ವಾಣಿಜ್ಯ

ಉದ್ಯೋಗ ಸೃಷ್ಟಿ, ಆರ್ಥಿಕ ಕುಸಿತದ ಬಗ್ಗೆ ಪ್ರಮುಖ ಉದ್ಯಮಿಗಳ ಜತೆ ಪ್ರಧಾನಿ ಮೋದಿ ಚರ್ಚೆ

Lingaraj Badiger

ನವದೆಹಲಿ: ರತನ್ ಟಾಟಾ, ಅನಿಲ್ ಅಂಬಾನಿ, ಗೌತಮ್ ಅದಾನಿ, ಆನಂದ್‌ ಮಹೀಂದ್ರಾ, ಅನಿಲ್‌ ಅಗರ್ವಾಲ್‌ ಹಾಗೂ ಸುನೀಲ್ ಮಿತ್ತಲ್ ಸೇರಿದಂತೆ ಹಲವು ಖ್ಯಾತ ಉದ್ಯಮಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆ ಸುಧಾರಿಸುವ ಬಗ್ಗೆ ಸಲಹೆಗಳನ್ನು ಪಡೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಲಿಸುವ ಹಾಗೂ ಸಲಹೆಗಳನ್ನು ಪಡೆದುಕೊಳ್ಳುವ ಮೂಡ್ ನಲ್ಲಿದ್ದರು. ಟೆಲಿಕಾಂ ಮತ್ತು ಮೂಲಸೌಕರ್ಯದಂತಹ ಪ್ರಮುಖ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಸಲಹೆಗಳನ್ನು ಕೇಳಿದರು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಜೆಟ್‌ಗೂ ಮುನ್ನ, ದೇಶದ ಆರ್ಥಿಕತೆ ಬಗ್ಗೆ ಹಾಗೂ ಆರ್ಥಿಕ ಪ್ರಗತಿಗೆ, ಉದ್ಯೋಗ ಸೃಷ್ಟಿಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಪ್ರಧಾನಿ ಮೋದಿ ಅವರು ಉದ್ಯಮ ವಲಯದ ದಿಗ್ಗಜರೊಂದಿಗೆ ಚರ್ಚಿಸಿದ್ದಾರೆ.

ಇದಕ್ಕು ಮುನ್ನ ಕ್ರಿರ್ಲೋಸ್ಕರ್‌ ಸಹೋದರರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ತಮ್ಮ ಸರ್ಕಾರದ ನೈಜ ಉದ್ದೇಶಗಳನ್ನು ಉದ್ಯಮಿಗಳಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ.

ಉದ್ದಿಮೆಗಳು ಯಾವುದೇ ಭಯ ಹಾಗೂ ಅಡೆತಡೆಯಿಲ್ಲದೇ ಪಾರದರ್ಶಕ ಪರಿಸರದಲ್ಲಿ ಸಂಪತ್ತು ಸೃಷ್ಟಿಸುವಂತೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಅಲ್ಲದೆ ಕಾನೂನುಗಳ ಜಾಲದಿಂದ ಉದ್ದಿಮೆಗಳನ್ನು ಪಾರು ಮಾಡುವ ಪ್ರಯತ್ನವನ್ನೂ ನಡೆಸುತ್ತಿದ್ದೇವೆ. ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆ ತರಲಾಗಿದೆ, ಕಾರ್ಪೊರೇಟ್‌ ತೆರಿಗೆಯನ್ನೂ ಇಳಿಸಲಾಗಿದೆ ಎಂದೂ ಮೋದಿ ತಿಳಿಸಿದ್ದಾರೆ.

SCROLL FOR NEXT