ನವದೆಹಲಿ: ಜನವರಿ ತಿಂಗಳ ಚಿಲ್ಲರೆ ಹಣದುಬ್ಬರ ದರ ಪ್ರಕಟಾವಾಗಿದ್ದು, ದೆಹಲಿ, ಜಮ್ಮು-ಕಾಶ್ಮೀರದ ಚಿಲ್ಲರೆ ಹಣದುಬ್ಬರ ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟಾಗಿದೆ ಎಂದು ಅಸೋಚಾಮ್ ಹೇಳಿದೆ.
ದೇಶದ ಒಟ್ಟಾರೆ ಹಣದುಬ್ಬರ ದರ ಶೇ.3.17 ರಷ್ಟಿದ್ದರೆ, ದೆಹಲಿ ರಾಜ್ಯವೊಂದರ ಹಣದುಬ್ಬರ ಶೇ.6.32 ರಷ್ಟಿದೆ. ಇನ್ನು ಜಮ್ಮು-ಕಾಶ್ಮೀರದ ಹಣದುಬ್ಬರ ಶೇ. 7.01 ರಷ್ಟು, ಹಿಮಾಚಲ ಪ್ರದೇಶದ ಹಣದುಬ್ಬರ ಶೇ.5.92 ರಷ್ಟಿದೆ ಎಂದು ಅಸೋಚಾಮ್ ತಿಳಿಸಿದೆ.
ದೆಹಲಿ-ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಹಣದುಬ್ಬರ ದರ ಏರಿಕೆಯಾಗಲು ನೋಟು ನಿಷೇಧದ ಪರಿಣಾಮವೂ ಇರುವ ಸಾಧ್ಯತೆ ಇದೆ ಎಂದು ಅಸೋಚಾಮ್ ನ ಅಧ್ಯಕ್ಷ ಸಂದೀಪ್ ಜಜೋಡಿಯಾ ಅಭಿಪ್ರಾಯಪಟ್ಟಿದ್ದಾರೆ. ನೋಟು ನಿಷೇಧದಿಂದ ಹಣದುಬ್ಬರ ದರ ಏರಿಕೆಯಾಗಿದೆ. ಆದರೆ ರಾಷ್ಟ್ರೀಯ ಸರಾಸರಿಗಿಂತ ದೆಹಲಿಯಲ್ಲಿ ಹಣದುಬ್ಬರ ದರ ಏರಿಕೆಯಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಜಜೋಡಿಯಾ ಹೇಳಿದ್ದಾರೆ.
ನೋಟು ನಿಷೇಧದಿಂದ ರಾಷ್ಟ್ರ ರಾಜಧಾನಿಯಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ಬೇಡಿಕೆಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಸೋಚಾಮ್ ತಿಳಿಸಿದೆ.