ವಾಣಿಜ್ಯ

ಬೆಂಗಳೂರಿನಲ್ಲಿ ಹಲವು ನೌಕರರಿಗೆ ಉದ್ಯೋಗವಿಲ್ಲ, ಸಂಬಳ ಕಡಿತ; ಇದು ಆರ್ಥಿಕ ಕುಸಿತದ ಹೊಡೆತ!

Sumana Upadhyaya

ಬೆಂಗಳೂರು: ಆರ್ಥಿಕ ಕುಸಿತ ಕೇವಲ ದೊಡ್ಡ ದೊಡ್ಡ ಉದ್ಯಮ ಮತ್ತು ಕೈಗಾರಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಮಧ್ಯಮ ಮತ್ತು ಸಣ್ಣ ಗಾತ್ರದ ಕೈಗಾರಿಕೆಗಳಲ್ಲಿ, ಕಂಪೆನಿಗಳಲ್ಲಿ ಉದ್ಯೋಗಿಗಳನ್ನು ಬೃಹತ್ ಸಂಖ್ಯೆಯಲ್ಲಿ ಕೆಲಸದಿಂದ ತೆಗೆದುಹಾಕುವ ಅಥವಾ ಅವರ ವೇತನದಲ್ಲಿ ಶೇಕಡಾ 30ರಷ್ಟು ಕಡಿತ ಮಾಡುವ ಮೂಲಕ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ.


ಹಲವು ನೌಕರರು ರಾಜ್ಯ ಕಾರ್ಮಿಕ ಇಲಾಖೆಯ ಕದತಟ್ಟಿ ತಮ್ಮ ಕಂಪೆನಿಯಲ್ಲಿ ಉದ್ಯೋಗ ಮತ್ತು ವೇತನಕ್ಕೆ ಭದ್ರತೆ ಒದಗಿಸಿಕೊಡುವಂತೆ ಮೊರೆ ಹೋಗಿದ್ದಾರೆ. 


ಉದ್ಯೋಗಿಗಳಿಗೆ ವೇತನ ಕಡಿತ ಮಾಡುವುದು ಅಥವಾ ಕೆಲಸದಿಂದ ತೆಗೆದುಹಾಕುವುದು ತಮ್ಮ ಗಮನಕ್ಕೆ ಬಂದಿದೆ ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಕಂಪೆನಿಗಳು, ಕೈಗಾರಿಕೋದ್ಯಮಿಗಳ ಸಿಬ್ಬಂದಿ ಮತ್ತು ಮಾಲೀಕರ ಜೊತೆ ಚರ್ಚೆ ಮಾಡಿ ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತೇನೆ ಎಂದು ಕಾರ್ಮಿಕ ಇಲಾಖೆ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ. 


ಆರ್ಥಿಕ ಕುಸಿತದಿಂದ ತೀವ್ರ ಹೊಡೆತ ಬಿದ್ದಿರುವ ವಲಯಗಳೆಂದರೆ ವಾಹನ ಉದ್ಯಮಗಳು, ಜವಳಿ ಮತ್ತು ಉತ್ಪಾದನೆ ವಲಯಗಳು. ಆರ್ಥಿಕ ಕುಸಿತ ಎಷ್ಟರ ಮಟ್ಟಿಗೆ ಇಲ್ಲಿ ಪರಿಣಾಮ ಬೀರಿದೆಯೆಂದರೆ ಪೀಣ್ಯ ಕೈಗಾರಿಕಾ ವಲಯದಲ್ಲಿ ಹಲವು ಕೈಗಾರಿಕೆಗಳಲ್ಲಿ ಒಂದು ಶಿಫ್ಟ್ ನಲ್ಲಿ ಕೆಲಸ ಸಿಗಲು ನೌಕರರಿಗೆ ಕಷ್ಟವಾಗುತ್ತಿದೆ. ಹಲವು ಉದ್ಯೋಗಿಗಳಿಗೆ ಕೆಲಸವೇ ಇಲ್ಲದಾಗಿದೆ. ಆದರೂ ಮಾಲೀಕರು ನೌಕರರಿಗೆ ವೇತನ ನೀಡಬೇಕಾಗಿದೆ.


ವಾಹನ, ಉತ್ಪಾದನೆ ವಲಯಗಳಲ್ಲಿನ ಕಂಪೆನಿಗಳಲ್ಲಿ ಕೆಲಸ ತೊರೆಯುವಂತೆ ಸುಮಾರು ಸಾವಿರ ನೌಕರರಿಗೆ ಸೂಚಿಸಲಾಗಿದೆ. ಕೈಗಾರಿಕೆಗಳ ಮಾಲೀಕರು, ಕಂಪೆನಿ ಕಡೆಯಿಂದ ನಮಗೆ ಗೊತ್ತಾಗುವುದಿಲ್ಲ, ನೌಕರರು ಕೆಲಸ ಕಳೆದುಕೊಂಡು ಅಥವಾ ವೇತನ ಸಿಗದೆ ನಮ್ಮಲ್ಲಿಗೆ ಬಂದಾಗಲೇ ನಮಗೆ ಪರಿಸ್ಥಿತಿ ಗೊತ್ತಾಗುವುದು ಎಂದು ಕಾರ್ಮಿಕ ಇಲಾಖೆಯ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ. 

SCROLL FOR NEXT