ನವದೆಹಲಿ: ಜುಲೈ ತಿಂಗಳ ಕೊನೆಯ ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ ನ್ನು ಇಂದು ಸಾಯಂಕಾಲದೊಳಗೆ ಸಲ್ಲಿಸುವಂತೆ ಸರ್ಕಾರಿ ಉದ್ಯಮಗಳಿಗೆ ಸೂಚಿಸಿದ್ದು, ಅವಧಿಯನ್ನು ವಿಸ್ತರಿಸುವುದಿಲ್ಲ ಎಂದು ಹೇಳಿದೆ.
ಎರಡು ತಿಂಗಳವರೆಗೆ ಈಗಾಗಲೇ ವಿಸ್ತರಿಸಲಾಗಿತ್ತು.ಹೀಗಾಗಿ ಜುಲೈ ತಿಂಗಳ ಜಿಎಸ್ ಟಿಆರ್-1 ರಿಟರ್ನ್ಸ್ ಸಲ್ಲಿಸಲು ತೆರಿಗೆ ಪಾವತಿದಾರರಿಗೆ ಇನ್ನು ಅವಧಿ ವಿಸ್ತರಿಸುವುದಿಲ್ಲ ಎಂದು ಹೇಳಿದ್ದಾರೆ.
ಜುಲೈ ತಿಂಗಳ ಜಿಎಸ್ ಟಿಆರ್-1 ಸಲ್ಲಿಸದವರು ಇಂದು ಸಾಯಂಕಾಲದೊಳಗೆ ತಕ್ಷಣವೇ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಇಂದು ಸಾಯಂಕಾಲದೊಳಗೆ ಜಿಎಸ್ ಟಿಆರ್ -1 ಸಲ್ಲಿಸಿದ ಕೂಡಲೇ ಜಿಎಸ್ ಟಿಆರ್-2ಎ ಸಲ್ಲಿಕೆಗೆ ಸ್ವಯಂಚಾಲಿತ ಪ್ರಕ್ರಿಯೆ ಆರಂಭವಾಗುತ್ತದೆ. ಖರೀದಿದಾರರು ಜಿಎಸ್ ಟಿಆರ್-2ಎಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವ ಮೂಲಕ ಖರೀದಿದಾರರು ಅಂತಿಮಗೊಳಿಸಿ ಇನ್ಪುಟ್ ತೆರಿಗೆ ಕ್ರೆಡಿಟ್ (ಐಟಿಸಿ)ನ್ನು ಪಡೆಯಬಹುದು.
ಒಂದು ವೇಳೆ ಇಂದು ಸಾಯಂಕಾಲದೊಳಗೆ ಜಿಎಸ್ ಟಿಆರ್-1ನ್ನು ತೆರಿಗೆದಾರರು ಸಲ್ಲಿಸದಿದ್ದರೆ ಖರೀದಿದಾರರು ತನಗೆ ಪೂರೈಕೆಯಾದ ವಸ್ತುಗಳಿಗೆ ತೆರಿಗೆ ಪಾವತಿಸಿದ ಐಟಿಸಿ ಪಡೆಯಲು ತೊಂದರೆಯಾಗಬಹುದು ಎಂದು ಹಣಕಾಸು ಸಚಿವಾಲಯ ಹೇಳಿದೆ.
ಬಿ2ಬಿ ಪೂರೈಕೆದಾರರು ಸೇರಿದಂತೆ ಸರಕು ಮತ್ತು ಸೇವಾ ಪೂರೈಕೆದಾರರು ಇಂದು ಸಾಯಂಕಾಲದೊಳಗೆ ಸರಬರಾಜು ವಿವರಗಳನ್ನು ಒದಗಿಸಿದರೆ ಐಟಿಸಿ ಪಡೆಯಲು ಯಾವುದೇ ಸಮಸ್ಯೆಯುಂಟಾಗುವುದಿಲ್ಲ.ಇತ್ತೀಚಿನ ಅಂಕಿಅಂಶ ಪ್ರಕಾರ, ಜುಲೈ ತಿಂಗಳ ಜಿಎಸ್ ಟಿಆರ್-3ಬಿಯನ್ನು ಸುಮಾರು 3 ಲಕ್ಷ ತೆರಿಗೆದಾರರು ಸಲ್ಲಿಸಿದ್ದಾರೆ. ಇಷ್ಟೇ ಸಂಖ್ಯೆಯಲ್ಲಿ ಜಿಎಸ್ ಟಿಆರ್ -1ನ್ನು ಸಲ್ಲಿಸಬೇಕಾಗುತ್ತದೆ.
ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರ ಸುಮಾರು 95,000 ಕೋಟಿ ರೂಪಾಯಿ ಸಂಗ್ರಹಿಸಿದೆ.