ರಾಜ್ಯ ಬಜೆಟ್

ರೈತರ ಸಾಲ ಮನ್ನಾ; 4 ವರ್ಷಗಳಲ್ಲಿ ಬ್ಯಾಂಕ್ ಗಳ ಸಾಲ ತೀರಿಸುತ್ತೇವೆ: ಸಿಎಂ ಕುಮಾರಸ್ವಾಮಿ

Raghavendra Adiga
ಬೆಂಗಳೂರು: ಸಮ್ಮಿಶ್ರ ಸರ್ಕಾರದ ನೂತನ ಬಜೆಟ್ ಮಂಡಿಸಿರುವ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಪ್ರತಿಪಕ್ಷ ಬಿಜೆಪಿ ನಾಯಕರ ಟಿಕೆಗೆ ಕಟುವಾಗಿ ಪ್ರತಿಕ್ರಯಿಸಿದ್ದಾರೆ,
ಕೃಷಿ ಸಾಲ ಮನ್ನಾ ಗಾಗಿ ಬ್ಯಾಂಕರ್ಸ್ ಗಳೊಡನೆ ಮಾತನಾಡಿದ್ದೇವೆ.  34 ಸಾವಿರ ಕೋಟಿ ಒಟ್ಟು ಸಾಲದ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಬಾಕಿ ಪಾವತಿ ಮಾಡಲಿದ್ದೇವೆ. 4 ವರ್ಷಗಳಲ್ಲಿ ಬ್ಯಾಂಕುಗಳಿಗೆ ಸರ್ಕಾರ ರೈತರ ಸಾಲದ ಮೊತ್ತವನ್ನು ಪಾವತಿಸಲಿದೆ. ಆದರೆ ರೈತರಿಗೆ ನಾವು ಈಗಲೇ ಸಾಲ ಮುಕ್ತ ಪ್ರಮಾಣಪತ್ರ ನಿಡಲಿದ್ದೇವೆ. ಎಂದು ಮುಖ್ಯಮಂತ್ರಿಗಳು ಸಾಲ ಮನ್ನಾ ಕುರಿತಂತೆ ಪ್ರತಿಕ್ರಯಿಸಿದ್ದಾರೆ.
ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ಅನ್ನೇ ಮುಂದುವರಿಸಿ ಪರಿಷ್ಕೃತ ಬಜೆಟ್ ಮಂಡಿಸಿದ್ದೇನೆ.ನಾನೇನೂ ಹೊಸ ಬಜೆಟ್ ಮಂಡಿಸಿಲ್ಲ ಎಂದು ಕುಮಾರಸ್ವಾಮಿ ತನ್ನ ಬಜೆಟ್ ಬಗ್ಗೆ ಸ್ಪಷ್ಟನೆ ನಿಡಿದ್ದಾರೆ.
ಇದು ಕೇವಲ ಹಾಸನದ ಬಜೆಟ್ ಅಲ್ಲ, ಇದರಲ್ಲಿ ಕರಾವಳಿ, ಮಲೆನಾಡು,  ಉತ್ತರ ಕರ್ನಾಟಕ ಸೇರಿ ಅಖಂಡ ಕರ್ನಾಟಕಕ್ಕೆ ಬೇಕಾದ ಯೋಜನೆಗಳಿದೆ. ಅದೇ ವೇಳೆ ಹಿಂದಿನ ಸರ್ಕಾರ ಘೊಷಿಸಿದ್ದ ಯೋಜನೆ ಸಹ ಮುಂದುವರಿಯುತ್ತದೆ. ಈ ಕುರಿತು ಯಾರಿಗೆ ಗೊಂದಲ ಬೇಡ ಎಂದು ಕುಮಾರಸ್ವಾಮಿ ನುಡಿದರು.
ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿ
ಬಿಜೆಪಿ ನಾಯಕರು ಕೇವಲ ಹುಳುಕು ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದು ವಿರೋಧ ಪಕ್ಷ ನಾಯಕರ ಟೀಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ರಿಂಗ್ ರಸ್ತೆ ನಿರ್ಮಾಣ ಯೋಜನೆ ರೂಪಿಸಿದೇವೆ.2006 ರಲ್ಲೇ ಈ ಕುರಿತಂತೆ ತೀರ್ಮಾನಿಸಿದ್ದೇವೆ. ಆದರೆ ಬಿಜೆಪಿ ನಾಯಕರು ಈ ರಿಂಗ್ ರಸ್ತೆ ಯೋಜನೆಯನ್ನೇ ವಿರೋಧಿಸುತ್ತಿದ್ದಾರೆ.ಹೆಬ್ಬಾಳ ಫ್ಲೈ ಓವರ್ ನಿರ್ಮಾಣಕ್ಕೆ 1000 ಕೋಟಿ, ಬೆಂಗಳೂರು ನಗರಕ್ಕೆ 11,000 ಕೋಟಿ ರೂ. ಮೀಸಲಿಟ್ಟಿದ್ದೇವೆ. ಇದನ್ನು ಅರ್ಥ ಮಾಡಿಕೊಳ್ಳದ ಅಶೋಕ್ ತಾವು ನನ್ನ ಬಜೆಟ್ ಯೋಜನೆ ಬಗ್ಗೆ ಟೀಕಿಸಿದ್ದಾರೆ ಎಂದರು.
ಪೆಟ್ರೋಲ್ ದರ ಹೆಚ್ಚಳಕ್ಕೆ ಸ್ಪಷ್ಟನೆ
ಪೆಟ್ರೋಲ್ ಡೀಸೆಲ್ ದರಗಳು ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ. ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ನಮಗಿಂತ ಹೆಚ್ಚು ದರ ಇದೆ. ಪ್ರತಿಪಕ್ಷ  ಬಿಜೆಪಿ ಅದರ ಕುರಿತಂತೆ ಮಾತನಾಡುವುದಿಲ್ಲ. ಮೋದಿ ಸರ್ಕಾರಕ್ಕೆ ರಾಜ್ಯಕ್ಕೆ ನೆರವಾಗುವಂತೆ ಯಾವ ಹಣಕಾಸು ನೆರವು ನೀಡುವ ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
SCROLL FOR NEXT