ಕೇಂದ್ರ ಬಜೆಟ್

ದಿಕ್ಕು-ದೆಸೆ ಇಲ್ಲದ ಸ್ಫೂರ್ತಿದಾಯಕವಲ್ಲದ ನೀರಸ ಬಜೆಟ್‍: ಕಾಂಗ್ರೆಸ್‍

Lingaraj Badiger
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿದ ಬಜೆಟ್‌ ಅನ್ನು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕಟುವಾಗಿ ಟೀಕಿಸಿದ್ದು, ಇದೊಂದು ದಿಕ್ಕು-ದೆಸೆ ಇಲ್ಲದ ಬಜೆಟ್ ಎಂದಿದೆ.
ರೈತರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಬಜೆಟ್ ನಲ್ಲಿ ಯಾವುದೇ ಕ್ರಮಗಳನ್ನು ಪ್ರಕಟಿಸಿಲ್ಲ. ಗ್ರಾಮೀಣ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಬಜೆಟ್‍ನಲ್ಲಿ ಯಾವುದೇ ನೀತಿ ಹೊಂದಿಲ್ಲ ಎಂದು ಕಾಂಗ್ರೆಸ್‍ ಪ್ರತಿಕ್ರಿಯಿಸಿದೆ.
ಕೆಲವು ಪದಗಳಿಂದ ಕೃಷಿ ವಲಯದಲ್ಲಿನ ಸಮಸ್ಯೆ ಪರಿಹಾರವಾಗುತ್ತದೆಯೇ? ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿದ್ದು, ಬಜೆಟ್‍ನಲ್ಲಿ 'ಗರಿಷ್ಠ ಉದ್ದೇಶ, ಕನಿಷ್ಠ ವಿಷಯ' ಮಾತ್ರ ಇದೆ ಎಂದಿದ್ದಾರೆ.
ದಿಕ್ಕುದೆಸೆ ಇಲ್ಲದ, ಸ್ಪೂರ್ತಿದಾಯಕವಲ್ಲದ ಹಾಗೂ ನೀರಸ ಬಜೆಟ್‍ ಇದಾಗಿದೆ. ಆರ್ಥಿಕ ಪುನಶ್ಚೇತನ, ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೃಷ್ಟಿ,ನಗರ ಪುನಶ್ಚೇತನ ಕುರಿತಂತೆ ಏನೂ ಪ್ರಸ್ತಾಪವಿಲ್ಲ. ಕೇವಲ ಪದಗಳಿಂದ ನವಭಾರತದ ಕಲ್ಪನೆ ಈಡೇರುವುದೇ?' ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.
'ಬಜೆಟ್‍ನಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಸ್ತಾಪವಿಲ್ಲ, ಕನಿಷ್ಠ ಬೆಂಬಲ ಬೆಲೆ ಬಗ್ಗೆ (ಎಂಎಸ್‌ಪಿ) ಯಾವುದೇ ಭರವಸೆ ನೀಡಿಲ್ಲ, ಬರ ಪರಿಸ್ಥಿತಿ ಎದುರಿಸುವ ಕುರಿತು ಪ್ರಸ್ತಾಪವಿಲ್ಲ. ಗ್ರಾಮೀಣ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಸ್ತಾವವೂ ಇಲ್ಲ.' ಎಂದು ಅವರು ಆರೋಪಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹಾಗೂ ರಸ್ತೆ ಮತ್ತು ಮೂಲಸೌಕರ್ಯಗಳ ಮೇಲಿನ ಸೆಸ್ ಹೆಚ್ಚಿಸುವ ಬಜೆಟ್ ಪ್ರಸ್ತಾಪವನ್ನು ಉಲ್ಲೇಖಿಸಿದ ಸುರ್ಜೆವಾಲಾ, ಇದು ಡೀಸೆಲ್ ದರ ಮಾತ್ರ 2 ರೂ.ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
SCROLL FOR NEXT