ನವದೆಹಲಿ: ಕೇಂದ್ರ ಸರ್ಕಾರ 2017-18 ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ನೀಡುವ ದೇಣಿಗೆಯ ಗರಿಷ್ಠ ಮೊತ್ತವನ್ನು 20 ಸಾವಿರದಿಂದ 2 ಸಾವಿರಕ್ಕೆ ಇಳಿಸಿದ್ದಾರೆ.
ದೇಣಿಗೆ ಪಡೆಯುವ ವಿಷಯದಲ್ಲಿ ರಾಜಕೀಯ ಪಕ್ಷಗಳು ಪಾರದರ್ಶಕತೆ ಕಾಯ್ದುಕೊಳ್ಳಬೇಕಿರುವಂತೆ ಮಾಡಲು ಅರುಣ್ ಜೇಟ್ಲಿ, ರಾಜಕೀಯ ದೇಣಿಗೆಗೆ ಸಂಬಂಧಿಸಿದಂತೆ ಬಜೆಟ್ ನಲ್ಲಿ ಕೆಲವು ಕ್ರಮಗಳನ್ನು ಘೋಷಿಸಿದ್ದು, ಓರ್ವ ವ್ಯಕ್ತಿಯಿಂದ ನಗದು ರೂಪದಲ್ಲಿ ಪಡೆಯಬಹುದಾಗಿದ್ದ ಗರಿಷ್ಠ ದೇಣಿಗೆ ಮೊತ್ತವನ್ನು 20 ಸಾವಿರದಿಂದ 2 ಸಾವಿರಕ್ಕೆ ಇಳಿಕೆ ಮಾಡಿರುವುದು ಪ್ರಮುಖ ಅಂಶವಾಗಿದೆ.
ಓರ್ವ ವ್ಯಕ್ತಿಯಿಂದ 2 ಸಾವಿರಕ್ಕೂ ಹೆಚ್ಚು ದೇಣಿಗೆ ಪಡೆಯುವುದಿದ್ದರೆ ಚೆಕ್, ಡಿಜಿಟಲ್ ಪಾವತಿ ಮೂಲಕ ದೇಣಿಗೆ ಪಡೆಯಲು ಅವಕಾಶ ನೀಡಲಾಗಿದೆ. ಆದರೆ ದೇಣಿಗೆ ನೀಡುವವರ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯಗೊಳಿಸಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. ಅರುಣ್ ಜೇಟ್ಲಿ ಅವರ ಘೋಷಣೆಯಿಂದ ಎಗ್ಗಿಲ್ಲದೇ ದೇಣಿಗೆ ರಾಜಕೀಯ ಪಕ್ಷಗಳಿಗೆ ಹೊಡೆತ ಬಿದ್ದಿದ್ದು, ದೇಣಿಗೆ ಪಾವತಿಯಲ್ಲಿ ಪಾರದರ್ಶಕತೆ ತರಲು ಮಹತ್ವದ ನಡೆಯಾಗಿದೆ.