ಬೆಂಗಳೂರು: ಆರ್ಥಿಕ ಸಚಿವರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು, ಶಿಕ್ಷಣ ಕ್ಷೇತ್ರಕ್ಕೆ ಭಾರೀ ಅನುದಾನವನ್ನು ಘೋಷಿಸಿದ್ದಾರೆ.
ತಮ್ಮ ಚೊಚ್ಚಲ ಬಜೆಟ್ ಗೆ ತ್ರಿವಳಿ ಸೂತ್ರ 3E ( ಶಿಕ್ಷಣ, ಉದ್ಯೋಗ, ಸಬಲೀಕರಣ) ಅನುಸರಿಸುವ ಬೊಮ್ಮಾಯಿಯವರು, ಶಿಕ್ಷಣ ಇಲಾಖೆಗೆ ರೂ.31,980 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ಹೋಬಳಿ ಮಟ್ಟದಲ್ಲಿ ಮೂಲಭೂತ ಸೌಕರ್ಯವಿರುವ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಉನ್ನತೀಕರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿರುವುದಾಗಿ ಘೋಷಿಸಿದ್ದಾರೆ.
ಅಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮಾರ್ಗಸೂಚಿಯಂತೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ, ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯ ಕ್ರಮ ರಚಿಸಲಾಗುವುದು ಎಂದು ಹೇಳಿದರು. ಅಲ್ಲದೇ ಮುಂದಿನ ವರ್ಷದಿಂದ ಎನ್ ಇಪಿ ರಾಜ್ಯಾದ್ಯಂತ ಜಾರಿಯಾಗಲಿದೆ ಎಂದು ತಿಳಿಸಿದರು.
ತಮ್ಮ ಚೊಚ್ಚಲ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿಯವರು ಘೋಷಿಸಿರುವ ಕೊಡುಗೆಗಳು ಇಂತಿವೆ...
- ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 500 ಕೋಟಿ ರೂ ಅನುದಾನ ನೀಡಲಾಗಿದೆ.
- ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಅಭಿವೃದ್ಧಿಗೆ ರೂ.100 ಕೋಟಿ ಅನುಷ್ಠಾನ.
- ಚಾಮರಾಜನಗರ ಸೇರಿದಂತೆ ವಿವಿಧ ಕಡೆ ಒಟ್ಟು 7 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಘೋಷಣೆ ಮಾಡಲಾಗಿದೆ.
- ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಪಿಜಿ ಕೋರ್ಸ್ಗಳ ಪ್ರಾರಂಭಕ್ಕೆ ಘೋಷಣೆ.
- ರಾಜ್ಯದಲ್ಲಿ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತೀಕರಿಸಲು ಅನುದಾನ ಘೋಷಿಸಲಾಗಿದೆ.
- ಶಿಕ್ಷಣ, ಉದ್ಯೋಗ ಸಹಕಾರಕ್ಕಾಗಿ ಪ್ರತಿಷ್ಠಿತ ವಿದೇಶಿ ವಿವಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು.
- ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಒಂದು ಹೊಸ ಕೃಷಿ ಕಾಲೇಜಿಗೆ ಬಜೆಟ್ನಲ್ಲಿ ಆಧ್ಯತೆ ನೀಡಲಾಗಿದೆ.
- ಬೆಳಗಾವಿ ಅಥಣಿಯಲ್ಲೂ ಹೊಸ ಕೃಷಿ ಕಾಲೇಜು ಸ್ಥಾಪನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
- ರಾಯಚೂರು ವಿವಿಗೆ 15 ಕೋಟಿ ವೆಚ್ಚ ವಿನಿಯೋಗಿಸಲಾಗಿದೆ.
- 30 ಸರ್ಕಾರಿ ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಲು ಬಜೆಟ್ ವಿನಿಯೋಗಿಸಲಾಗಿದೆ.
- ಚಿತ್ರದುರ್ಗಕ್ಕೆ ಹೊಸ ವೈದ್ಯಕೀಯ ಕಾಲೇಜು ಘೋಷಣೆ ಮಾಡಲಾಗಿದೆ.
- ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು ಘೋಷಣೆ ಮಾಡಲಾಗಿದೆ.
- ತಾಲೂಕು ಕೇಂದ್ರಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿ ನೀಡಲು ತರಬೇತಿ ಕೇಂದ್ರಗಳಿಗೆ 2022-23 ನೇ ಸಾಲಿನಲ್ಲಿ ಅನುದಾನ ವಿನಿಯೋಗಿಸಲಾಗಿದೆ.
- ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಅನುದಾನ ನೀಡಲಾಗಿದೆ.
- ಉದ್ಯೋಗಸ್ಥ ಮಹಿಳೆಯರಿಗೆ ಹೊಸ ವಸತಿ ನಿಲಯಗಳಿಗೆ ಅನುದಾನ ನೀಡಲಾಗಿದೆ.
- ಸಬಲೀಕರಣ ಪ್ರೋತ್ಸಾಹಕ್ಕೆ ಮಹಿಳಾ ಸ್ಟಾರ್ಟ್ಅಪ್ಗೆ 10 ಲಕ್ಷ ರೂ. ನೇರ ಸಾಲ ಘೋಷಣೆ ಮಾಡಲಾಗಿದೆ.
- ಮಕ್ಕಳ ಅಭ್ಯುದಯಕ್ಕೆ ಒಟ್ಟು ರೂ.40,944 ಕೋಟಿ ವಿನಿಯೋಗಿಸಲಾಗಿದೆ.