ಮುಂಬೈ: ವಿಡಿಯೋಕಾನ್ ಗ್ರೂಪ್ ಐಸಿಐಸಿಐ ಬ್ಯಾಂಕ್ ಗೆ 3,250 ಕೋಟಿ ರುಪಾಯಿ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಎಂಡಿ ಮತ್ತು ಸಿಇಒ ಚಂದಾ ಕೊಚ್ಚಾರ್ ಅವರ ಅಳಿಯ ರಾಜೀವ್ ಕೊಚ್ಚಾರ್ ಅವರನ್ನು ಸಿಬಿಐ ಗುರುವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಾಗಿ ನಾವು ರಾಜೀವ್ ಕೊಚ್ಚಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಸಿಬಿಐ ಅಧಿಕಾರಿಗಳು ಐಎಎನ್ಎಸ್ ಗೆ ತಿಳಿಸಿದ್ದಾರೆ.
ಐಸಿಐಸಿಐ ಬ್ಯಾಂಕಿನಲ್ಲಿ 3,250 ಕೋಟಿ ಸಾಲ ರುಪಾಯಿ ಪಡೆದಿದ್ದ ವಿಡಿಯೋಕಾನ್ ಸಂಸ್ಥೆ ಮುಖ್ಯಸ್ಥ ವೇಣುಗೋಪಾಲ್ ದೂತ್ ಮತ್ತು ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ನಡುವೆ ಪಾಲುದಾರಿಕೆ ವಹಿವಾಟು ನಡೆದಿದೆ ಎಂಬ ಆರೋಪದ ಮೇಲೆ ಸಿಬಿಐ ದೀಪಕ್ ಕೊಚ್ಚಾರ್ ಮತ್ತು ವಿಡಿಯೋಕಾನ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಾಥಮಿಕ ತನಿಖೆ ಆರಂಭಿಸಿದೆ.
ಚಂದಾ ಕೊಚ್ಚರ್ ಅವರು ವಿಡಿಯೋಕಾನ್ ಗ್ರೂಪ್ ಗೆ ಸಾಲ ನೀಡುವಲ್ಲಿ ಲೋಪವೆಸಗಿದ್ದು, ಈ ವಹಿವಾಟು ಅನುಮಾನಸ್ಪದವಾಗಿದೆ ಎಂದು 'ಇಂಡಿಯನ್ ಎಕ್ಸ್ಪ್ರೆಸ್' ತನಿಖಾ ವರದಿ ಪ್ರಕಟಿಸಿತ್ತು. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಸಹ ದೀಪಕ್ ಕೊಚ್ಚಾರ್ ನೋಟಿಸ್ ನೀಡಿದೆ.