2014

ಸಿನಿಮೋತ್ಸವ: ಸಿನೆಮಾ ಕಲೆಯ ಬಗ್ಗೆ ಮೂರು ನಿರ್ದೇಶಕರ ಭಿನ್ನ ಆಲೋಚನೆ

Guruprasad Narayana

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ನಾಲ್ಕನೇ ದಿನವಾದ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕ ಶಾಜಿ ಎನ್ ಕರುಣ್ "ಸಿನಿಮಾ ಮಾಡಲು ೧೦ ವರ್ಷಗಳ ಹಿಂದೆ ಇದ್ದ ಹಿತಕರ ವಾತಾವಾರಣ ಇಂದು ಕಾಣೆಯಾಗಿದೆ" ಎಂದಿದ್ದಾರೆ.

ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿರುವ 'ಸ್ವಪಾನಂ' ಚಲನಚಿತ್ರದ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಸಂಸ್ಕೃತಿ ಮತ್ತು ಶಾಸ್ತ್ರೀಯ ಕಲೆಗಳ ಕಣಜ. ಇಂತಹ ಸಂಸ್ಕೃತಿ ಮತ್ತು ಕಲೆಗಳು ನಮ್ಮ ಸಿನೆಮಾಗಳಲ್ಲಿ ಕಾಣೆಯಾಗುತ್ತಿರುವುದು ದುರದೃಷ್ಟಕರ. ಕಳೆದ ಹಲವು ವರ್ಷಗಳಿಂದ ಸಿನೆಮಾ ಈ ಶಾಸ್ತ್ರಿಯ ಕಲೆಗಳನ್ನು ನಿರ್ಲ್ಯಕ್ಷಿಸಿದೆ ಮತ್ತು ಹಾಳುಗೆಡವಿದೆ. ಇಂತಹ ಶಾಸ್ತ್ರೀಯತೆಯನ್ನು 'ಸ್ವಪಾನಂ' ಸಿನೆಮಾದಲ್ಲಿ ಮರುಕಳಿಸಲು ಪ್ರಯತ್ನಿಸಿದ್ದೇನೆ ಎಂದರು.

ಇದೇ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಕೇರಳ ರಾಜ್ಯದವರೇ ಆದ, 'ಮುನ್ನಾರಿಯಪ್ಪು' ಚಲನಚಿತ್ರದ ನಿರ್ದೇಶಕ-ಸಿನೆಮಾಟೋಗ್ರಾಫರ್ ವೇಣು, ಇದಕ್ಕೆ ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಿನೆಮಾಗೆ ಬೇರೆ ಕಲೆಗಳ ಅವಶ್ಯಕತೆ ಇಲ್ಲ. ಅವುಗಳ ಸಹಾಯ ಬೇಕಿಲ್ಲ. ಸಿನೆಮಾನೇ ಒಂದು ಕಲಾ ಪ್ರಾಕಾರ. ಸಿನೆಮಾಗೆ ಡ್ರಾಮಾದ ಅವಶ್ಯಕತೆ ಕೂಡ ಇಲ್ಲ.  ಈ ನಿಟ್ಟಿನಲ್ಲಿ ನಾನು ನನ್ನ ಈ ಎರಡನೇ ಸಿನೆಮಾ 'ಮುನ್ನಾರಿಯಪ್ಪು' ಚಿತ್ರವನ್ನು ಒಂದು ಸರಳ ನಿರೂಪಣೆಯ ಮೂಲಕ ಕಥೆ ಹೇಳಿದ್ದೇನೆ. ಈ ಸಿನೆಮಾಗೆ ಬೇರೆ ಯಾವುದೇ ಕಲಾಪ್ರಾಕಾರವನ್ನು ನಾನು ಬಳಸಿಕೊಂಡಿಲ್ಲ ಎಂದರು.

ಕಲಾ ಸಿನೆಮಾ, ಪರ್ಯಾಯ ಸಿನೆಮಾಗಳು ಎಂದು ಹೇಳಿಕೊಳ್ಳುವ ಸಿನೆಮಾಗಳಲ್ಲೂ  ಕೆಟ್ಟ ಸಿನೆಮಾಗಳಿವೆ. ಕಮರ್ಷಿಯಲ್ ಸಿನೆಮಾ ಎಂದು ಹೇಳಿಕೊಳ್ಳುವ ಚಿತ್ರಗಳಲ್ಲೂ ಒಳ್ಳೆಯ ಸಿನೆಮಾಗಳಿವೆ. ಈ ಪರ್ಯಾಯ ಅಥವಾ ಕಲಾ ಸಿನೆಮಾ ಎಂಬ ಪ್ರಾಕಾರಕ್ಕೆ ನನ್ನ ಸಿನೆಮಾವನ್ನು ಸೇರಿಸಿಕೊಳ್ಳಲು ಒಲವಿಲ್ಲ ಎಂದರು. ನನ್ನ ಸಿನೆಮಾಗೆ ಬೆಂಗಳೂರು ಸಿನಿಮೋತ್ಸವದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಕನ್ನಡ ಸಿನೆಮಾ 'ಅತ್ತಿ ಹಣ್ಣು ಮತ್ತು ಕಣಜ' ಚಲನಚಿತ್ರದ ನಿರ್ದೇಶಕ ಎಂ ಎಸ್ ಪ್ರಕಾಶ್ ಬಾಬು ಮಾತನಾಡಿ, ನನ್ನ ಸಿನೆಮಾದಲ್ಲಿ ನಾನು ಕಥೆ ಹೇಳಿಲ್ಲ. ಸಾಮಾನ್ಯವಾಗಿ ಸಿನೆಮಾಗಳು ವಸ್ತುವಿಗೆ ಒತ್ತು ಕೊಟ್ಟು ಕಥೆಯನ್ನು  ನಿರೂಪಿಸುವಂತೆ ನಾನು ಸಿನೆಮಾ ಮಾಡಿಲ್ಲ. ನಾನು ಸಿನೆಮಾವನ್ನು ದೃಶ್ಯ ಮಾಧ್ಯಮ ಎಂದುಕೊಂಡು ದೃಷ್ಯಗಳಲ್ಲೆ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ. ನನ್ನ ಸಿನೆಮಾ ಕಾವ್ಯಕ್ಕೆ ಹತ್ತಿರ. ಇದನ್ನು ಅನುಭವಿಸಬೇಕು. ಸಮಯದ ಕಲ್ಪನೆಯನ್ನು ಸಿನೆಮಾದಲ್ಲಿ ಚರ್ಚಿಸಲು ಪ್ರಯತ್ನಿಸಿದ್ದೇನೆ ಎಂದರು.

SCROLL FOR NEXT