ಆರ್ಥಿಕ ಸಲಹಾ ಮಂಡಳಿ ಮುಖ್ಯಸ್ಥ ಬಿಬೆಕ್ ದೆಬ್ರೊಯ್
ನವದೆಹಲಿ: ಆರ್ಥಿಕ ಬಲವರ್ಧನೆ ಹಾದಿಯಿಂದ ಭಾರತ ದೂರ ಸರಿಯಲು ಸಾಧ್ಯವಿಲ್ಲ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಹೇಳಿದೆ.
ಕಳೆದ ಮೂರು ವರ್ಷಗಳಲ್ಲಿ ಈ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಪ್ರಗತಿ ತೀವ್ರ ಕುಸಿತ ಕಂಡುಬಂದಿದ್ದು ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ ಹಲವು ಮಾರ್ಗಗಳನ್ನು ಪರಿಶೀಲಿಸುತ್ತಿದೆ.
ಈ ನಿಟ್ಟಿನಲ್ಲಿ ಆರ್ಥಿಕ ಸಲಹಾ ಮಂಡಳಿ ಆರಂಭದಲ್ಲಿ ಕೆಲಸ ಮಾಡಲು 10 ವಿಷಯಗಳನ್ನು ಆರಿಸಿಕೊಂಡಿದೆ. ಆರ್ಥಿಕ ಬೆಳವಣಿಗೆ, ನೌಕರಿ ಮತ್ತು ಉದ್ಯೋಗ ಸೃಷ್ಟಿ, ಅನೌಪಚಾರಿಕ ವಲಯ ಮತ್ತು ಅನೌಪಚಾರಿಕ ವಲಯದ ಏಕೀಕರಣ,ಹಣಕಾಸಿನ ಚೌಕಟ್ಟು, ಹಣಕಾಸು ನೀತಿ, ಸಾರ್ವಜನಿಕ ವೆಚ್ಚ ಮತ್ತು ಸಾರ್ವಜನಿಕ ವೆಚ್ಚದ ದಕ್ಷತೆ, ಆರ್ಥಿಕ ಆಡಳಿತದ ಸಂಸ್ಥೆಗಳು, ಕೃಷಿ ಮತ್ತು ಪಶುಸಂಗೋಪನೆ, ಬಳಕೆ ಮತ್ತು ಉತ್ಪಾದನೆಯ ಮಾದರಿಗಳು ಮತ್ತು ಸಾಮಾಜಿಕ ವಲಯಗಳನ್ನು ಅದು ಒಳಗೊಂಡಿದೆ.
ಕಠಿಣ ಆರ್ಥಿಕ ವಿಶ್ಲೇಷಣೆಯ ಆಧಾರದ ಮೇಲೆ ಹೆಚ್ಚಿನ ಸಾಮಾಜಿಕ ಮತ್ತು ಹಣಕಾಸಿನ ಸೇರ್ಪಡೆಯೊಂದಿಗೆ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗದ ವೇಗವನ್ನು ಹೆಚ್ಚಿಸಲು ಆರ್ಥಿಕ ಸಲಹಾ ಮಂಡಳಿ ಗಮನಹರಿಸಿದೆ ಎಂದು ಬಿಬೆಕ್ ದೆಬ್ರೊಯ್ ನೇತೃತ್ವದ ಮಂಡಳಿ ತಿಳಿಸಿದೆ.
ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅದರ ಪುನಶ್ಚೇತನಕ್ಕೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲು ಪ್ರಧಾನ ಮಂತ್ರಿ ಕಳೆದ ತಿಂಗಳು 26ರಂದು ಆರ್ಥಿಕ ಸಲಹಾ ಮಂಡಳಿಯನ್ನು ರಚಿಸಿದ್ದರು. ವಿತ್ತೀಯ ನೀತಿ ಕುರಿತು ಆರ್ಥಿಕ ಸಲಹಾ ಮಂಡಳಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಲಹೆ ಪಡೆಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos