ನವದೆಹಲಿ: ನಗರಗಳ ಉಸಿರುಗಟ್ಟಿಸುತ್ತಿರುವ ವಾಯುಮಾಲಿನ್ಯದ ತೀವ್ರತೆ ತಡೆಗಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರ, 15 ವರ್ಷಕ್ಕಿಂತ ಮೇಲ್ಪಟ್ಟ ಟ್ರಕ್ಗಳ ಸಂಚಾರವನ್ನು ದೇಶಾದ್ಯಂತ ನಿಷೇಧಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಇನ್ನು ಹತ್ತು ದಿನಗಳಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಬೀಳಲಿದ್ದು, ಮುಂದಿನ ವರ್ಷದ ಏಪ್ರಿಲ್ನಿಂದ ಜಾರಿಗೆ ಬರಲಿದೆ. ಈ ಬಗ್ಗೆ `ದ ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಇಂಥ ಆದೇಶ ಜಾರಿಯಿಂದ ಮಾಲಿನ್ಯ ಪ್ರಮಾಣದ ಮೇಲೆ ಯಾವ ರೀತಿಯ ಪರಿಣಾಮ ಆಗಲಿದೆ ಎಂಬುದರ ಕುರಿತು ಪರಾಮರ್ಶೆ ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವಾಲಯದ ಹಿರಿಯ ಅಧಿಕಾರಿ ವಿಜಯ್ ಚಿಬ್ಬರ್ ಹೇಳಿದ್ದಾರೆ.
ನಗರ ಮಾಲಿನ್ಯದಿಂದಾಗಿ ದೇಶಾದ್ಯಂತ ಪ್ರತಿ ವರ್ಷ 6 ಲಕ್ಷಕ್ಕೂ ಹೆಚ್ಚು ಜನ ಅಕಾಲಿಕವಾಗಿ ಸಾಯುತ್ತಿದ್ದಾರೆ. ಜಗತ್ತಿನ 20 ಅತಿ ಹೆಚ್ಚು ಮಾಲಿನ್ಯಭರಿತ ನಗರಗಳ ಪೈಕಿ ಭಾರತ 13 ನಗರಗಳನ್ನು ಹೊಂದಿದೆ. ಈ ಪೈಕಿ ನವದೆಹಲಿ ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ವರ್ಷ ವರದಿ ನೀಡಿತ್ತು.
ಈ ಹಿನ್ನೆಲೆಯಲ್ಲಿ, ನಗರದ ಮಾಲಿನ್ಯದ ಹಿನ್ನೆಲೆ ಪರಿಶೀಲಿಸಿದ್ದ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವೈರಾನ್ಮೆಂಟ್ (ಸಿಎಸ್ಇ), ಹಳೆಯ ಟ್ರಕ್ ಗಳು ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿದ್ದು, ನಗರ ಮಾಲಿನ್ಯದಲ್ಲಿ ಇವುಗಳ ಪಾಲು ಶೇ.60ರಷ್ಟಿದೆ ಎಂಬುದನ್ನು ಬಹಿರಂಗಪಡಿಸಿತ್ತು.
ಆದರೆ, ಕೇವಲ ಟ್ರಕ್ಗಳಷ್ಟೇ ಹೆಚ್ಚು ಮಾಲಿನ್ಯ ತರುತ್ತಿವೆ ಎಂಬ ವಾದಕ್ಕೆ ವಿರೋಧ ವ್ಯಕ್ತಪಡಿಸಿರುವ ಸರಕು ಉದ್ಯಮ, ಖಾಸಗಿ ಕಾರುಗಳು ಹಾಗೂ ನಿಲುಗಡೆ ಶುಲ್ಕವನ್ನು ಹೆಚ್ಚಿಸಬೇಕು. ಹೆಚ್ಚೆಚ್ಚು ಜನ ಸಾರ್ವಜನಿಕ ಸಾರಿಗೆ ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos