ನವದೆಹಲಿ: ಬಾಲಿವುಡ್ ನ ವಿವಾದಿತ ಚಿತ್ರ ಇಂದು ಸರ್ಕಾರ್ ಬಿಡುಗಡೆಯಾಗಲು ಇದ್ದ ಅಡತಡೆ ನಿವಾರಣೆಯಾಗಿದೆ. ನಾಳೆ ದೇಶಾದ್ಯಂತ ಬಿಡುಗಡೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಕಿರಿಯ ಪುತ್ರ ರಾಜಕಾರಣಿ ದಿವಂಗತ ಸಂಜಯ್ ಗಾಂಧಿಯವರ ಮಗಳು ಎಂದು ಹೇಳಿಕೊಳ್ಳುವ ಮಹಿಳೆ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದೆಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ದೀಪಕ್ ಮಿಶ್ರಾ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರನ್ನೊಳಗೊಂಡ ವಿಭಾಗೀಯ ಪೀಠ, ಚಿತ್ರ ಕಾನೂನಿನ ಚೌಕಟ್ಟಿನೊಳಗೆ ಕಲಾತ್ಮಕ ಅಭಿವ್ಯಕ್ತಿಯನ್ನು ಹೊಂದಿದೆ. ನಿಗದಿಯಂತೆ ನಾಳೆ ಅದು ಬಿಡುಗಡೆಯಾಗುವುದನ್ನು ತಡೆಹಿಡಿಯಲು ಯಾವುದೇ ಸಮರ್ಥನೆಯಿಲ್ಲ ಎಂದು ಹೇಳಿದೆ. ಮಧುರ್ ಭಂಡಾರ್ಕರ್ ನಿರ್ದೇಶಿಸಿರುವ ಚಿತ್ರ 1975ರಿಂದ 1977ರವರೆಗಿನ ತುರ್ತು ಪರಿಸ್ಥಿತಿಯ ಅವಧಿಯ ಕಥೆಯನ್ನು ಹೊಂದಿದೆ.
ಮಧು ಭಂಡಾರ್ಕರ್ ಅವರ ಪರ ವಕೀಲ ನ್ಯಾಯಾಲಯದ ಮುಂದೆ, ಕೇಂದ್ರ ಚಲನಚಿತ್ರ ಪ್ರಮಾಣ ಮಂಡಳಿಯ ಸಮಿತಿ ಸಲಹೆ ನೀಡಿದಂತೆ ಕೆಲವು ಸನ್ನಿವೇಶಗಳನ್ನು ತೆಗೆದುಹಾಕಲಾಗಿದೆ. ಚಿತ್ರದಲ್ಲಿನ ಪಾತ್ರಗಳನ್ನು ಯಾವುದೇ ಜೀವಂತ ಅಥವಾ ಸತ್ತು ಹೋಗಿರುವ ವ್ಯಕ್ತಿ ಜೊತೆ ಹೋಲಿಕೆ ಮಾಡಲಾಗಿಲ್ಲ ಎಂದು ಹೇಳಿದ್ದರು.
ವಾದ ಆಲಿಸಿದ ತ್ರಿಸದಸ್ಯರ ನ್ಯಾಯಪೀಠ, ಚಿತ್ರದ ಪ್ರದರ್ಶನಕ್ಕೆ ಸಂಬಂಧಪಟ್ಟಂತೆ ಕಾನೂನು ಚೌಕಟ್ಟಿನೊಳಗೆ ಚಿತ್ರ ಕಲಾತ್ಮಕ ಅಭಿವ್ಯಕ್ತಿಯನ್ನು ಹೊಂದಿದೆ. ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡುವ ಯಾವುದೇ ಸಮರ್ಥನೆಗಳಿಲ್ಲ ಎಂದು ಹೇಳಿದೆ.
ಅಲ್ಲದೆ ಮುಂಬೈ ಹೈಕೋರ್ಟ್ ಜುಲೈ 24ರಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಮಹಿಳೆಯ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಕೂಡ ನ್ಯಾಯಪೀಠ ಹೇಳಿತು.
ಸಂಜಯ್ ಗಾಂಧಿಯವರ ಮಗಳು ಎಂದು ಹೇಳಿಕೊಳ್ಳುವ ಪ್ರಿಯಾ ಸಿಂಗ್ ಪೌಲ್ ಬಾಂಬೆ ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಚಿತ್ರದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಮತ್ತು ಅವರ ಪುತ್ರ ಸಂಜಯ್ ಗಾಂಧಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಂಯೋಜಿತ ಸತ್ಯಗಳು ಚಿತ್ರದಲ್ಲಿದ್ದು ಅದರ ಪ್ರದರ್ಶನಕ್ಕೆ ತಡೆಯೊಡ್ಡಬೇಕೆಂದು ಪ್ರಿಯಾ ಸಿಂಗ್ ಪೌಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.