ನವದೆಹಲಿ: ದೇಶದಲ್ಲಿ ಉದ್ಯೋಗ ಸೃಷ್ಟಿದಾರರು ದೇಶದ ಸಂಪತ್ತು ಸೃಷ್ಟಿದಾರರಾಗಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂದು ಸಂಸತ್ತಿನಲ್ಲಿ 2019-20ನೇ ಸಾಲಿನ ವಿತ್ತೀಯ ಬಜೆಟ್ ಮಂಡಿಸುತ್ತಿರುವ ಅವರು, ಇಂಡಿಯಾ ಇಂಕ್ ಕಂಪೆನಿಯನ್ನು ಶ್ಲಾಘಿಸಿದರು. ಇಂಡಿಯಾ ಇಂಕ್ ಉದ್ಯೋಗ ಸೃಷ್ಟಿದಾರರು ದೇಶದ ಸಂಪತ್ತು ಕ್ರೋಢಿದಾರರಾಗಿದ್ದು ಒಟ್ಟಾಗಿ ನಾವು ಆರ್ಥಿಕ ಬೆಳವಣಿಗೆ ಹೊಂದಬಹುದು. ಬೆಳವಣಿಗೆಯನ್ನು ಹೊಂದಲು ನಾನು ಈ ಸಂದರ್ಭದಲ್ಲಿ ಹಲವು ಸುಧಾರಣೆಗಳನ್ನು ಪ್ರಸ್ತಾಪಿಸುತ್ತೇನೆ ಎಂದರು.
ದೇಶದ ಅರ್ಥ ವ್ಯವಸ್ಥೆಯ ಗಾತ್ರವನ್ನು 5 ಟ್ರಿಲಿಯನ್ ಡಾಲರ್ ಗೆ ತಲುಪಲು ನಾವು ಆಕಾಂಕ್ಷೆ ವ್ಯಕ್ತಪಡಿಸಿದಾಗ ಅದು ಸಾಧ್ಯವೇ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದರು. ನಿಗದಿತ ಗುರಿಯನ್ನು ತಲುಪಲು ಸಾಧ್ಯವಿದೆ. ನಮ್ಮ ನಾಗರಿಕರ ಆಸೆ, ಆಕಾಂಕ್ಷೆಗಳು ಮತ್ತು ಸರ್ಕಾರದ ಬಲಿಷ್ಠ ನಾಯಕತ್ವದಿಂದ ಇದು ಸಾಧ್ಯ ಎಂದರು.
ಪ್ರಸಕ್ತ ಹಣಕಾಸು ವರ್ಷದ ಕೊನೆಯಲ್ಲಿ ಭಾರತದ ಆರ್ಥಿಕ ಗಾತ್ರ 3 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ. ಆರ್ಥಿಕ ವಿಚಾರದಲ್ಲಿ ಭಾರತ ವಿಶ್ವದಲ್ಲಿ 6ನೇ ಅತಿದೊಡ್ಡ ದೇಶವಾಗಿದ್ದು 5 ವರ್ಷಗಳ ಹಿಂದೆ 11ನೇ ಸ್ಥಾನದಲ್ಲಿ ಭಾರತ ಇತ್ತು ಎಂದು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಬಲಿಷ್ಠ ದೇಶ ಮತ್ತು ಬಲಿಷ್ಠ ಜನರನ್ನು ಬೆಳೆಸುವುದು ತಮ್ಮ ಸರ್ಕಾರದ ಗುರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನಲೆ ಜನವರಿಯಿಂದ ಮಾರ್ಚ್ವರೆಗೆ ದೇಶದ ಆರ್ಥಿಕತೆ ಕುಸಿತ ಕಂಡಿತ್ತು. ಆದರೆ, ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕತೆ ಚೇತರಿಕೆಯಾಗಲಿದೆ, ಈ ಬಾರಿ ಶೇ.6.1ರಷ್ಟು ನಿರುದ್ಯೋಗ ಪ್ರಮಾಣ ಕಡಿಮೆಯಾಗಲಿದ್ದು, ಉದ್ಯೋಗಾವಕಾಶ ಹೆಚ್ಚಿಸಲು ಒತ್ತು ನೀಡಲಾಗಿದೆ. ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಠಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos