ವಾಣಿಜ್ಯ

ಹಣ ಪಾವತಿಸಿದ ಕೆಲವೇ ಗಂಟೆಗಳಲ್ಲಿ ಏರ್‌ಟೆಲ್ ಗೆ ಸ್ಪೆಕ್ಟ್ರಮ್ ಹಂಚಿಕೆ ಪತ್ರ: ವ್ಯವಹಾರ ಈಗ ಸುಲಭ ಎಂದ ಸುನಿಲ್ ಮಿತ್ತಲ್

Lingaraj Badiger

ನವದೆಹಲಿ: ಟೆಲಿಕಾಂ ಇಲಾಖೆಗೆ ಮುಂಗಡ ಪಾವತಿ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರ್ತಿ ಏರ್‌ಟೆಲ್ ಸ್ಪೆಕ್ಟ್ರಮ್ ಹಂಚಿಕೆ ಪತ್ರವನ್ನು ಸ್ವೀಕರಿಸಿದೆ ಎಂದು ಭಾರ್ತಿ ಎಂಟರ್‌ಪ್ರೈಸಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಗುರುವಾರ ಹೇಳಿದ್ದಾರೆ.

ಮುಂಗಡ ಪಾವತಿ ಮಾಡುವ ದಿನದಂದು ಟೆಲಿಕಾಂ ಇಲಾಖೆ, ತರಂಗಾಂತರ ಹಂಚಿಕೆ ಪತ್ರವನ್ನು ಹಸ್ತಾಂತರಿಸಿದ್ದು ಇದೇ ಮೊದಲು. ಟೆಲಿಕಾಂ ಇಲಾಖೆಯೊಂದಿಗಿನ ನನ್ನ 30 ವರ್ಷಗಳ ಅನುಭವದಲ್ಲಿ ಇದೇ ಮೊದಲ ಬಾರಿಗೆ ಹಣ ಪಾವತಿಸಿದ ಕೆಲವೇ ಗಂಟೆಗಳಲ್ಲಿ ಹಂಚಿಕೆ ಪತ್ರ ನೀಡಲಾಗಿದೆ ಎಂದು ಮಿತ್ತಲ್ ತಿಳಿಸಿದ್ದಾರೆ.

"ಏರ್‌ಟೆಲ್ 5 ಜಿ ಸ್ಪೆಕ್ಟ್ರಮ್ ಖರೀದಿ ಸಂಬಂಧ 8,312.4 ಕೋಟಿ ರೂಪಾಯಿಗಳನ್ನು ಪಾವತಿಸಿದೆ ಮತ್ತು ಗೊತ್ತುಪಡಿಸಿದ ಆವರ್ತನ ಬ್ಯಾಂಡ್‌ಗಳ ಹಂಚಿಕೆ ಪತ್ರವನ್ನು ಕೆಲವೇ ಗಂಟೆಗಳಲ್ಲಿ ನೀಡಲಾಯಿತು. ಭರವಸೆ ನೀಡಿದಂತೆ ಸ್ಪೆಕ್ಟ್ರಮ್‌ನೊಂದಿಗೆ ಇ ಬ್ಯಾಂಡ್ ಹಂಚಿಕೆಯನ್ನು ನೀಡಲಾಗಿದೆ. ಯಾವುದೇ ಗಡಿಬಿಡಿಯಿಲ್ಲ, ಯಾವುದೇ ಫಾಲೋ ಅಪ್ ಇಲ್ಲ, ಯಾವುದೇ ಕಾರಿಡಾರ್‌ ಸುತ್ತಿಲ್ಲ. ಈಗ ವ್ಯಾಪಾರ ಮಾಡುವುದು ಸುಲಭವಾಗಿದೆ" ಎಂದು ಮಿತ್ತಲ್ ಅವರು ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

ಟೆಲಿಕಾಂ ಇಲಾಖೆಯು ಸೇವಾ ಪೂರೈಕೆದಾರರಾದ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ಅದಾನಿ ಡೇಟಾ ನೆಟ್‌ವರ್ಕ್ಸ್ ಮತ್ತು ವೊಡಾಫೋನ್ ಐಡಿಯಾದಿಂದ ಇತ್ತೀಚಿನ ಹರಾಜಿನಲ್ಲಿ ಗೆದ್ದಿರುವ ಸ್ಪೆಕ್ಟ್ರಮ್‌ಗಾಗಿ ಸುಮಾರು 17,876 ಕೋಟಿ ರೂಪಾಯಿಗಳನ್ನು ಪಾವತಿಸಿವೆ.

ಕೆಲಸದಲ್ಲಿ ನಾಯಕತ್ವ. ಏನು ಬದಲಾವಣೆ! ಇದು ರಾಷ್ಟ್ರವನ್ನು ಪರಿವರ್ತಿಸುವ ಬದಲಾವಣೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಅದರ ಕನಸುಗಳಿಗೆ ಇದು ಶಕ್ತಿ ನೀಡುತ್ತದೆ ಎಂದು ಮಿತ್ತಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SCROLL FOR NEXT