿಯಾದ ಮಹಡಿಯನ್ನು ಆಯ್ಕೆ ಮಾಡಿದರೆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಆ ಕುರಿತ ವರದಿ ಇಲ್ಲಿದೆ:
ನೆಲ ಮಹಡಿಯ ಅನುಕೂಲಗಳು:
ವಾಸ್ತು ಪ್ರಕಾರ ನೆಲ ಮಹಡಿ ಭೂಮಿ ತತ್ವಕ್ಕೆ ಅತ್ಯಂತ ಹತ್ತಿರದಲ್ಲಿರುತ್ತದೆ. ಭೂಮಿಯ ಶಕ್ತಿಯು ಸ್ಥಿರತೆ ಮತ್ತು ಭದ್ರತೆಯ ಸಂಕೇತ. ಆದ್ದರಿಂದ ನೆಲ ಮಹಡಿಯಲ್ಲಿ ವಾಸಿಸುವವರಲ್ಲಿ ಮಾನಸಿಕ ಸ್ಥಿರತೆ ಮತ್ತು ಕುಟುಂಬದ ಬಾಂಧವ್ಯ ಹೆಚ್ಚಾಗಿರುತ್ತದೆ. ಹಿರಿಯ ನಾಗರಿಕರು ಮತ್ತು ಚಿಕ್ಕ ಮಕ್ಕಳು ಇರುವ ಮನೆಗಳಿಗೆ ನೆಲ ಮಹಡಿ ಅತ್ಯಂತ ಅನುಕೂಲಕರ. ಲಿಫ್ಟ್ ಅವಶ್ಯಕತೆ ಇಲ್ಲದಿರುವುದರಿಂದ ತುರ್ತು ಸಮಯದಲ್ಲಿ ಹೊರಗೆ ಹೋಗುವುದು ಸುಲಭ. ಆದರೆ ನೆಲ ಮಹಡಿಯಲ್ಲಿ ಸಾಕಷ್ಟು ನೈಸರ್ಗಿಕ ಬೆಳಕು ಮತ್ತು ಗಾಳಿ ಬರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಬಹುದು.
ಮೇಲಿನ ಮಹಡಿಗಳ ವಾಸ್ತು ಶಕ್ತಿ:
ನಾಲ್ಕನೇ ಮಹಡಿಯಿಂದ ಮೇಲಿನ ಮಹಡಿಗಳನ್ನು ವಾಸ್ತುವಿನಲ್ಲಿ ವಾಯು ಮತ್ತು ಆಕಾಶ ತತ್ವಕ್ಕೆ ಹೋಲಿಸಲಾಗುತ್ತದೆ. ಈ ಮಹಡಿಗಳಲ್ಲಿ ಸೂರ್ಯನ ಬೆಳಕು ಮತ್ತು ಶುದ್ಧ ಗಾಳಿಯ ಸಂಚಾರ ಅತ್ಯುತ್ತಮವಾಗಿರುತ್ತದೆ. ವಾಸ್ತು ಹೇಳುವ ಪ್ರಕಾರ ಬೆಳಕು ಮತ್ತು ಗಾಳಿ ಇರುವ ಜಾಗದಲ್ಲಿ ನಕಾರಾತ್ಮಕತೆ ನಾಶವಾಗುತ್ತದೆ. ಮೇಲಿನ ಮಹಡಿಯು ಸ್ವತಂತ್ರ ಯೋಚನೆ, ವೃತ್ತಿಯಲ್ಲಿ ಪ್ರಗತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕ. ಶಬ್ದ ಮತ್ತು ಕಳ್ಳತನದ ಭಯವೂ ಇಲ್ಲಿ ಕಡಿಮೆ ಇರುತ್ತದೆ.
ಹಾಗಾದ್ರೆ, ಯಾವ ಮಹಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು
ವಾಸ್ತು ತಜ್ಞರ ಪ್ರಕಾರ ಕಟ್ಟಡದ ಮೊದಲ ಮೂರು ಮಹಡಿಗಳು ಅತ್ಯಂತ ಶ್ರೇಷ್ಠ. ಯಾಕೆಂದರೆ ಇವು ಭೂಮಿಯ ಕಾಂತೀಯ ಶಕ್ತಿಯ ವಲಯದಲ್ಲಿರುತ್ತವೆ. ಅದ್ರಲ್ಲೂ, ಸ್ಥಿರತೆ ಬಯಸುವ ವ್ಯಾಪಾರಸ್ಥರು ಮತ್ತು ಹಿರಿಯರಿಗೆ ಕೆಳಗಿನ ಮಹಡಿಗಳು ಉತ್ತಮ. ಆದರೆ ಉದ್ಯೋಗದಲ್ಲಿ ಬೆಳವಣಿಗೆ ಮತ್ತು ಕೀರ್ತಿ ಬಯಸುವವರು ಮೇಲಿನ ಮಹಡಿಗಳನ್ನು ಆಯ್ಕೆ ಮಾಡಬಹುದು. ನಿಮ್ಮ ಜನ್ಮ ಕುಂಡಲಿ ಮತ್ತು ಕೆಲಸದ ಸ್ವರೂಪಕ್ಕೆ ಅನುಗುಣವಾಗಿ ಮಹಡಿಯನ್ನು ನಿರ್ಧರಿಸುವುದು ಒಳ್ಳೆಯದು.
ಏತನ್ಮಧ್ಯೆ, ಯಾವ ಮಹಡಿಯಲ್ಲಿದ್ದರೂ ಮನೆಯ ಮುಖ್ಯ ದ್ವಾರ ಪೂರ್ವ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ಅಡುಗೆ ಮನೆ ಆಗ್ನೇಯದಲ್ಲಿ ಮತ್ತು ಮಲಗುವ ಕೋಣೆ ನೈಋತ್ಯದಲ್ಲಿ ಇರುವುದು ಸೂಕ್ತ. ಇಡೀ ಅಪಾರ್ಟ್ ಮೆಂಟ್ ನ ನೈಋತ್ಯ ಭಾಗ ಭಾರವಾಗಿರಬೇಕು ಮತ್ತು ಈಶಾನ್ಯ ಭಾಗ ಮುಕ್ತವಾಗಿರಬೇಕು. ನೆಲ ಮಹಡಿಯಲ್ಲಿದ್ದರೆ ಸುತ್ತ ಗಿಡಗಳನ್ನು ಬೆಳೆಸಿ. ಮೇಲಿನ ಮಹಡಿಯಲ್ಲಿದ್ದರೆ ಬಾಲ್ಕನಿಯಲ್ಲಿ ಹೂವಿನ ಕುಂಡ ಇಡುವುದರಿಂದ ಧನಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ.