ನವದೆಹಲಿ: ವಿಡಿಯೋಕಾನ್ ಗ್ರೂಪ್ ಗೆ ಸಾಲ ನೀಡುವಲ್ಲಿ ಲೋಪವೆಸಗಿದ ಆರೋಪ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್ ಎಂಡಿ ಮತ್ತು ಸಿಇಒ ಚಂದಾ ಕೊಚ್ಚಾರ್ ಅವರ ಹೆಸರನ್ನು ಈ ವಾರ ಆಯೋಜನೆಗೊಂಡಿರುವ ರಾಷ್ಟ್ರಪತಿ ಕಾರ್ಯಕ್ರಮದಿಂದ ಕೈಬಿಡಲಾಗಿದೆ.
ಏಪ್ರಿಲ್ 5ರಂದು ನಡೆಯುವ ಎಫ್ಐಸಿಸಿಐ ಮಹಿಳಾ ಸಂಘಟನೆಯ(ಎಫ್ಎಲ್ಒ) ವಾರ್ಷಿಕ ಕಾರ್ಯಕ್ರಮದಲ್ಲಿ ಚಂದಾ ಕೊಚ್ಚಾರ್ ಪಾಲ್ಗೊಳ್ಳಬೇಕಿತ್ತು. ಕಾರ್ಯಕ್ರಮದಲ್ಲಿ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಸನ್ಮಾನ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕೊಚ್ಚಾರ್ ಹೆಸರನ್ನು ಕೈಬಿಡಲಾಗಿದೆ.
ಪರಿಷ್ಕೃತ ಕಾರ್ಯಕ್ರಮ ಪಟ್ಟಿಯಲ್ಲಿ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಎಫ್ಎಲ್ಇ ಕಾರ್ಯನಿರ್ವಾಹಕ ನಿರ್ದೇಶಕಿ ರಶ್ಮಿ ಸರೀತಾ ಹೇಳಿದ್ದಾರೆ. ಆದರೆ, ಹೆಸರು ಕೈಬಿಡಲು ಕಾರಣವನ್ನು ಅವರು ಸ್ಪಷ್ಟಪಡಿಸಿಲ್ಲ.
ಐಸಿಐಸಿಐ ಬ್ಯಾಂಕಿನಲ್ಲಿ 3,250 ಕೋಟಿ ಸಾಲ ರುಪಾಯಿ ಪಡೆದಿದ್ದ ವಿಡಿಯೋಕಾನ್ ಸಂಸ್ಥೆ ಮುಖ್ಯಸ್ಥ ವೇಣುಗೋಪಾಲ್ ದೂತ್ ಮತ್ತು ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ನಡುವೆ ಪಾಲುದಾರಿಕೆ ವಹಿವಾಟು ನಡೆದಿದೆ. ಈ ವಹಿವಾಟು ಅನುಮಾನಸ್ಪದವಾಗಿದೆ ಎಂದು 'ಇಂಡಿಯನ್ ಎಕ್ಸ್ಪ್ರೆಸ್' ತನಿಖಾ ವರದಿ ಪ್ರಕಟಿಸಿತ್ತು. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಸಹ ದೀಪಕ್ ಕೊಚ್ಚಾರ್ ನೋಟಿಸ್ ನೀಡಿದೆ.