ಬಾಲಿವುಡ್

ಕಪಿಲ್ ಶರ್ಮಾ ಶೋಗೆ ಸಣ್ಣ ವಿರಾಮ: ಕಾರಣ ಏನು ಗೊತ್ತಾ?

Sumana Upadhyaya
ಮುಂಬೈ: ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಕಪಿಲ್ ಶರ್ಮಾ ಶೋ ಪ್ರಸಾರಕ್ಕೆ ಶಾರ್ಟ್ ಬ್ರೇಕ್ ಬೀಳಲಿದೆ. ಶೋನ ನಿರೂಪಕ, ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅವರಿಗೆ ಹಠಾತ್ತಾಗಿ ಪದೇ ಪದೇ ಆರೋಗ್ಯ ಕೆಡುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. 
ಇತ್ತೀಚೆಗೆ ಬಾದ್ ಶಾಹೊ ಚಿತ್ರದ ಪ್ರಮೋಶನ್ ಗೆಂದು ನಟ ಅಜಯ್ ದೇವಗನ್ ಮತ್ತು ತಂಡ ಸೆಟ್ ಗೆ ಹೋಗಿದ್ದರು. ಆದರೆ ಕಪಿಲ್ ಶರ್ಮಾಗೆ ಹಠಾತ್ತನೆ ಆರೋಗ್ಯ ಹದಗೆಟ್ಟಿದ್ದರಿಂದ ಚಿತ್ರತಂಡದವರು ವಾಪಸ್ ಬರಬೇಕಾಯಿತು. ಇತ್ತೀಚೆಗೆ ಕಪಿಲ್ ಶರ್ಮಾ ಆರೋಗ್ಯವಿಲ್ಲದೆ ಕೆಲವು ಶೋಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂತು. ಹೀಗಾಗಿ ಕಪಿಲ್ ಶರ್ಮಾ ಮತ್ತು ಚಾನೆಲ್ ನವರು ಮಾತುಕತೆ ನಡೆಸಿ ಸದ್ಯಕ್ಕೆ ಶೋವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಹೇಳಿಕೆ ಹೊರಡಿಸಿರುವ ಶೋವನ್ನು ಪ್ರಸಾರ ಮಾಡುವ ಚಾನೆಲ್, ಪರಸ್ಪರ ಮಾತುಕತೆ ಮೂಲಕ ಕಾರ್ಯಕ್ರಮಕ್ಕೆ ಸಣ್ಣ ವಿರಾಮ ಹಾಕಲು ನಿರ್ಧರಿಸಿದ್ದೇವೆ. ಕಪಿಲ್ ಅವರು ಸಂಪೂರ್ಣ ಗುಣಮುಖರಾದ ನಂತರ ಮತ್ತೆ ಶೂಟಿಂಗ್ ಪ್ರಾರಂಭಿಸುತ್ತೇವೆ.ನಾವು ಸಂಬಂಧಕ್ಕೆ ಬೆಲೆ ನೀಡುತ್ತಿದ್ದು ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇವೆ ಎಂದು ಹೇಳಿದೆ.
ಇತ್ತೀಚೆಗೆ ಅಜಯ್ ದೇವಗನ್ ಮತ್ತು ತಂಡ ಕಪಿಲ್ ಶರ್ಮಾ ಶೋ ಸೆಟ್ ಗೆ ಹೋಗಿದ್ದರು. ಅಲ್ಲಿ ಕೋಪಗೊಂಡು ಅರ್ಧಕ್ಕೆ ವಾಪಾಸಾಗಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿತ್ತು.
ಈ ಬಗ್ಗೆ ಸ್ವತಃ ನಟ ಅಜಯ್ ದೇವಗನ್ ಅವರೇ ಹೇಳಿಕೆ ನೀಡಿದ್ದರು. ನಾನು ಸಿಟ್ಟಿನಿಂದ ಶೋ ಬಿಟ್ಟು ಬಂದಿರಲಿಲ್ಲ. ನಾವು ಹೋದಾಗ ಕಪಿಲ್ ಶರ್ಮಾ ಇನ್ನೂ ಬಂದಿರಲಿಲ್ಲ. ಅವರಿಗೆ ಏನೋ ಸಮಸ್ಯೆಯಾಗಿರಬೇಕು. ಏನೆಂದು ಗೊತ್ತಾಗಲಿಲ್ಲ. ಮುಂದೆ ನಾನು ಅವರ ಜೊತೆ ಮಾತನಾಡುತ್ತೇನೆ ಎಂದಿದ್ದರು.
ಈ ವಾರಾಂತ್ಯ ಹೊಸ ಎಪಿಸೋಡ್ ಇಲ್ಲ: ಕಪಿಲ್ ಶರ್ಮಾ ಶೋ ಸ್ಥಗಿತಗೊಂಡಿರುವುದರಿಂದ ಈ ವಾರಾಂತ್ಯ ಹೊಸ ಕಂತು ಪ್ರಸಾರವಾಗುವುದಿಲ್ಲ.  ನಟ ಅಜಯ್ ದೇವಗನ್ ಅವರ ಬಾದ್ ಶಾಹೊ ಚಿತ್ರದ ಪ್ರಮೋಶನ್ ಎಪಿಸೋಡ್ ಈ ವಾರ  ಪ್ರಸಾರವಾಗಬೇಕಿತ್ತು. ಆದರೆ ಕಳೆದ ವಾರ ಅದು ಶೂಟ್ ಆಗದ್ದರಿಂದ ಈ ವಾರ ಪ್ರಸಾರವಾಗುವುದಿಲ್ಲ. ಹಳೆಯ ಕಂತುಗಳೇ ಪ್ರಸಾರವಾಗಲಿದೆ ಎಂದು ಚಾನೆಲ್ ತಿಳಿಸಿದೆ.
SCROLL FOR NEXT