ಮುಂಬೈ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಪದ್ಮಾವತಿ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ನಟ ಶಾಹಿದ್ ಕಪೂರ್ ಹೇಳಿಕೆ ನೀಡಿದ್ದು, ಮೊದಲು ಚಿತ್ರ ನೋಡಿ, ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಪ್ರೇಕ್ಷಕರರಲ್ಲಿ ಮನವಿ ಮಾಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೆ ಬಿಜೆಪಿ, ಹಿಂದೂಪರ ಸಂಘಟನೆಗಳೂ ಸೇರಿದಂತೆ ರಾಜಸ್ಥಾನದ ರಜಪೂತ ರಾಜವಂಶಸ್ಥರಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಚಿತ್ರದ ಬಿಡುಗಡೆಗೆ ಅನುವು ಮಾಡಿಕೊಡಬಾರದು ಎಂದು ರಾಜವಂಶಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಚಿತ್ರದ ನಟ ಶಾಹಿದ್ ಕಪೂರ್ ಹೇಳಿಕೆ ನೀಡಿದ್ದು, ಚಿತ್ರದಲ್ಲಿ ರಾಣಿ ಪದ್ಮಾವತಿ ಅವರನ್ನು ಅವಹೇಳನ ಮಾಡುವ ಯಾವುದೇ ರೀತಿಯ ಸನ್ನಿವೇಶವಿಲ್ಲ. ಪ್ರತಿಭಟನಾಕಾರರು ಮೊದಲು ಚಿತ್ರ ನೋಡಲಿ ಆ ಮೇಲೆ ನಿರ್ಧಾರ ಕೈಗೊಳ್ಳಲಿ. ಅಲ್ಲಿಯವರೆಗೂ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ನಮಗೂ ಒಂದು ಅವಕಾಶ ಕೊಡಿ..ಚಿತ್ರ ಬಿಡುಗಡೆಗೂ ಮೊದಲೇ ಯಾವುದೇ ಪೂರ್ವಾಗ್ರಹ ಯೋಚನೆಗಳು ಬೇಡ. ಎಲ್ಲರ ಭಾವನೆಗಳನ್ನೂ ಅರ್ಥೈಸಿಕೊಂಡು ನಾವು ಚಿತ್ರ ನಿರ್ಮಾಣ ಮಾಡಿದ್ದೇವೆ. ಜನ ಏನೇ ಮಾತನಾಡಲಿ. ಆದರೆ ಮೊದಲು ನೀವು ಚಿತ್ರ ನೋಡಿ ಬಳಿಕ ಒಂದು ನಿರ್ಧಾರಕ್ಕೆ ಬನ್ನಿ ಎಂದು ಶಾಹಿದ್ ಕಪೂರ್ ಮನವಿ ಮಾಡಿದ್ದಾರೆ.
ಇನ್ನು ಚಿತ್ರದಲ್ಲಿ ನಟ ಶಾಹಿದ್ ಕಪೂರ್ ರಾಜಾ ಮಹಾರಾವಾಲ್ ರತನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ದೀಪಿಕಾ ರತನ್ ಸಿಂಗ್ ರ ರಾಣಿ ಪದ್ಮಾವತಿಯಾಗಿ ಅಭಿನಯಿಸಿದ್ದಾರೆ. ಇನ್ನು ನಟ ರಣ್ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.