ಅಹಮದಾಬಾದ್: ನೋಟುಗಳ ಅಮಾನ್ಯತೆ, ಹಣಕಾಸು ಸುಧಾರಣೆ ಮತ್ತು ಕಾರ್ಮಿಕ ನೀತಿ ಕುರಿತು ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ದೇಶಾದ್ಯಂತ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಇದೇ 28ರಂದು ಮುಷ್ಕರ ನಡೆಸಲಿದ್ದಾರೆ.
ನೋಟುಗಳ ಅಮಾನ್ಯತೆ ಬಳಿಕ ಕಚೇರಿ ಅವಧಿ ಮುಗಿದ ನಂತರ ಮತ್ತು ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಕೆಲಸ ಮಾಡಿದ ನೌಕರರಿಗೆ ಪರಿಹಾರ ನೀಡಬೇಕೆಂದು ಬ್ಯಾಂಕ್ ನೌಕರರು ಒತ್ತಾಯಿಸಿದ್ದಾರೆ.
ವಾರದಲ್ಲಿ 5 ದಿನ ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸುವ ನಿರ್ಧಾರವನ್ನು ಸರ್ಕಾರ ಜಾರಿಗೆ ತರಬೇಕು. ಪಾವತಿ ಗ್ರ್ಯಾಚ್ಯುಟಿ ಕಾಯಿದೆ 1972ರ ಅಡಿಯಲ್ಲಿ ಗ್ರಾಚ್ಯುಟಿ ಸೀಲಿಂಗ್ ನ್ನು ತೆಗೆದುಹಾಕುವಂತೆ, ಗ್ರಾಚ್ಯುಟಿಯ ಆದಾಯ ತೆರಿಗೆ ವಿನಾಯ್ತಿ ಮತ್ತು ನಿವೃತ್ತಿ ನಂತರ ಗಳಿಕೆ ರಜೆ ನಗದೀಕರಣ(leave encashment on retirement) ಬೇಡಿಕೆಯನ್ನು ನೌಕರರು ಇದೇ ಸಂದರ್ಭದಲ್ಲಿ ಇಟ್ಟಿದ್ದಾರೆ.